News

ʻʻರಾತ್ರಿ ಹೊತ್ತು ಕರೆಂಟ್‌ ಬೇಡʼʼ ಎಂದು ವಿದ್ಯುತ್‌ ಕಚೇರಿಗೆ ಮೊಸಳೆ ತಂದ ರೈತ!

24 October, 2023 12:47 PM IST By: Maltesh
Farmer brought crocodile to electricity office vijayapura

ರಾಜ್ಯದಲ್ಲಿ ಈಗಾಗಲೇ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು ಬೆಳಯನ್ನೆ ನೆಚ್ಚಿ ಕೂತಿದ್ದ ರೈತಾಪಿ ವರ್ಗ ಇದೀಗ ಚಿಂತೆಗೀಡಾಗಿದೆ. ಮಳೆಯಾಗದ ಕಾರಣ ಸಮರ್ಪಕ ನೀರಿಲ್ಲದೆ ಒಣಗುತ್ತಿರುವ ಬೆಳೆಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂದು ಪರದಾಡುತ್ತಿದ್ದಾರೆ ರೈತರು.

ಇನ್ನು ನೀರಾವರಿಯ ಮೂಲಕ ಬೆಳೆಗಳನ್ನ ರಕ್ಷಿಸಬೇಕು ಎಂದರೆ ಸರಿಯಾದ ಸಮಯಕ್ಕೆ ವಿದ್ಯುತ್‌ ಬಾರದ ಕಾರಣ ರೈತರು ರೊಚ್ಚಿಗೆದ್ದಿದ್ದಾರೆ. ಇನ್ನು ಸಮರ್ಪಕವಾದ ಮತ್ತು ಸರಿಯಾದ ಸಮಯದಲ್ಲಿ ವಿದ್ಯುತ್‌ ನೀಡದ ಕಾರಣ ರೈತರೊಬ್ಬರು ಮೊಸಳೆ ಸಮೇತ ವಿದ್ಯುತ್‌ ಕಚೇರಿಗೆ ಬಂದ ಘಟನೆಯೊಂದು ವಿಜಯಪುರದ ರೋಣಿಹಾಳ ಗ್ರಾಮದಲ್ಲಿ ದಾಖಲಾಗಿದೆ.

ಏನಿದು ಪ್ರಕರಣ?

ಹೌದು ಸಕಾಲಕ್ಕೆ ತ್ರಿಫೇಸ್‌ ವಿದ್ಯುತ್‌ ನೀಡುತ್ತಿದ್ದ ರಾತ್ರಿ ವೇಳೆ ಮಾತ್ರ ವಿದ್ಯುತ್‌ ನೀಡುತ್ತಿದ್ದು ನಿದ್ದೆ ಬಿಟ್ಟು ಜಮೀನುಗಳಿಗೆ ನೀರು ಹಾಯಿಸುವ ಕೆಲಸ ಮಾಡಬೇಕು ಎಂದು ಅಲ್ಲಿಯ ರೈತರು ಹೇಳುತ್ತಿದ್ದಾರೆ. ಇದಷ್ಟೆ ಅಲ್ಲದೆ ರಾತ್ರಿ ವೇಳೆ ಜಲಚರಗಳ ಉಪಟಳ ಹೆಚ್ಚಾಗಿದ್ದು ಬೆಳಗಿನ ಅವಧಿಯಲ್ಲಿ ಕರೆಂಟ್‌ ನೀಡಿದರೆ ಅನುಕೂಲ ಎಂಬುದು ರೈತರ ವಾದ. ರಾತ್ರಿ ವೇಳೆ ಕರೆಂಟ್‌ ನೀಡಿದರೆ ಏನು ಪ್ರಯೋಜನ ನಮ್ಮ ಜೀವ ಪಣಕ್ಕಿಟ್ಟು ನಾವು ಜಮೀನಿಗೆ ತೆರಳಬೇಕು ಎಂಬುದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೀಗೆ ರಾತ್ರಿ ಸಮಯದಲ್ಲಿ ನೀರು ಹಾಯಿಸಲು ಹೋದಾಗ ಮೊಸಳೆಯೊಂದು ಕಂಡಿದ್ದು ಗಾಬರಿಯಾದ ರೈತ ಇದನ್ನ ಟ್ರ್ಯಾಕ್ಟರ್‌ನಲ್ಲಿ ಹೇರಿಕೊಂಡು ವಿದ್ಯುತ್‌ ಪ್ರಸರಣ ಕಚೇರಿಗೆ ಬಂದಿದ್ದಾನೆ. ಆ ಮೂಲಕ ಬೆಳಕಿನ ಸಮಯದಲ್ಲಿ ಕರೆಂಟ್‌ ನೀಡುವಂತೆ ಒತ್ತಾಯಿಸಿದ್ದಾನೆ. ರಾತ್ರಿ ವೇಳೆ ಜಮೀನಿಗೆ ಹೋಗುವುದರಿಂದ ಜಲಚರಗಳ ಕಾಟ ಹೇಗಿದೆ ಎಂಬುದನ್ನು ಸಾಂಕೇತಿಕವಾಗಿ ತೋರಿಸಲು ರೈತ ಮೊಸಳೆಯೊಂದಿಗೆ ಕಚೇರಿಗೆ ತೆರಳಿದ್ದಾನೆ. ಆಮೇಲೆ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ರೈತನ ಮನವೊಲಿಸಿ ಮೊಸಳೆಯನ್ನು ರಕ್ಷಿಸಿದ್ದಾರೆ.  ಸದ್ಯ ರೈತನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.