News

ನೆರೆ ಹಾನಿ: ಅ. 21 ರಂದು ಸಿಎಂ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ

18 October, 2020 12:42 PM IST By:

ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಬಾರಿ ಮಳೆಯಾಗಿದ್ದರಿಂದ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದ್ದಲ್ಲದೆ ಮಹಾರಾಷ್ಟ್ರದ ಜಲಾಶಯಗಳಿಂದ ಭೀಮಾನದಿಗೆ ನೀರು ಹರಿಬಿಟ್ಟಿದ್ದರಿಂದ ಬಿಜಾಪುರ, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಭಾರಿ ಪ್ರವಾಹ ಉಂಟಾಗಿ ಅಪಾರ ಹಾನಿಯಾಗಿತ್ತು. ಪ್ರವಾಹದಿಂದ ಉಂಟಾದ ಹಾನಿಯ ಕುರಿತು ಅವಲೋಕಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ (ಅ. 21 ರಂದು ) ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ಉತ್ತರ ಕರ್ನಾಟಕ ಕೆಲವು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಪ್ರವಾಹದಿಂದ ಭಾರಿ ನಷ್ಟವುಂಟಾಗಿದ್ದು ಈ ಜಿಲ್ಲೆಗಳಲ್ಲಿ ಅ.21ರಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ಮಾಡಲಿದ್ದಾರೆ.

ವಾಯುಭಾರ ಕುಸಿತದಿಂದ ಈ ಭಾಗದಲ್ಲಿ ಭಾರಿ ಮಳೆಯಾಗಿದ್ದು, ಇದರೊಂದಿಗೆ ಮಹಾರಾಷ್ಟ್ರದ ಜಲಾಶಯದಿಂದ ಕೃಷ್ಣಾ ಮತ್ತು ಭೀಮಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡಲಾಗಿದೆ. ಇದರಿಂದ ಈ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿತ್ತು.

ಪ್ರವಾಹದಿಂದ ನಾಲ್ಕು ಜಿಲ್ಲೆಗಳ ಹಲವು ಗ್ರಾಮಗಳು ಸಂಪೂರ್ಣ ಮತ್ತು ಭಾಗಶಃ ಮುಳುಗಿವೆ. ಜಿಲ್ಲಾಡಳಿತದಿಂದ ಈಗಾಗಲೇ ಪರಿಹಾರ ಕಾರ್ಯಾಚರಣೆ ಪ್ರಗತಿಯಲ್ಲಿದೆ. ನೇರವಾಗಿ ಪರಿಸ್ಥಿತಿ ಅರಿಯುವ ಉದ್ದೇಶದಿಂದ ವೈಮಾನಿಕ ಸಮೀಕ್ಷೆ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಪ್ರವಾಹದಿಂದಾಗಿ ಲಕ್ಷಾಂತರ ಜನರು ಅತಂತ್ರರಾಗಿದ್ದಾರೆ. ಅಪಾರ ಬೆಳೆ ಹಾನಿಯಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಗ್ರಾಮಗಳಿಗೆ ನೀರು ನುಗ್ಗಿದ್ದರಿಂದ ಲೆಕ್ಕಕ್ಕೂ ಸಿಗದಷ್ಟು ಹಾನಿಯಾಗಿದೆ. ಸರ್ಕಾರ  ಸಮೀಕ್ಷೆ ನಡೆಸಿದ ನಂತರ ಸಂತ್ರಸ್ತ ಕುಟುಂಬಕ್ಕೇ ಬೇಗ ಪರಿಹಾರ ನೀಡಲಿ. ಸಂತ್ರಸ್ತರು ಎಲ್ಲರಂತೆ ಸಾಮಾನ್ಯ ಬದಕು ನಡೆಸಲು ಎಂದು ಜನರು ಬೇಡಿಕೊಳ್ಳುತ್ತಿದ್ದಾರೆ.