News

ಜೈವಿಕ ವಿಧಾನಗಳಿಂದಲೂ ತೊಗರಿ, ಕಡಲೆ ಬೆಳೆಗಳಲ್ಲಿ ರೋಗ ನಿಯಂತ್ರಣ

25 November, 2021 5:02 PM IST By: KJ Staff
chickpea crop

ದಶಕದಿಂದ ಈಚೆಗೆ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿ ಗುರುತಿಸಿಕೊಂಡಿರುವ ತೊಗರಿ ಬೆಳೆ ಪ್ರಸ್ತುತ ಹೂವಾಡುವ ಹಂತದಲ್ಲಿದೆ. ಇದರೊಂದಿಗೆ ಮತ್ತೊಂದು ಪರಮುಖ ಬೆಳೆಯಾಗಿರುವ ಕಡಲೆ ಕೂಡ ಹೂವಾಡುವ ಹಂತ ತಲುಪಿದೆ. ಹೂವು ಬಿಡುವ ಹಂತವು ಬೆಳೆಗಳ ಪ್ರಮುಖ ಘಟ್ಟವಾಗಿದ್ದು, ಈ ಹಂತದಲ್ಲಿ ಬೆಳೆಯು ಆರೋಗ್ಯದಿಂದ ಇರುವಂತೆ ನೋಡಿಕೊಂಡರೆ ಮುಂದೆ ಆ ಬೆಳೆಯಿಂದ ಉತ್ತಮ ಇಳುವರಿ ನಿರೀಕ್ಷೆ ಮಾಡಬಹುದು.

ಆದರೆ, ಸದ್ಯದ ಪರಿಸ್ತಿತಿಯು ರೈತರಿಗೆ ಹಾಗೂ ಬೆಳೆಗಳಿಗೆ ಪೂರಕವಾಗಿಲ್ಲ. ರಾಜ್ಯದಾದ್ಯಂತ ಹಲವು ದಿನಗಳಿಂದ ಮಳೆ ಸುರಿಯುತ್ತಿದ್ದು, ದಿನವಿಡೀ ಮೋಡ ಕವಿದ ವಾತಾವರಣ ಇರುತ್ತದೆ. ಜೊತೆಗೆ ಆಗಾಗ ಜಡಿ ಮಳೆ ಹಿಡಿದುಕೊಳ್ಳುತ್ತದೆ. ಈ ತಂಪು ಹಾಗೂ ತೇವಾಂಶದಿAದ ವಾತಾವರಣ ಬೆಳೆಗಳಲ್ಲಿ ಹಲವು ರೋಗಗಳು ಕಾಣಿಸಿಕೊಳ್ಳಲು ಹಾಗೂ ಕೀಟಗಳ ಬೆಳವಣಿಗೆಗೆ ಅವಕಾಶ ಮಾಡಿಕೊಡುತ್ತದೆ. ಇಂತಹ ಸಂದರ್ಭದಲ್ಲಿ ರೈತ ಬಾಂಧವರು ತಮ್ಮ ಬೆಳೆಗಳ ಬಗ್ಗೆ ಕಾಳಜಿ ವಹಿಸಬೇಕು ಹಾಗೂ ರೋಗ, ಕೀಟಗಳ ಬಗ್ಗೆ ಜಾಗರುಕರಾಗಿ ಇರುವುದು ಬಹಳ ಮುಖ್ಯ.

ಈ ನಿಟ್ಟಿನಲ್ಲಿ ತಮ್ಮ ಬೆಳೆಗಳನ್ನು ವಿವಿಧ ರೋಗಗಳಿಂದ ರಕ್ಷಿಸಿಕೊಳ್ಳವ ವಿಧಾನಗಳ ಬಗ್ಗೆ ರೈತರು ತಿಳಿದುಕೊಂಡಿರಬೇಕು. ಅದಕ್ಕೆಂದೇ, ತಂಪು ವಾತಾವರಣವಿದ್ದಾಗ ತೊಗರಿ ಹಾಗೂ ಕಡಲೆ ಬೆಳೆಗಳಿಗೆ ಕಾಣಿಸಿಕೊಳ್ಳುವ ರೋಗಗಳು ಹಾಗೂ ಅವುಗಳ ನಿಯಂತ್ರಣ ವಿಧಾನಗಳ ಕುರಿತು ರಾಜ್ಯದ ತೊಗರಿ, ಕಡಲೆ ಬೆಳೆಗಾರರಿಗೆ ಮಾಹಿತಿ ನೀಡುವ ಉದ್ದೇಶದಿಂದ ಬೀದರ್ ನಗರದ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರವು ತನ್ನ ಸರಣಿ ಕೃಷಿ ಮಾಹಿತಿ ಕಾರ್ಯಕ್ರಮ ‘ಕೆವಿಕೆ - ಕೃಷಿ ಪಾಠ ಶಾಲೆ’ ಅಡಿಯಲ್ಲಿ ರೈತರಿಗಾಗಿ ‘ತೊಗರಿ ಮತ್ತು ಕಡಲೆ ಬೆಳೆಗಳಲ್ಲಿ ರೋಗಗಳ ಸಮಗ್ರ ನಿರ್ವಹಣೆ’ ಕುರಿತು ವಿಷಯ ಮಂಡನೆ ಹಾಗೂ ಚರ್ಚಾ ಕಾರ್ಯಕ್ರಮ (ಆನ್‌ಲೈನ್) ಹಮ್ಮಿಕೊಂಡಿತ್ತು.

‘ಸೂಕ್ತ ಸಮಯದಲ್ಲಿ ಬೆಳೆಯ ರೋಗಗಳನ್ನು ಗುರುತಿಸಿ, ಅಗತ್ಯವಿರುವ ನಿರ್ವಹಣಾ ಕ್ರಮ ಕೈಗೊಂಡಲ್ಲಿ ರೋಗದಿಂದ ಬೆಳೆಯ ಮೇಲಾಗುವ ಹಾನಿ ತಪ್ಪಿಸಿಕೊಳ್ಳಬಹುದು. ಎಲ್ಲಕ್ಕಿಂತಲೂ ಮುಖ್ಯವಾಗಿ ರೋಗ ಅಥವಾ ಕೀಟ ಬಾಧೆಗಳ ನಿರ್ವಹಣೆ ಮಾಡುವುದು ಕೇವಲ ರಸಾಯಿನಿಕ ಬಳಸಿದರೆ ಮಾತ್ರ ಸಾಧ್ಯವಾಗುತ್ತದೆ ಎಂಬ ತಪ್ಪು ಕಲ್ಪನೆ ಬಹುತೇಕ ರೈತರಲ್ಲಿದೆ. ಆದರೆ, ಜೈವಿಕ ವಿಧಾನಗಳ ಮೂಲಕವೂ ಬೆಳೆಯ ರೋಗಗಳನ್ನು ನಿರ್ವಹಣೆ, ನಿಯಂತ್ರಣ ಮಾಡಬಹುದು. ಬೆಳೆ, ಭೂಮಿ ಹಾಗೂ ಮನುಷ್ಯನ ಆರೋಗ್ಯದ ದೃಷ್ಟಿಯಿಂದ ಜೈವಿಕ ವಿಧಾನ ಬಳಕೆ ಸೂಕ್ತವೂ ಹೌದು. ನಿಟ್ಟಿನಲ್ಲಿ ರೈತರು ಸರಿಯಾದ ಮಾಹಿತಿ ಒಡೆದು, ಕ್ರಮ ಕೈಗೊಳ್ಳಬೇಕು,’ ಎಂದು ಅಭಿಪ್ರಾಯಪಡುತ್ತಾರೆ ಬೀದರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಸುನೀಲಕುಮಾರ ಎನ್.ಎಂ ಅವರು.

ತೊಗರಿ, ಕಡಲೆ ರೋಗಗಳು:

‘ತೊಗರಿ ಬೆಳೆಗಳಲ್ಲಿ ರುತುಮಾನಕ್ಕೆ ಅನುಗುಣವಾಗಿ ಹಲವಾರು ರೋಗಗಳು ಕಾಣಿಸಿಕೊಳ್ಳುತ್ತವೆ. ಅಂತಹ ರೋಗಗಳಲ್ಲಿ ಪ್ರಮುಖವಾದುವು; ಬೂದಿ ರೋಗ, ಚಿಬ್ಬು ರೋಗ, ಹಳದಿ ನಂಜು ರೋಗ, ಮುಟುರು ರೋಗ, ನೇಟೆ ರೋಗ, ಗೊಡ್ಡು ರೋಗ, ಸೋರಗು ರೋಗ. ತೊಗರಿ ಬೆಳೆಯಲ್ಲಿ ಇರುವಂತೆ ಕಡಲೆ ಬೆಳೆಯನ್ನೂ ಕೂಡ ಹಲವು ರೋಗಗಳು ಕಾಡುತ್ತವೆ. ಪ್ಯೂಸಿರಿಯಂ ಸೊರಗು ರೋಗ, ಒಣ ಬೇರು ಕೊಳೆ ರೋಗ ಕಾಂಡ ಕೊಳೆ ರೋಗ, ಮಚ್ಚೆ ರೋಗ, ತುಕ್ಕು ರೋಗ ಸೇರಿ ಇನ್ನು ಆನೇಕ ರೋಗಗಳು ಕಾಡುತ್ತವೆ. ಜೈವಿಕ ವಿಧಾನ ಬಳಸಿ ಬೀಜೋಪಚರ ಮಾಡುವುದು, ಕೊಯ್ಲು ಮಾಡುವವರೆಗೂ ಸಮಗ್ರ ಜೈವಿಕ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ರೋಗಗಳನ್ನು ತಡೆಯಬಹುದು,’ ಎನ್ನುತ್ತಾರೆ ಸಂಪನ್ಮೂಲ ವ್ಯಕ್ತಿ, ಬೀದರ ವಲಯ ಕೃಷಿ ಸಂಶೋಧನಾ ಕೇಂದ್ರದ ಸಸ್ಯರೋಗ ಶಾಸ್ತçದ ವಿಜ್ಞಾನಿ ಡಾ. ಮಲ್ಲಿಕಾರ್ಜುನ ಕೆಂಗನಾಳ ಅವರು.

ಆನ್‌ಲೈನ್ ಕಾರ್ಯಾಗಾರದಲ್ಲಿ ವಿವಿಧ ರೋಗಗಳ ಕುರಿತ ಚಿತ್ರಗಳ ಮೂಲಕ ರೈತರಿಗೆ ಮಾಹಿತಿ ನೀಡಿದ, ವಿಜ್ಞಾನಿ ಡಾ. ಮಲ್ಲಿಕಾರ್ಜುನ ಕೆಂಗನಾಳ ಅವರು, ಚರ್ಚಾಗೋಷ್ಠಿಯಲ್ಲಿ ರೈತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

ಮಣ್ಣು ಸಂರಕ್ಷಣೆ:

ಉತ್ತಮ ಬೆಳೆ ಪಡೆಯಲು ಮಣ್ನು ಅತಿ ಮಉಖ್ಯ. ಅದರಲ್ಲೂ ಮಣ್ಣಿನ ಸಂರಕ್ಷಣೆಯತ್ತ ರೈತರು ಹೆಚ್ಚಿನ ಗಮನ ಹರಿಸಬೇಕಿದೆ. ಸಮಪಾತ ಬದುಗಳು, ಅಲ್ಪ ಇಳಿಜಾರಿನ ಬದುಗಳು, ಟ್ರೆಂಚ್, ಸಮನಾದ ಕಾಲುವೆ, ಸಸ್ಯ ತಡೆಗಳ ಮೂಲಕ ತಾಕುಗಳಲ್ಲಿನ ಮಣ್ಣನ್ನು ಸಂರಕ್ಷಿಸಬಹುದು. ಇದರೊಂದಿಗೆ ಮಳೆ ನೀರು ಸ್ಥಳದಲ್ಲೇ ಇಂಗುವAತೆ ಮಾಡಬೇಕು. ಸಮಯಕ್ಕೆ ಸರಿಯಾಗಿ ಮಾಗಿ ಉಳುಮೆ ಮಾಡುವ ಮೂಲಕವೂ ಮಣ್ಣಿನ ರಕ್ಷಣೆ ಮಾಡಬಹುದು. ಇದರೊಂದಿಗೆ ಹೆಚ್ಚುವರಿ ನೀರನ್ನು ಸುರಕ್ಷಿತವಾಗಿ ಹೊಲದಿಂದ ಹೊರ ಹಾಕಲು ಮರೆಯಬಾರದು ಎಂದು ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಮುಖ್ಯ ವಿಜ್ಞಾನಿ ಹಾಗೂ ಬೀಜ ಘಟಕದ ವಿಶೇಷ ಅಧಿಕಾರಿ ಡಾ. ಅರುಣಕುಮಾರ ಹೊಸಮನಿ ಅವರು ರೈತರಿಗೆ ಮಾಹಿತಿ ನೀಡಿದರು.