News

ಸಿಡಿಲು ಮಿಂಚಿನ ಮುನ್ಸೂಚನೆ ನೀಡಲಿದೆ ದಾಮಿನಿ ಆ್ಯಪ್

10 May, 2021 4:53 PM IST By:

ಭಾರತ ಕೃಷಿ ಆಧಾರಿತ ದೇಶ. ನಮ್ಮ ದೇಶದಲ್ಲಿ ಕೃಷಿಯು 80 ಪ್ರತಿಶತಕ್ಕಿಂತಲೂ ಹೆಚ್ಚು ಹವಾಮಾನ ಆಧಾರಿತವಾಗಿದೆ. ಹವಾಮಾನ ಉತ್ತಮವಾಗಿದ್ದರೆ ರೈತರು ನೆಮ್ಮದಿಯಿಂದ ಇರುತ್ತಾರೆ. ಇಲ್ಲದಿದ್ದರೆ ಇಡೀ ವರ್ಷ ರೈತರು ಪಟ್ಟಕಷ್ಟಕ್ಕೆ ಯಾವುದೇ ಪ್ರತಿಫಲವಿಲ್ಲದೆ ಅವರ ಜೀವನ ಕಷ್ಟಕರವಾಗುತ್ತದೆ.

ಹವಾಮಾನ ಕೂಡ ಒಂದು ಕಡೆ ಬರ, ಮತ್ತೊಂದೆಡೆ ಪ್ರವಾಹ ಹೀಗೆ ನಿಖರವಾದ ಹವಾಮಾನ ಮಾಹಿತಿಯ ಕೊರತೆಯಿಂದಾಗಿ ಪ್ರತಿವರ್ಷ ರೈತರು ಭಾರಿ ನಷ್ಟ ಅನುಭವಿಸುತ್ತಾರೆ. ಅಷ್ಟೇ ಅಲ್ಲ ಮಿಂಚಿನಿಂದ ದೇಶದಲ್ಲಿ ಪ್ರತಿ ವರ್ಷ ಸರಾಸರಿ 2500 ಜನರು ಸಿಡಿಲಿನಿಂದ ಸಾವನ್ನಪ್ಪುತ್ತಿದ್ದಾರೆ, ಅದರಲ್ಲೂ ಹೆಚ್ಚಿನವರು ಹೊಲದಲ್ಲಿ ಉಳುಮೆ ಮಾಡುವ ರೈತರು, ದನಕರುಗಳು ಮತ್ತು ಕುರಿಗಾರರು. ಸಿಡಿಲಿನ ಆರ್ಭಟಕ್ಕೆ ಹೆದರದವರಿಲ್ಲ. ಮಳೆಗಾಲದ ಜತೆಗೆ ಸಿಡಿಲಿನ ಅನಾಹುತಗಳೂ ಜೋರು.   

ಸಿಡಿಲಿನಿಂದ ಪಾರಾಗಲು ಕೇಂದ್ರ ಸರಕಾರದ ಭೂ ವಿಜ್ಞಾನ ಸಚಿವಾಲಯದ ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ (Indian Institute Tropical Meteorology) “ದಾಮಿನಿ” ಅನ್ನುವ ಮೊಬೈಲ ಅಪ್ಲಿಕೇಶನನ್ನು ಅಭಿವೃದ್ದಿಪಡಿಸಿದೆ, ಈ 'ದಾಮಿನಿ' ಆ್ಯಪ್‌ ಆಪದ್ಬಾಂಧವಾಗಲಿದೆ. ಸಿಡಿಲು ಹೊಡೆಯುವ ಕೆಲವು ನಿಮಿಷಗಳ ಮುಂಚೆ ಮುನ್ಸೂಚನೆ ನೀಡಲಿರುವ ಈ ಆ್ಯಪ್, ಸಾವು, ನೋವಿನ ಪ್ರಮಾಣ ಗಣನೀಯ ತಗ್ಗಿಸಲು ನೆರವಿಗೆ ಬರಲಿದೆ. ಪುಣೆಯಲ್ಲಿರುವ ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆಯು ಸಿಡಿಲಿನ ಅನಾಹುತ ತಪ್ಪಿಸಲು ಸಿಡಿಲು ಪತ್ತೆಹಚ್ಚುವ ಸಂವೇದಕಗಳನ್ನು ದೇಶದ ವಿವಿಧ ಭಾಗಗಳಲ್ಲಿ ಸ್ಥಾಪಿಸಿದೆ. ಈ ಮೂಲಕ ಒಂದು ಸ್ಥಳದ ಸುತ್ತಲಿನ 20 ರಿಂದ 40 ಕಿ.ಮೀ. ದೂರದವರೆಗೆ 15 ನಿಮಿಷಗಳ ಒಳಗೆ ಸಂಭವಿಸಬಹುದಾದ ಸಿಡಿಲಿನ ಬಗ್ಗೆ ನಿಖರವಾದ ಮಾಹಿತಿ ದೊರೆಯುತ್ತದೆ.

ಈ ಅಪ್ಲಿಕೇಶನ್‌ ಉಚಿತವಾಗಿದೆ. ಇದನ್ನು ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಬಹುದು. ಈ ಆ್ಯಪ್‌ ಅನ್ನುಗೂಗಲ್ ಪ್ಲೇ ಸ್ಟೋರ್ ನಿಂದ ಇನ್ಸ್ ಸ್ಟಾಲ್ ಮಾಡಿಕೊಳ್ಳಬೇಕು. ಬಳಕೆದಾರರ ಹೆಸರು, ದೂರವಾಣಿ ಸಂಖ್ಯೆ, ವಿಳಾಸ, ಪಿನ್ ಕೋಡ್, ಮತ್ತು ವೃತ್ತಿಯನ್ನು ನಮೂದಿಸಬೇಕು. ಬಳಿಕ ಹೊಮ್ ಪೇಜ್ ನಲ್ಲಿ ಒಂದು ನಕ್ಷೆ ತೋರುತ್ತದೆ. ಅದರ ಮೇಲ್ಭಾಗದಲ್ಲಿ ನಮಗೆ ಬೇಕಾದಸ್ಥಳದ ಹೆಸರು ಟೈಪ್ಮಾಡಿ ಸರ್ಚ್ ಮಾಡಬೇಕು. ಹಳದಿ ಬಣ್ಣದ ಮಿಂಚಿನಚಿಹ್ನೆ ತೋರಿಸಿದರೆ 5 ನಿಮಿಷದೊಳಗೆ ಮಿಂಚು ಸಂಭವಿಸುವುದನ್ನು ಸೂಚಿಸುತ್ತದೆ. ನೀಲಿ ಬಣ್ಣದಚಿಹ್ನೆ 5 ರಿಂದ 10ನಿಮಿಷಗಳವರೆಗೆ ಹಾಗೂ ನೇರಳೆ ಬಣ್ಣದ ಚಿಹ್ನೆ 10ರಿಂದ 15ನಿಮಿಷಗಳವರೆಗೆ ಸಂಭವಿಸಬಹುದಾದ ಮಿಂಚನ್ನು ಸೂಚಿಸುತ್ತದೆ. ಇಷ್ಟೇ ಅಲ್ಲದೆ ಮಿಂಚು, ಸಿಡಿಲಿನ ವೇಳೆ ಜನಸಾಮಾನ್ಯರು ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ಯಾವ ಸ್ಥಳಗಳಲ್ಲಿ ಇರಬಾರದು ಎಂಬ ಮಾಹಿತಿಯ ಜೊತೆಗೆ ಮಿಂಚು ಹೊಡೆದಾಗ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆಯ ವಿವರವನ್ನೂ ಈ ಆ್ಯಪ್ನಲ್ಲಿ ಅಳವಡಿಸಿರುವುದು ವಿಶೇಷ.

ದಾಮಿನಿ ಅಪ್ಲಿಕೇಶನ್ನ ಪ್ರಯೋಜನಗಳು:

-ಮಿಂಚಿನ ಬಗ್ಗೆ ಸಮಯೋಚಿತ ಮಾಹಿತಿಯಿಂದಾಗಿ ರೈತರು ಸುರಕ್ಷಿತ ಸ್ಥಳಕ್ಕೆ ಹೋಗುವ ಮೂಲಕ ತಮ್ಮಜೀವವನ್ನು ಉಳಿಸಿಕೊಳ್ಳಬಹುದು. -ಪ್ರಾಣಿಗಳನ್ನು ಸುರಕ್ಷಿತ ಸ್ಥಳಕ್ಕೆ ಕಟ್ಟಿ ಮಿಂಚಿನಿಂದ ರಕ್ಷಿಸಬಹುದು. -ಮೊಬೈಲ್‌ ಅಪ್ಲಿಕೇಶನ್‌ ಡೌನ್ಲೋಡ್ ಮಾಡುವ ಮೂಲಕ ಮಳೆಗಾಲದಲ್ಲಿ ಮಿಂಚಿನ ಮಾಹಿತಿಯಿಂದ ನೀವು ಜೀವ ಮತ್ತು ಆಸ್ತಿಯನ್ನು ರಕ್ಷಿಸಬಹುದು.

ಸಿಡಿಲಿನಿಂದ ತಪ್ಪಿಸಿಕೊಳ್ಳಲು ಮುಂಜಾಗ್ರತಾ ಕ್ರಮಗಳು :

  1. ಗುಡುಗು ಸಹಿತ ಮಳೆಯಾಗುವ ಸಂದರ್ಭದಲ್ಲಿ ಮೈದಾನ, ನೀರು ಮತ್ತು ಒಣ ಹುಲ್ಲಿನ ಮನೆಗಳಿಂದ ದೂರವಿರಬೇಕು.
  2. ಮಳೆ ಬರುವ ಸಂದರ್ಭದಲ್ಲಿ ಮರಗಳ ಕೆಳಗೆ ಆಶ್ರಯ ಪಡೆಯಬಾರದು ಮತ್ತು ಲೋಹದ ತಂತಿ ಹಾಗೂ ಬೇಲಿಗಳಿಂದ ದೂರವಿರಬೇಕು.
  3. ಮಳೆಯಾಗುವ ಸಂದರ್ಭದಲ್ಲಿ ಜನರು ಗುಂಪಾಗಿ ನಿಲ್ಲಬಾರದು.
  4. ಸಿಡಿಲು ಸಂಭವಿಸುವ ಸಮಯದಲ್ಲಿ ವಿದ್ಯುತ್ ಉಪಕರಣಗಳನ್ನು ಬಳಸಬಾರದು.
  5. ಗುಡುಗು ಸಹಿತ ಮಳೆಯಾಗುವ ಸಂದರ್ಭದಲ್ಲಿದೂರವಾಣಿಯಲ್ಲಿ ಮಾತನಾಡಬಾರದು.
  6. ಮಳೆಯಾಗುವ ಸಂದರ್ಭದಲ್ಲಿರೈತರು ಜಾನುವಾರಗಳನ್ನು ಮರದ ಕೆಳಗೆ ಕಟ್ಟಬಾರದು.
  7. ಗುಡುಗು ಸಹಿತ ಮಳೆಯಾಗುವ ಸಂದರ್ಭದಲ್ಲಿಕಾರಿನ ಒಳಗೆ ಕುಳಿತುಕೊಳ್ಳಬಹುದು ಆದರೆ ಎಫ್. ಎಮ್‌ ರೇಡಿಯೋ ಕೇಳಬಾರದು.
  8. ಮನೆಯ ಮೇಲೆ ಸಿಡಿಲು ನಿರೋಧಕ ಕಬ್ಬಿಣದ ವಾಹಕಗಳನ್ನು ಬಳಸುವುದರಿಂದ ಸಿಡಿಲಿನಿಂದಾಗುವ ಹಾನಿಯನ್ನು ತಪ್ಪಿಸಬಹುದು.

ಲೇಖನ: ಡಾ. ಶಿಲ್ಪಾ ವಿ. ಚೋಗಟಾಪೂರ, ಶ್ರೀ ಹಣಮಂತ. ಶ್ರೀ ಶಾರುಖಾನ್ ನಾಡಗೌಡ ಮತ್ತುಡಾ. ಅಮರೇಶ ವೈ. ಎಸ್. ಕೃಷಿ ವಿಜ್ಞಾನಕೇಂದ್ರ , ಕವಡಿಮಟ್ಟಿ (ಯಾದಗಿರ) ತಾ: ಸುರಪುರ   ಜಿ: ಯಾದಗಿರ