News

ರಾಜ್ಯದಲ್ಲಿ ಕೊರೊನಾ ರೌದ್ರನರ್ತನ, ಸಕ್ರಿಯ ಪ್ರಕರಣಗಳಲ್ಲಿ ದೇಶಕ್ಕೆ ನಂ.1

10 May, 2021 9:17 PM IST By:

ರಾಜ್ಯದಲ್ಲಿ  ಹೊಸ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ  ಕೊಂಚ ಇಳಿಕೆಯಾಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 39,305 ಪ್ರಕರಣಗಳು ದಾಖಲಾಗಿವೆ. 596 ಜನರು ಸೋಂಕಿಗೆ ಬಲಿಯಾಗಿದ್ದಾರೆ. 57,1006 ಒಟ್ಟು ಸಕ್ರಿಯ ಪ್ರಕರಣಗಳಿವೆ. ಕಳೆದ ನಾಲ್ಕೈದು ದಿನಗಳಿಂದ 50 ಸಾವಿರ ಸಮೀಪ ಪ್ರಕರಣಗಳು ದಾಖಲಾಗುತ್ತಿದ್ದವು. ಇಂದು 40 ಸಾವಿರದೊಳಕ್ಕೆ ಸೋಂಕು ಕಾಣಿಸಿಕೊಂಡಿದೆ.

ಆದರೆ ಸಾವಿನ ಪ್ರಮಾಣ ಮಾತ್ರ ಇಳಿಕೆಯಾಗುತ್ತಿಲ್ಲ.ಒಂದೇ ದಿನ 596 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಮೃತರ ಸಂಖ್ಯೆ 19,372 ಕ್ಕೆ ಹೆಚ್ಚಳವಾಗಿದೆ. ಈ ಮೂಲಕ ಖಚಿತ ಪ್ರಕರಣಗಳ ಸಂಖ್ಯೆ 1973683 ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ರಾಜಧಾನಿ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೆ ಇವೆ. ಇಂದು ಒಂದೇ ದಿನ 374 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ನಗರದಲ್ಲಿ ಮೃತರ ಸಂಖ್ಯೆ 8431ಕ್ಕೆ ಹೆಚ್ಚಳವಾಗಿದೆ ಎಂದು ಮಾಹಿತಿ ನೀಡಿದೆ.
ಇಂದು 32,188 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ 1383285 ಜನರು ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ.
ಬೆಂಗಳೂರಿನಲ್ಲಿ 16,747 ಮಂದಿಗೆ‌ ಹೊಸದಾಗಿ ಸೋಂಕು ತಗುಲಿವೆ.ಒಟ್ಟು ಸೋಂಕಿತರ ಸಂಖ್ಯೆ967640ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ಒದಗಿಸಿದೆ.
ಜಿಲ್ಲೆಗಳ ವಿವರ ಹೀಗಿದೆ:
ಬಾಗಲಕೋಟೆ 968, ಬಳ್ಳಾರಿ 973, ಬೆಳಗಾವಿ 736, ಬೆಂಗಳೂರು ಗ್ರಾಮಾಂತರ 704, ಬೆಂಗಳೂರು ನಗರ 16,747, ಬೀದರ್ 305, ಚಾಮರಾಜನಗರ 623, ಚಿಕ್ಕಬಳ್ಳಾಪುರ 599, ಚಿಕ್ಕಮಗಳೂರು 362, ಚಿತ್ರದುರ್ಗ 172, ದಕ್ಷಿಣ ಕನ್ನಡ 1,175, ದಾವಣಗೆರೆ 197, ಧಾರವಾಡ 1,006, ಗದಗ 332, ಹಾಸನ 1,800, ಹಾವೇರಿ 214, ಕಲಬುರಗಿ 988, ಕೊಡಗು 534, ಕೋಲಾರ 755, ಕೊಪ್ಪಳ 412, ಮಂಡ್ಯ 1,133, ಮೈಸೂರು 1,537, ರಾಯಚೂರು 582, ರಾಮನಗರ 337, ಶಿವಮೊಗ್ಗ 820, ತುಮಕೂರು 2,168, ಉಡುಪಿ 855, ಉತ್ತರ ಕನ್ನಡ 885, ವಿಜಯಪುರ 659 ಮತ್ತು ಯಾದಗಿರಿಯಲ್ಲಿ 727 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

ಸೋಂಕಿನ ಪ್ರಕರಣಗಳ ಅಲ್ಪ ಇಳಿಕೆ

ಸೋಮವಾರ ರಾಜ್ಯದಲ್ಲಿ ಹೊಸ ಸೋಂಕಿನ ಪ್ರಕರಣಗಳ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. 39,305 ಹೊಸ ಪ್ರಕರಣಗಳು ಕಳೆದ 24 ಗಂಟೆಯಲ್ಲಿ ವರದಿಯಾಗಿವೆ. ಆದರೆ ಇದೇನು ಶುಭ ಸುದ್ದಿಯಂತೂ ಅಲ್ಲ. ಕಾರಣ ಪರೀಕ್ಷೆಗಳ ಸಂಖ್ಯೆಯನ್ನೂ ಕಡಿಮೆ ಮಾಡಲಾಗಿದೆ.

ಕಳೆದ 24 ಗಂಟೆಯಲ್ಲಿ ಕರ್ನಾಟಕದಲ್ಲಿ 1,24,110 ಸ್ಯಾಂಪಲ್‌ಗಳನ್ನಷ್ಟೆ ಪರೀಕ್ಷೆಗೊಳಪಡಿಸಲಾಗಿದೆ. ಪರಿಣಾಮ ಕಡಿಮೆ ಸಂಖ್ಯೆಯ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ. ಸ್ಯಾಂಪಲ್‌ಗಳಿಗೆ ಹೋಲಿಸಿದರೆ ಪಾಸಿಟಿವಿ ದರ ಇನ್ನೂ ಶೇ. 30ಕ್ಕಿಂತ (31.66%) ಹೆಚ್ಚೇ ಇದೆ. ಹೀಗಾಗಿ ಸೋಂಕು ಕಡಿಮೆಯಾಗಿದೆ ಎನ್ನುವಂತಿಲ್ಲ.