News

ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಗಳಿಗೆ ಇಂದಿನಿಂದ ಬಸ್ ಸಂಚಾರ

09 June, 2020 12:06 PM IST By:

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೊರೋನಾ ಸೋಂಕು ಸಮುದಾಯಕ್ಕೆ ಹರಡುವುದನ್ನು ತಪ್ಪಿಸಲು ಕಳೆದ ಎರಡುವರೆ ತಿಂಗಳಿಂದ ಗ್ರಾಮೀಣ ಪ್ರದೇಶದಲ್ಲಿ ಬಸ್ ಸಂಚಾರ ಬಂದ್ ಮಾಡಲಾಗಿತ್ತು. ಗ್ರಾಮಾಂತರ ಪ್ರದೇಶದಲ್ಲಿ ರೈತರು, ಜನರು ತಮ್ಮ ವ್ಯವಹಾರಕ್ಕೆ ತೊಂದರೆಯಾಗಬಾರದು. ಬಸ್ ಸಂಚಾರಕ್ಕೆ ಪ್ರಯಾಣಿಕರ ಆರೋಗ್ಯ ಹಿತದೃಷ್ಟಿಯಿಂದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಮಂಗಳವಾರದಿಂದ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ಎಂದು ರಾಜ್ಯದ ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಕೊರೋನಾ ಲಾಕ್ ಡೌನ್ ಸಡಿಲಿಕೆ ಪರಿಣಾಮ ರಾಜ್ಯದ ಸಾರಿಗೆ ಸಂಸ್ಥೆಗಳು ಕಳೆದ ಮೇ-22 ರಿಂದ ಅಂತರ ಜಿಲ್ಲಾ ಸಂಚಾರವನ್ನು ರಾಜ್ಯದೊಳಗೆ ಹಂತ-ಹಂತವಾಗಿ ಆರಂಭಿಸಲಾಗಿತ್ತು. ಇದೀಗ ಜಿಲ್ಲೆಯೊಳಗೆ ಹೋಬಳಿಯಿಂದ ಗ್ರಾಮದವರೆಗೂ ಬಸ್ ಸಂಚಾರ ಅರಂಭಿಸುವಂತೆ ಸಂಸ್ಥೆಗಳಿಗೆ ಸೂಚನೆ ನೀಡಿದ್ದು, ಮಂಗಳವಾರದಿಂದ ಗ್ರಾಮದ ಕಡೆ ಸಾರಿಗೆ ಬಸ್‍ಗಳು ಮುಖ ಮಾಡಲಿವೆ ಎಂದರು.

ಲಾಕ್ ಡೌನ್‍ನಿಂದ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಸುಮಾರು 2200 ಕೋಟಿ ರೂಪಾಯಿ ನಷ್ಠ ಅನುಭವಿಸಿದೆ. ಇನ್ನೂ 3500 ಕೋಟಿ ರೂಪಾಯಿ ನಷ್ಠ ಅನುಭವಿಸುವ ಸಾಧ್ಯತೆಯಿದೆ. ಪ್ರತಿನಿತ್ಯ 1 ಕೋಟಿ ಜನರು ಸಂಚರಿಸುತ್ತಿದ್ದ ಬಸ್‍ನಲ್ಲಿ ಇದೀಗ ಪ್ರಯಾಣಿಕರ ಸಂಖ್ಯೆ 14 ಲಕ್ಷಕ್ಕೆ ಇಳಿಕೆಯಾಗಿದೆ. ಕೊರೋನಾ ಭಯದಿಂದ ಜನರು ಇನ್ನೂ ಹೊರಬಾರದ ಕಾರಣ ಶೇ.86ರಷ್ಟು ಪ್ರಯಾಣಿಕರ ಕೊರತೆಯನ್ನು ಬಸ್‍ಗಳು ಕಾಣುತ್ತಿವ.  ಮಹಾರಾಷ್ಟ್ರ ಹೊರತುಪಡಿಸಿ ಕೇರಳ, ಆಂಧ್ರ ಪ್ರದೇಶ, ಗೋವಾ, ತಮಿಳನಾಡು ನಡುವೆ ಅಂತರ ರಾಜ್ಯ ಬಸ್ ಸಂಚಾರ ಆರಂಭಿಸಲು ಪರಸ್ಪರ ಒಪ್ಪಂದ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ ಎಂದರು.

ಕೊರೋನಾ ಸಂಕಷ್ಟದ ಸಮಯದಲ್ಲಿ ಸಂಸ್ಥೆ ಆರ್ಥಿಕವಾಗಿ ನಷ್ಟ ಅನುಭವಿಸಿದ್ದರಿಂದ 1.35 ಲಕ್ಷ ಸಿಬ್ಬಂದಿಗಳ ಏಪ್ರಿಲ್ ಮತ್ತು ಮೇ ತಿಂಗಳಿನ ವೇತನ ಪಾವತಿಗೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ ಪರಿಣಾಮ 652 ಕೊಟಿ ರೂಪಾಯಿ ಸಂಸ್ಥೆಗೆ ಬಿಡುಗಡೆ ಮಾಡಲಾಗಿದೆ. ಏಪ್ರಿಲ್ ತಿಂಗಳಿನ ವೇತನ ಈಗಾಗಲೇ ಸಿಬ್ಬಂದಿಗಳಿಗೆ ಪಾವತಿಸಿದ್ದು, ಮೇ ತಿಂಗಳ ವೇತನ ಸಹ ಶೀಘ್ರ ಸಿಬ್ಬಂದಿಗಳ ಕೈಸೇರಲಿದೆ ಎಂದರು.

ದರ ಹೆಚ್ಚಿಸುವ ಪ್ರಸ್ತಾವನೆ ಇಲ್ಲ: ಕಳೆದ ನಾಲ್ಕು ತಿಂಗಳ ಹಿಂದೆ ಶೇ.12.5 ರಷ್ಟು ಸಾರಿಗೆ ದರವನ್ನು ಹೆಚ್ಚಿಸಿದ್ದು, ಪ್ರಸ್ತುತ ದರ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದಾರೆ.