News

ರೈತರ ಮನೆ ಬಾಗಿಲಿಗೆ ಬರಲಿದೆ ಕೃಷಿ ಸಂಜೀವಿನಿ-ಕೃಷಿ ಸಹಾಯವಾಣಿ ನಂಬರ್ ಹಾಗೂ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

06 January, 2021 3:39 PM IST By:
farmer calling helpline

ಕೃಷಿಯಲ್ಲಿ ಕಾಲಕಾಲಕ್ಕ ಮಣ್ಣು, ಕೀಟರೋಗ, ನೀರು ಪರೀಕ್ಷೆ ಮತ್ತು ಇತರ ತಾಂತ್ರಿಕ ನೆರವಿಗಾಗಿ ಕೃಷಿ ಇಲಾಖೆ ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಗಳನ್ನು ಆರಂಭಿಸುತ್ತಿದ್ದು, ರೈತರ ಮನೆ ಬಾಗಿಲಿಗೆ ಬರಲು ಕೃಷಿ ಸಂಜೀವಿನ ವಾಹನ ಸಜ್ಜಾಗಿ ನಿಂತಿದೆ.

ಹೌದು ಜನವರಿ 7 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೃಷಿ ಸಂಜೀವಿನಿ ವಾಹನಕ್ಕೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲರು ಕೃಷಿ ಪರೀಕ್ಷಾ ಉಪಕರಣಗಳಿಗೆ ಚಾಲನೆ ನೀಡಲಿದ್ದಾರೆ.

ಕೃಷಿ ಸಂಜೀವಿನ ಸ್ಥಾಪನೆಯಿಂದ ರೋಗ ಸರ್ವೇಕ್ಷಣಾ ಮತ್ತು ಸಲಹಾ ಘಟಕಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ. ಅಲ್ಲದೆ ಹೆಚ್ಚಿನ ಸಂಖ್ಯೆಯ ರೈತರ ತಾಲೂಕುಗಳಿಗೆ ತಾಂತ್ರಿಕ ತಂಡ ಭೇಟಿ ನೀಡಿ ಸಹಕಾರಿಯಾಗಲಿದೆ. 155313 ಸಹಾಯವಾಣಿಗೆ ಕರೆ ಮಾಡಿದರೆ, ಕರೆ ಮಾಡಿದ ರೈತರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಕರೆ ಹೋಗಲಿದೆ.

2020-21ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 40 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಗಳನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸ್ಥಾಪಿಸಲು ಅನುದಾನವನ್ನು ಒದಗಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೇ ರೀತಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನದ ಕ್ರಿಯಾ ಯೋಜನೆಯಡಿ ಲಭ್ಯವಿರುವ ಅನುದಾನದಡಿ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ( ಕೃಷಿ ಸಂಜೀವಿನಿ ) ಲೋಕಾರ್ಪಣೆಗೊಳಿಸಲಾಗುತ್ತಿದೆ.

155313 ಇದು ಕೃಷಿ ಸಂಜೀವಿನಿ ಸಹಾಯವಾಣಿ

ಇದು ಕೃಷಿ ಸಂಜೀವಿನಿ ಟೋಲ್ ಫ್ರೀ ಸಹಾಯವಾಣಿಯಾಗಿದ್ದು, ಈ ಸಂಖ್ಯೆಗೆ ಯಾವುದಾದರೂ ಜಿಲ್ಲೆಯಿಂದ ಕರೆ ಮಾಡಿದಲ್ಲಿ ಟೋಲ್ ಫ್ರೀ ಸಂಖ್ಯೆಯಿಂದ ಕರೆ ಮಾಡಿದ ರೈತರಿರುವ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಕರೆ ಹೋಗುತ್ತದೆ. ಆಗ ರೈತರು ತಮ್ಮ ಸಮಸ್ಯೆಯನ್ನು ತಿಳಿಸಿ ಪರಿಹಾರ ಪಡೆಯಬಹುದಾಗಿದ್ದು, 155313 ಆರೋಗ್ಯ ಇಲಾಖೆಯ ಆ್ಯಂಬುಲೆನ್ಸ್ ನಂತೆ ಸಹಾಯವಾಣಿಯಾಗಿ ಕೆಲಸ ಮಾಡುತ್ತದೆ.

ಏನಿದು  ಕೃಷಿ ಸಂಜೀವಿನಿ…?

ಇದು ಕೃಷಿ ಉತ್ಪಾದನೆ ಮತ್ತು ಉತ್ಪಾದಕತೆಯು ನೈಸರ್ಗಿಕ ವಿಕೋಪಗಳಾದ ಅನಾವೃಷ್ಟಿ , ಅತಿವೃಷ್ಟಿ , ಚಂಡಮಾರುತ , ಬೆಳೆಗಳಿಗೆ ಕಾಡುವ ಕೀಟ ಮತ್ತು ರೋಗ ಬಾಧೆ ಹಾಗೂ ಮಣ್ಣಿನ ಫಲವತ್ತತೆ ಮತ್ತು ಇತರ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ . ಸುಧಾರಿತ ಕೃಷಿ ಉತ್ಪಾದನಾ ತಾಂತ್ರಿಕತೆ , ಗುಣಮಟ್ಟದ ಕೃಷಿ ಪರಿಕರಗಳ ಪೂರೈಕೆ ಮತ್ತು ಶಿಫಾರಸ್ಸು ಮಾಡಲಾದ ರಸಗೊಬ್ಬರಗಳ ಸಮರ್ಪಕ ಬಳಕೆ , ರೋಗ – ಕೀಟಗಳ ಹತೋಟಿ , ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಶಗಳ ಬಗ್ಗೆ ರೈತರಿಗೆ ಮಾಹಿತಿ ಒದಗಿಸಿ , ಸೂಕ್ತ ಬೆಳೆ ಬೆಳೆಯಲು ಪ್ರೋತ್ಸಾಹಿಸಲಾಗುವುದು.. ಕೀಟ , ರೋಗ ಮತ್ತು ಕಳೆಗಳ ಬಾಧೆ ಹಾಗೂ ಮಣ್ಣಿನ ಪೋಷಕಾಂಶ ಕೊರತೆ ಹಾಗು ಸಮರ್ಪಕ ನಿರ್ವಹಣೆ ಕುರಿತಂತ ರೈತರ ತಾಕುಗಳಲ್ಲಿಯೇ ಹತೋಟಿ ಕ್ರಮಗಳ ಕುರಿತು ಮಾರ್ಗೊಪಾಯಗಳನ್ನು ಒದಗಿಸಲಾಗುವುದು

ಸರ್ವೇಕ್ಷಣೆಯಲ್ಲಿ ಕೀಟ / ರೋಗ ಬಾಧೆ ಕಂಡುಬಂದಲ್ಲಿ ತಕ್ಷಣವೇ ರೈತರಿಗೆ ಕೈಗೊಳ್ಳಬೇಕಾದ ಸಂಭವನೀಯ ನಿರ್ವಹಣಾ ಕ್ರಮಗಳ ಮಾಹಿತಿಯನ್ನು ರೈತರ ಮೊಬೈಲ್ ಗಳಿಗೆ ಸಂದೇಶ ಅಥವಾ ಮುದ್ರಿತ ಚೀಟಿ ನೀಡುವ ಮೂಲಕ ಉತ್ಪಾದನಾ ವೆಚ್ಚ ಮತ್ತು ಬೆಳಹಾನಿಯನ್ನು ತಗ್ಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.