News

ರೈತರಿಗೆ 530 ಕೋಟಿ ರೂಪಾಯಿ ಹಾಲಿನ ಪ್ರೋತ್ಸಾಹಧನ ಬಿಡುಗಡೆ

15 July, 2020 12:47 PM IST By:

ಕಳೆದ ಫೆಬ್ರುವರಿಯಿಂದ ಜುಲೈ 4 ರವರೆಗೆ ಹಾಲು ಉತ್ಪಾದಿಸುವ ರೈತರಿಗೆ ನೀಡಬೇಕಾಗಿದ್ದ 530 ಕೋಟಿ ರೂಪಾಯಿ ಪ್ರೋತ್ಸಾಹಧನ (milk pending amount released soon) ಸರ್ಕಾರದಿಂದ ಬಿಡುಗಡೆಯಾಗಿದ್ದು, ಶೀಘ್ರವೇ ರೈತರ ಖಾತೆಗಳಿಗೆ ಜಮಾ ಆಗಲಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಅವರು ಮಂಗಳವಾರ ವಿವಿಧ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಜತೆ ವಿಡಿಯೊ ಸಂವಾದ ನಡೆಸಿ ಈ ವಿಷಯ ತಿಳಿಸಿದರು.

ಈಗ ವಿವಿಧ ಹಾಲು ಒಕ್ಕೂಟಗಳಿಂದ (KMF) ಕೆಎಂಎಫ್ ನಲ್ಲಿ ಪ್ರತಿದಿನ 88 ಲಕ್ಷ ಲೀಟರ್ ಹಾಲು ದಾಖಲೆ ಮಟ್ಟದಲ್ಲಿ ಶೇಖರಣೆಯಾಗುತ್ತಿದ್ದು, ಕಳೆದ ವರ್ಷಕ್ಕಿಂತ 6 ಲಕ್ಷ ಲೀ ಹಾಲಿನ ಶೇಖರಣೆ ಹೆಚ್ಚಾಗಿದೆ. ಕಳೆದ ಮಾರ್ಚ ತಿಂಗಳಿಗೆ ಹೋಲಿಸಿದಾಗ ಪ್ರತಿದಿನ ಸುಮಾರು 20 ಲಕ್ಷ ಲೀಟರ್ ಹಾಲು ಹೆಚ್ಚಾಗಿದೆ ಎಂದು ಹೇಳಿದರು.

ಕೋವಿಡ್‌–19 ನಿಂದಾಗಿ ಹಾಲು, ಮೊಸರಿನ ಮಾರಾಟ ಕುಸಿತವಾಗಿದೆ. ಪ್ರತಿ ದಿನ 10 ರಿಂದ 12 ಲಕ್ಷ ಲೀಟರ್‌ನಷ್ಟು ಹಾಲು‌ (milk) ಮಾರಾಟ ಕಡಿಮೆಯಾಗಿದೆ. ಕ್ಷೀರ ಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಪ್ರತಿ ತಿಂಗಳು ವಿತರಿಸುತ್ತಿದ್ದ 2 ಸಾವಿರ ಮೆಟ್ರಿಕ್ ಟನ್‌ ಹಾಲಿನ ಪುಡಿ ಕೂಡ ಶಾಲೆಗಳು ಮುಚ್ಚಿದ್ದರಿಂದ ವಿಲೇವಾರಿ ಆಗುತ್ತಿಲ್ಲ ಎಂದು ಹೇಳಿದರು.

ಹಾಲು ಶೇಖರಣೆ ಹೆಚ್ಚಾಗಿದ್ದು, ಪ್ರತಿ ದಿನ 35 ಲಕ್ಷ ಲೀಟರ್‌ಗಳಷ್ಟು ಹೆಚ್ಚುವರಿ ಹಾಲನ್ನು ಹಾಲಿನ ಪುಡಿ ಮತ್ತು ಬೆಣ್ಣೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದ ಪ್ರತಿ ನಿತ್ಯ 305 ಮೆಟ್ರಿಕ್ ಟನ್‌ ಹಾಲಿನ ಪುಡಿ ಮತ್ತು 150 ರಿಂದ 160 ಮೆಟ್ರಿಕ್‌ ಟನ್‌ ಬೆಣ್ಣೆ ಉತ್ಪಾದನೆಯಾಗಿ ದಾಸ್ತಾನು (stock) ಉಳಿಯುವಂತಾಗಿದೆ. ಇದೇ ಸ್ಥಿತಿ ಮುಂದುವರಿದರೆ ಆರ್ಥಿಕವಾಗಿ ಸಂಕಷ್ಟಕ್ಕೆ ತುತ್ತಾಗಬೇಕಾಗುತ್ತದೆ ಎಂದರು.

ಲಾಕ್‌ಡೌನ್ ಮತ್ತೆ ವಿಸ್ತರಣೆಯಾಗುತ್ತಿರುವುದರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಹೆಚ್ಚಳ ಕಷ್ಟ ಸಾಧ್ಯವಾಗುತ್ತಿದೆ. ಹಾಲಿನ ಪುಡಿ (milk power) ಮತ್ತು ಬೆಣ್ಣೆ ದರಗಳು ದಿನವೂ ಇಳಿಕೆಯಾಗುತ್ತಿದ್ದು, ಪ್ರಸ್ತುತ ಹಾಲಿನ ಪುಡಿ ದರವು ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ 130 ರೂಪಾಯಿ ಇಳಿಕೆಯಾಗಿದೆ.  ಬೆಣ್ಣೆ ಪ್ರತಿ ಕೆಜಿಗೆ 207 ರೂಪಾಯಿಗೆ ಕುಸಿದಿದೆ.ಎಂದರು.

ಹಾಲನ್ನು ಹೊರ ರಾಜ್ಯಗಳಿಗೆ ರವಾನಿಸಲು ಕಷ್ಟಸಾಧ್ಯವಿದ್ದರೂ ಕೇರಳ ರಾಜ್ಯಕ್ಕೆ ವಿಷು ಹಬ್ಬದ ಪ್ರಯುಕ್ತ ಹೆಚ್ಚಿನ ಹಾಲಿನ ಬೇಡಿಕೆ ಬಂದಿದ್ದು, ಅಂದಾಜು 15 ಲಕ್ಷ ಲೀಟರ್ ಹಾಲನ್ನು ರವಾನಿಸಲಾಗಿದೆ. ಆಂದ್ರಪ್ರದೇಶದ ಕೋರಿಕೆಯಂತೆ ಅಲ್ಲಿನ ಅಂಗನವಾಡಿ ಮಕ್ಕಳಿಗೆ ಪ್ರತಿ ತಿಂಗಳಿಗೆ 56 ಲಕ್ಷ ಲೀ. ಹಾಲನ್ನು ಸರಬರಾಜು ಮಾಡುತ್ತಿದೆ. ಅದರಂತೆ ತೆಲಂಗಾಣ ರಾಜ್ಯಕ್ಕೂ ಸಹ 20 ಲಕ್ಷ ಲೀಟರ್ ಹಾಲನ್ನು ಸರಬರಾಜು (milk supply) ಮಾಡಲಾಗುತ್ತಿದೆ ಎಂದು ಹೇಳಿದರು.

ಕೆಎಂಎಫ್ (Karnataka Milk Federation) ವತಿಯಿಂದ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಮತಿಯನ್ನು ರಚಿಸಲಾಗಿದ್ದು, ಒಕ್ಕೂಟ ಮತ್ತು ಘಟಕಗಳು ವೆಚ್ಚ ಕಡಿಮೆ ಮಾಡುವ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಸೂಚಿಸಲಾಗಿದೆ. ಆದ್ದರಿಂದ ರೈತರಿಗೆ ಮತ್ತು ಒಕ್ಕೂಟಗಳಿಗೆ ನಷ್ಟವಾಗದಂತೆ ಕಾರ್ಯಕ್ರಮಗಳನ್ನು ರೂಪಿಸಲು ಒಕ್ಕೂಟಗಳಿಗೆ ಅವರು ಸೂಚನೆ ನೀಡಿದರು.
 ರೈತರ (farmers) ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮಾರಾಟ ಮತ್ತು ಶೇಖರಣಾ ದರಗಳ ಅಂತರವನ್ನು ಕಡಿಮೆ ಮಾಡಿ ಸಾಧ್ಯವಿರುವ ಎಲ್ಲ ರೀತಿಯ ನಿರ್ವಹಣೆ ಆಡಳಿತಾತ್ಮಕ ಶೇಖರಣೆ, ಮಾರಾಟ ವೆಚ್ಚಗಳನ್ನು ಕಡಿಮೆ ಮಾಡುವಂತೆ ಬಾಲಚಂದ್ರ ಜಾರಕಿಹೊಳಿ ಅವರು ಹಾಲು ಒಕ್ಕೂಟಗಳಿಗೆ ಸೂಚನೆ ನೀಡಿದರು.

ಕೇಂದ್ರ ಸರ್ಕಾರವು ಕಡಿಮೆ ಬಡ್ಡಿ ದರದಲ್ಲಿ 850 ಕೋಟಿ ರೂಪಾಯಿ ಸಾಲಸೌಲಭ್ಯವನ್ನು ಒದಗಿಸಿದೆ ಕಷ್ಟದ ಪರಿಸ್ಥಿತಿಯಲ್ಲಿ ಈ ಮೊತ್ತವನ್ನು ಬಳಕೆ ಮಾಡಿಕೊಳ್ಳುವಂತೆ ಹಾಲು ಒಕ್ಕೂಟಗಳಿಗೆ ಸೂಚಿಸಿದರು.