News

Karnataka ಕಾವೇರಿ ನೀರು: ಮತ್ತೆ ಸುಪ್ರೀಂ ಕೋರ್ಟ್‌ ಮೊರೆಗೆ ಕರ್ನಾಟಕ ನಿರ್ಧಾರ

28 September, 2023 5:06 PM IST By: Hitesh
Cauvery water: Karnataka decision to approach Supreme Court again

ರೈತರಿಗೆ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಕನ್ನಡ ಅಗ್ರಿನ್ಯೂಸ್‌ ಪರಿಚಯಿಸಿದೆ.

ಇಂದಿನ ಪ್ರಮುಖ ಸುದ್ದಿಗಳು ಈ ರೀತಿ ಇವೆ. 

  1. ಕಾವೇರಿ ನೀರಿಗಾಗಿ ನಾಳೆ ಅಖಂಡ ಕರ್ನಾಟಕ ಬಂದ್‌: ಸಾವಿರಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ
  2. ವ್ಯವಸಾಯ ಪಡೆದ ಸಾಲದಲ್ಲಿ ಮದುವೆ ಬೇಡ: ಸಿ.ಎಂ
  3. ಕಾವೇರಿ ನೀರು: ಮತ್ತೆ ಸುಪ್ರೀಂ ಕೋರ್ಟ್‌ ಮೊರೆಗೆ ಕರ್ನಾಟಕ ನಿರ್ಧಾರ
  4. ಕೆನಡಾದ ರಾಜತಾಂತ್ರಿಕ ವಿಷಯ: ಮುಕ್ತ ಮನಸ್ಸಿನ ಪರಿಶೀಲನೆ ಕೇಂದ್ರ ಸರ್ಕಾರ
  5. ನಾಯಿ ಕಚ್ಚಿದಾಗ ನಿರ್ಲಕ್ಷ್ಯ: ಜುಲೈ ಅಂತ್ಯಕ್ಕೆ ರೇಬಿಸ್‌ನಿಂದ 25 ಜನ ಸಾವು

ಸುದ್ದಿಗಳ ವಿವರ ಈ ರೀತಿ ಇದೆ. 

1. ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಆಗ್ರಹಿಸಿ ಶುಕ್ರವಾರ ಅಖಂಡ ಕರ್ನಾಟಕ ಬಂದ್‌ಗೆ ಕರೆನೀಡಲಾಗಿದ್ದು,

ಇದಕ್ಕೆ ಸಾವಿರಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಹೀಗಾಗಿ, ಬೆಂಗಳೂರು, ಮೈಸೂರು, ರಾಮನಗರ,ಮಂಡ್ಯ

ಹಾಗೂ ಚಾಮರಾಜನಗರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಬಂದ್‌ ಇರಲಿದೆ. ಶಾಲಾ- ಕಾಲೇಜುಗಳಿಗೆ ರಜೆ ನೀಡುವುದು ಇನ್ನೂ ಹಂತಿಮವಾಗಿಲ್ಲ.

ಆದರೆ, ಈಗಾಗಲೇ ಕೆಲವು ವಿಶ್ವವಿದ್ಯಾಲಯಗಳು ಪರೀಕ್ಷೆಯನ್ನು ಮುಂದೂಡಿವೆ.

ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಬಂದ್‌ ಇರಲಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ,

ಯಾವುದೇ ಸೇವೆಗಳು ಇರುವುದಿಲ್ಲ.

ಕನ್ನಡಪರ ಸಂಘಟನೆಗಳ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬಂದ್‌ಗೆ ಕರೆ

ನೀಡಲಾಗಿದ್ದು, ಬಂದ್‌ನಲ್ಲಿ 1,900ಕ್ಕೂ ಅಧಿಕ ಕನ್ನಡಪರ ಸಂಘಗಳು ಪಾಲ್ಗೊಳ್ಳುತ್ತಿದ್ದು, ಹೆದ್ದಾರಿಗಳು ಮತ್ತು ರೈಲು ಮಾರ್ಗಗಳನ್ನು

ಬಂದ್ ಮಾಡಲು ಉದ್ದೇಶಿಸಲಾಗಿದೆ. ಹೋಟೆಲ್‌ಗಳು, ಮಾಲ್‌ಗಳು, ಟ್ಯಾಕ್ಸಿ ಮತ್ತು ಆಟೋ ರೀಕ್ಷಾ

ಸಂಘಟನೆಗಳು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಸಿನಿಮಾ ಕಲಾವಿದರ ಸಂಘ ಬಂದ್‌ಗೆ ಈಗಾಗಲೇ ಬೆಂಬಲ ವ್ಯಕ್ತಪಡಿಸಿವೆ.

ಇನ್ನು ಶುಕ್ರವಾರದ ಬಂದ್‌ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ

ಅವರು, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅವಕಾಶವಿದೆ.

ಆದರೆ, ಬಂದ್‌ ವೇಳೆ ಇತರರಿಗೆ ತೊಂದರೆಯಾಗಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

ಈ ಆದೇಶವನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಲಾಗುವುದು ಎಂದಿದ್ದಾರೆ.  

2. ಸಾಲ ಮಾಡಿ ಅದ್ಧೂರಿ ಮದುವೆ ಮಾಡಿಕೊಳ್ಳುವುದು ಅನಾರೋಗ್ಯಕಾರಿ ಬೆಳವಣಿಗೆ.

ಅಲ್ಲದೇ ವ್ಯವಸಾಯ ಮಾಡುವುದಕ್ಕೆಂದು ಸಾಲ ಮಾಡಿ ಅದರಲ್ಲಿ ಮದುವೆ ಮಾಡುವುದನ್ನು ನಿಲ್ಲಿಸಿ

ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಚಾಮರಾಜನಗರ ಜಿಲ್ಲೆಯ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ದೇವಸ್ಥಾನದ ರಂಗಮಂದಿರದ

ಆವರಣದಲ್ಲಿ ಆಯೋಜಿಸಿದ್ದ ಸಾಮೂಹಿಕ ಸರಳ ವಿವಾಹದಲ್ಲಿ ಅವರು ಮಾತನಾಡಿದರು.
-----------------------
3. ಕಾವೇರಿ ನೀರು ಹಂಚಿಕೆ ಸಂಕಷ್ಟದ ಪರಿಹಾರಕ್ಕಾಗಿ ಮತ್ತೆ ಸುಪ್ರೀಂ ಕೋರ್ಟ್‌ ಕದ ತಟ್ಟಲು ಕರ್ನಾಟಕ ನಿರ್ಧರಿಸಿದೆ.

ಕಾವೇರಿ ನಿಯಂತ್ರಣ ಸಮಿತಿಯು 3 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ನಿರ್ದೇಶನ ನೀಡಿದೆ.

ಹೀಗಾಗಿ, ಈ ಆದೇಶಕ್ಕೆ ನ್ಯಾಯಾಲಯಲದಲ್ಲಿ ಆಕ್ಷೇಪಣೆ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು

ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕಾವೇರಿ ನೀರು ನಿಯಂತ್ರಣ ಸಮಿತಿಯು 3 ಸಾವಿರ ಕ್ಯೂಸೆಕ್ ನೀರನ್ನು

ತಮಿಳುನಾಡಿಗೆ ಹರಿಸಲು ಆದೇಶಿಸಿದೆ. ಈ ಬಗ್ಗೆ ಕಾನೂನು ತಂಡದೊಂದಿಗೆ

ಚರ್ಚಿಸಿದ್ದು, ಆಕ್ಷೇಪಣೆ ಸಲ್ಲಿಸಲು ಕಾನೂನು ತಂಡ ಸಲಹೆ ನೀಡಿದೆ. ನೀರು ಬಿಡಲು ನಮ್ಮ ಬಳಿ ನೀರಿಲ್ಲ ಎಂದಿದ್ದಾರೆ.
--------------------------------- 

4. ಕೆನಡಾದ ರಾಜತಾಂತ್ರಿಕ ವಿಷಯದ ಸಮಸ್ಯೆಗಳಿಗೆ ಸಂಬಂಧಿಸಿದಂತೆ  ಭಾರತವು ಮುಕ್ತ ಮನಸ್ಸಿನಿಂದ ಪರಿಶೀಲನೆ ನಡೆಸಲಿದೆ

ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ವಿದೇಶಾಂಗ ಬಾಂಧವ್ಯ ಮಂಡಳಿ ಸಭೆಯಲ್ಲಿ ಯಾವುದಾದರೂ ನಿರ್ದಿಷ್ಟ

ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದರೆ, ಅದಕ್ಕೆ ಸೂಕ್ತ ಉತ್ತರ ನೀಡಲಾಗುವುದು ಎಂದಿದ್ದಾರೆ.

5. ರಾಜ್ಯದಲ್ಲಿ ರೇಬಿಸ್‌ನಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿಲ್ಲ.

ಕರ್ನಾಟಕದಲ್ಲಿ ರೇಬಿಸ್ ಕಾಯಿಲೆಯಿಂದಾಗಿ ಕಳೆದ ವರ್ಷ 41 ಜನ ಮೃತಪಟ್ಟಿದ್ದಾರೆ.

2023ನೇ ಸಾಲಿನ ಜುಲೈ ಅಂತ್ಯದ ವೇಳೆಗೆ 25 ಜನ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ ಕಾಯಿಲೆಯು ನಾಯಿಗಳ ಕಡಿತದಿಂದ ಹರಡುತ್ತದೆ. ಅಲ್ಲದೇ ಇದು ಮಾರಣಾಂತಿಕ ಕಾಯಿಲೆಯಾಗಿದೆ.

ವೈದ್ಯಕೀಯ ಚಿಕಿತ್ಸೆಯ ಮೂಲಕ ಇದನ್ನು ವಾಸಿ ಮಾಡಬಹುದಾಗಿದ್ದು, ರೋಗ ನಿರ್ಮೂಲನೆಗೆ ಲಸಿಕೆಗಳು,

ಔಷಧ ಸೇರಿದಂತೆ ಎಲ್ಲ ಮಾದರಿಯ ಚಿಕಿತ್ಸಾ ಸೇವೆಗಳನ್ನು ಉಚಿತವಾಗಿ ಸರ್ಕಾರ ಒದಗಿಸುತ್ತಿದೆ

ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.