News

Election 2023: ಎಲ್ಲ ಸಮುದಾಯಕ್ಕೂ ಬಿಜೆಪಿ ನ್ಯಾಯ ದೊರಕಿಸಿಕೊಟ್ಟಿದೆ: ಬೊಮ್ಮಾಯಿ‌

20 April, 2023 5:45 PM IST By: Kalmesh T
Election 2023: BJP has given justice to all communities: Bommai

ಲಿಂಗಾಯತ ಸಮುದಾಯ ಸೇರಿ ಎಲ್ಲಾ ಸಮುದಾಯಕ್ಕೆ ನ್ಯಾಯ ಕೊಡುವಂತ ಕೆಲಸ ನಮ್ಮ ಸರ್ಕಾರ ಮಾಡಿದೆ. ಲಿಂಗಾಯತ ಸೇರಿದಂತೆ ಎಲ್ಲಾ ಸಮುದಾಯಗಳಿಗೂ ಮಾನ್ಯತೆ ನೀಡಿದ್ದು‌ ಬಿಜೆಪಿ ಸರ್ಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಲಿಂಗಾಯತ ಸಮಾಜವನ್ನ ಒಡೆಯುವಂತ ಕೆಲಸ ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ 50 ವರ್ಷದಿಂದ ಲಿಂಗಾಯತರನ್ನು ಸಿಎಂ ಮಾಡಿಲ್ಲ. ಕಾಂಗ್ರೆಸ್‌ನಲ್ಲಿ ಎಸ್. ನಿಜಲಿಂಗಪ್ಪ ಹೊರತುಪಡಿಸಿ ಲಿಂಗಾಯತ ಸಿಎಂ ಆಗಿಲ್ಲ. ವಿರೇಂದ್ರ ಪಾಟೀಲರನ್ನ ಎಷ್ಟು ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದರು.

ಕಾಂಗ್ರೆಸ್ ಕೇವಲ ಮೊಸಳೆ ಕಣ್ಣೀರು ಹಾಕುತ್ತದೆ. ಸಮಾಜವನ್ನ  ಒಡೆಯುವಂತ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದ್ದು, ಯಾವ ಪಕ್ಷ ಯಾರಿಗೆ ನಾಯಕತ್ವ ಕೊಟ್ಟಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಮಾಜವನ್ನು ಒಡೆಯುವಂತ ಕೆಲಸ ಕಾಂಗ್ರೆಸ್ ಪಕ್ಷ ಮಾಡಿದೆ ಎಂದರು.

ನಾವು ಸಮಾಜಕ್ಕೆ ಯಾವುದೇ ರೀತಿಯ ಡ್ಯಾಮೇಜ್ ಮಾಡಿಲ್ಲ.

ನಮ್ಮಲ್ಲಿ ಯಾವುದೇ ಡ್ಯಾಮೇಜ್ ಆಗಿಲ್ಲಾ, ಕಂಟ್ರೋಲ್‌ ಮಾಡೋದೆನಿದೆ ಎಂದರು. ಜನ ಶಕ್ತಿ ವಿರೋಧಿಗಳು ಮಣ್ಣು ಮುಕ್ಕುತ್ತಾರೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೀದರ್, ಏಪ್ರಿಲ್ 20: ಜನ ಶಕ್ತಿ ಮತ್ತು ದರ್ಪದ ಶಕ್ತಿ ಮಾಧ್ಯೆ ಸ್ಪರ್ಧೆ ನಡೆಯುತ್ತಿದ್ದು,  ಜನ ಶಕ್ತಿ ವಿರೋಧಿಗಳು ಮಣ್ಣು ಮುಕ್ಕುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಭಾಲ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆಯವರ ನಾಮಪತ್ರ ಸಲ್ಲಿಕೆ ನಂತರ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

 ಬೀದರ್ ನಲ್ಲಿ 6 ಶಾಸಕರು ಆಯ್ಕೆಯಾಗುತ್ತಾರೆ. ವಿಶೇಷವಾಗಿ ಭಾಲ್ಕಿಯಲ್ಲಿ ಬಿಜೆಪಿ ಆಯ್ಕೆಯಾಗಲಿದ್ದು,  ಯಾರು ಜನರ ವಿರುದ್ದ ಆಡಳಿತ ನಡೆಸುತ್ತಿದ್ದಾರೊ ಅವರು ಅವನತಿ ಹೊಂದುವ ಕಾಲ ಬಂದಿದೆ ಎಂದರು.

ಜನರ ಜೋಶ್ ನಮಗೆ ವಿಜಯದ ಪತಾಕೆ ಹಾರಿಸಲು ಅನುಕೂಲ.  ರಾಜ್ಯದಲ್ಲಿ  ಕಮಲವನ್ನು ಅರಳಿಸಲು  ಬಸವಣ್ಣನ ನಾಡು, ಭಾಲ್ಕಿ ಪಟ್ಟಣ  ದೇವರ ನಾಡಿಗೆ ಬಂದಿರುವುದಾಗಿ ತಿಳಿಸಿದರು.

ಒಗ್ಗಟ್ಟಾಗಿ ಗೆಲ್ಲಿಸಿ

ಪ್ರಕಾಶ ಖಂಡ್ರೆ ಅವರು ಯಾರಿಗೂ ಅನ್ಯಾಯ ಬಯಸುವುದಿಲ್ಲ. ಅವರು ಈ ಭಾಗದ ಪ್ರಥಮ ಬಿಜೆಪಿ ಶಾಸಕರು, ಅವರೊಂದಿಗೆ ಟಿಕೆಟ್ ಆಕಾಂಕ್ಷಿಗಳು ಎಲ್ಲರೂ ಒಗ್ಗಟ್ಟಾಗಿ ಅವರನ್ನು ಗೆಲ್ಲಿಸಿಕೊಂಡು ಬರಲು ತೀರ್ಮಾನಿಸಿದ್ದಾರೆ ಎಂದರು.

ಸಜ್ಜನರ ಗೆಲುವಾಗಲಿದೆ

ಪ್ರಕಾಶ ಖಂಡ್ರೆ ಸಜ್ಜನ ವ್ಯಕ್ತಿ.  ಇನ್ನೊಬ್ಬರು ಈಶ್ವರ ಖಂಡ್ರೆ ಇದ್ದಾರೆ. ಅವರು ಸ್ವಾರ್ಥ ರಾಜಕಾರಣ ಮಾಡಿದ್ದಾರೆ. ಎಲ್ಲರನ್ನು ‌ಎಲ್ಲಾ ಸಮಯದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ. ಈ ಬಾರಿ ಸಜ್ಜನರು ಮತ್ತು ದುರ್ಜನರ ನಡುವೆ ಸಂಘರ್ಷ ನಡೆದಿದೆ. ಈ ಬಾರಿ ಸಜ್ಜನರ ಗೆಲುವಾಗಲಿದೆ ಎಂದರು.

ಕಾಂಗ್ರೆಸ್ ಸುಳ್ಳು ಭರವಸೆ ನೀಡುತ್ತಿದೆ

ಈ ಭಾಗದಲ್ಲಿ ರಸ್ತೆ, ನೀರಾವರಿಗೆ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 1000 ಕೋಟಿ ರೂ ಮೀಸಲಿಟ್ಟು, ಕೇವಲ 300 ಕೋಟಿ ಖರ್ಚು ಮಾಡುತ್ತಾರೆ. 

ಚುನಾವಣೆಗೂ ಮುನ್ನ ಭರವಸೆಗಳನ್ನು ನೀಡುತ್ತ ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ವಿಜಿಟಿಂಗ್ ಕಾರ್ಡ್ ಕೊಡುತ್ತಿದ್ದಾರೆ. ಅದಕ್ಕೆ ಯಾವುದೇ ಬೆಲೆ ಇಲ್ಲ.

ಇವರು ಕೊಡುತ್ತಿರುವುದು ಬೋಗಸ್ ಕಾರ್ಡ್, 200 ಯುನಿಟ್ ವಿದ್ಯುತ್ ಉಚಿವಾಗಿ ನೀಡುವುದಾಗಿ ಹೇಳುತ್ತಾರೆ. ಜನರು ಬಳಕೆ ಮಾಡುವುದೇ 70-80 ಯುನಿಟ್. ಇವರು 200 ಯುನಿಟ್ ಕೊಡುವುದಾಗಿ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದರು.