News

ಗ್ಯಾರಂಟಿಗಳಿಗೆ ಹಣದ ಸಮಸ್ಯೆ? ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ

08 October, 2023 3:46 PM IST By: Maltesh
CM Siddaramaiah Talk About Congress Guarantee

ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ ಪಕ್ಷ ತನ್ನ ಪಂಚ ಗ್ಯಾರಂಟಿಗಳನ್ನು ಈಡೇರಿಸುತ್ತ ಜನರಿಗೆ ನೀಡಿದ ಆಶ್ವಾಸನೆಯನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದೆ.

ಆದರೆ ಇತ್ತ ವಿಪಕ್ಷಗಳು ಕಾಂಗ್ರೆಸ್‌ ಗ್ಯಾರಂಟಿಗಳ ಕುರಿತು ವ್ಯಂಗವಾಡುತ್ತಿವೆ. ಈ ಎಲ್ಲ ಟೀಕೆ, ಟಿಪ್ಪಣೆಗಳ ನಡುವೆಯೂ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಈಗಾಗಲೇ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ,ಗೃಹಲಕ್ಷ್ಮಿ ಯೋಜನೆಗಳನ್ನು ಜಾರಿಗೆ ತಂದಿದ್ದು ಯುವನಿಧಿ ಜಾರಿ ಮಾಡುವ ನಿಟ್ಟಿನಲ್ಲಿ ಮಗ್ನವಾಗಿದೆ.

ಈ ಎಲ್ಲ ಗ್ಯಾರಂಟಿಗೆಗಳಿಗೆ ಸರ್ಕಾರದ ಬಳಿ ಹಣವೇ ಇಲ್ಲವೆಂದು ವಿಪಕ್ಷಗಳು ಆರೋಪಿಸಿವೆ.  ಈ ಎಲ್ಲ ಆರೋಪಗಳಿಗೆ ಖಡಕ್‌ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಗ್ಯಾರಂಟಿಗಳಿಗೆ ಅಭಯ ನೀಡಿದ್ದಾರೆ.

ಗ್ಯಾರಂಟಿ ಯೋಜನೆಗಳಿಗೆ ಹಣಕಾಸಿನ ಸಮಸ್ಯೆ ಇಲ್ಲ -ಸಿಎಂ

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ  ಗ್ಯಾರಂಟಿ ಯೋಜನೆಗಳಿಗೆ ಹಣಕಾಸಿನ ಸಮಸ್ಯೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.  ನಿನ್ನೆ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಕಾಂಗ್ರೆಸ್‌ ಗ್ಯಾರಂಟಿಗಳಿಗೂ ಬರಗಾಲ ನಿರ್ವಹಣೆಗೂ ಹಣಕಾಸಿನ ಸಮಸ್ಯೆ ಇಲ್ಲ.

ಕೇಂದ್ರದ ಮಾರ್ಗಸೂಚಿಯನ್ವಯ 4860 ಕೋಟಿ ರೂಪಾಯಿ ನೆರವು ನೀಡುವಂತೆ ಮನವಿ ಮಾಡಲಾಗಿದೆ. ಕೇಂದ್ರ ತಂಡ ರಾಜ್ಯದ ೧೧ ಜಿಲ್ಲೆಗಳಲ್ಲಿ ಬರ ಪರಿಶೀಲನೆ ನಡೆಸುತ್ತಿದ್ದು, ವರದಿ ಸಲ್ಲಿಸಿದ ನಂತರ ಸೂಕ್ತ ಆರ್ಥಿಕ ನೆರವು ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಮೂಲಕ ವಿಪಕ್ಷಗಳ ಟೀಕೆಗೆಳಿಗೆ ಸಿಎಂ ಸ್ಪಷ್ಟವಾಗಿ ಹಣಕಾಸಿನ ಸಮಸ್ಯೆ ಇಲ್ಲವೆಂದು ತಿಳಿಸಿದ್ದಾರೆ.

ಶಕ್ತಿ ಯೋಜನೆಯಿಂದ ವ್ಯಾಪಾರಿಗಳ ಭಾಗ್ಯದ ಬಾಗಿಲು ತೆರೆದಿದೆ.

ಶಕ್ತಿ  ಯೋಜನೆ ಕುರಿತು ಸಿಎಂ ಸಿದ್ದರಾಮಯ್ಯ ಅವರು ತನ್ಮ X ಖಾತೆಯಲ್ಲಿ ಬರೆದುಕೊಂಡಿದ್ದು, ಶಕ್ತಿ ಯೋಜನೆಯಿಂದ ವ್ಯಾಪಾರಿಗಳ ಭಾಗ್ಯದ ಬಾಗಿಲು ತೆರೆದಿದೆ ಎಂದಿದ್ದಾರೆ, ʻʻಶಕ್ತಿ ಯೋಜನೆಯಡಿ ರಾಜ್ಯದ ಹೆಣ್ಣುಮಕ್ಕಳಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಿದ್ದರಿಂದ ನಾಡಿನ ಪುಣ್ಯ ಕ್ಷೇತ್ರಗಳಲ್ಲಿ ಮಹಿಳಾ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಭಕ್ತಾದಿಗಳಿಗೆ ದೇವರ ದರ್ಶನದ ಭಾಗ್ಯ ದೊರೆತರೆ, ಕೊರೊನಾದಿಂದ ಕಂಗೆಟ್ಟಿದ್ದ ಸ್ಥಳೀಯ ವ್ಯಾಪಾರಿಗಳ ಬದುಕಿನ ಭಾಗ್ಯದ ಬಾಗಿಲು ತೆರೆದಿದೆʼʼ.

ಪುಣ್ಯಕ್ಷೇತ್ರಗಳ ದರ್ಶನ ಪಡೆಯಬೇಕು ಎಂಬ ಬಡಜನರ ವರ್ಷಗಳ ಕನಸನ್ನು ಶಕ್ತಿ ಯೋಜನೆಯ ಮೂಲಕ ನನಸಾಗಿಸಿದ್ದು ನಮ್ಮ ಸರ್ಕಾರದ ಹೆಗ್ಗಳಿಕೆ. ಇಂದು ನಾಡಿನ ದೇವಾಲಯಗಳು ಭಕ್ತಾದಿಗಳಿಂದ ತುಂಬಿತುಳುಕುತ್ತಿವೆ, ಇದರಿಂದ ಸ್ಥಳೀಯ ವ್ಯಾಪಾರ ವಹಿವಾಟು ಹೊಸ ಚೈತನ್ಯ ಪಡೆದು ಕೊರೊನಾದಿಂದ ಕಂಗೆಟ್ಟಿದ್ದ ಸಾವಿರಾರು ಕುಟುಂಬಗಳು ನೆಮ್ಮದಿಯ ದಿನಗಳನ್ನು ಕಾಣಲಾರಂಭಿಸಿವೆ. ಎಂದು ಅವರಿ x ಖಾತೆಯಲ್ಲಿ ಶಕ್ತಿ ಯೋಜನೆಯ ಯಶಸ್ಸನ್ನು ಹಂಚಿಕೊಂಡಿದ್ದಾರೆ.