News

ಪಡಿತರ ಪಡೆಯಲು ಬೆರಳಚ್ಚು (ಬಯೋಮೆಟ್ರಿಕ್) ಕಡ್ಡಾಯವಲ್ಲ- ಒಟಿಪಿ, ಚೆಕ್ ಲಿಸ್ಟ್ ಮೂಲಕ ಪಡಿತರ ನೀಡಲು ಆದೇಶ

13 May, 2021 5:00 PM IST By:

ಕೋವಿಡ್‌ 2ನೇ ಅಲೆ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರು ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕರ ಆರೋಗ್ಯ ರಕಣೆಯ ದೃಷ್ಟಿಯಿಂದ ಮೇ ತಿಂಗಳ ಪಡಿತರವನ್ನು ಬೆರಳಚ್ಚು ಪಡೆಯದೆ ವಿತರಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ ಆದೇಶ ಹೊರಡಿಸಿದೆ.

ಮೊಬೈಲ್ ಒಟಿಪಿ ಮತ್ತು ಚೆಕ್ ಲಿಸ್ಟ್ ಮೂಲಕ ಪಡಿತರ ವಿತರಿಸುವಂತೆ ನ್ಯಾಯಬೆಲೆ ಅಂಗಡಿಗಳ ಮಾಲಿಕರಿಗೆ ರಾಜ್ಯ ಸರ್ಕಾರ ಆದೇಶಿಸಿದೆ. ಪಡಿತರ ಪಡೆಯಲು ಬೆರಳಚ್ಚು (ಬಯೋಮೆಟ್ರಿಕ್) ಕಡ್ಡಾಯವಲ್ಲ ಎಂದು ತಿಳಿಸಿದೆ.

ಮೇ ತಿಂಗಳಲ್ಲಿ ಪಡಿತರ ವಿತರಣೆಗೆ ಸಂಬಂಧಪಟ್ಟಂತೆ ಕೆಲ ಪರ್ಯಾಯ ಅವಕಾಶಗಳನ್ನುನೀಡಿದೆ. ಪಡಿತರ ಚೀಟಿದಾರರು ಆಧಾರ್‌ ಸಂಖ್ಯೆಯೊಂದಿಗೆ ಜೋಡಿಸಿಕೊಂಡಿರುವ ಮೊಬೈಲ್‌ ಸಂಖ್ಯೆಗೆ ಪಡೆದ ಓಟಿಪಿ ನೀಡಿ ಪಡಿತರ ಪಡೆಯಬಹುದು.

ವಯೋವೃದ್ಧರು, ಅನಾರೋಗ್ಯಪೀಡಿತರು, ವಿಕಲಚೇತನರಿಗೆ ವಿನಾಯ್ತಿ ಸೌಲಭ್ಯದಡಿ ಪಡಿತರ ವಿತರಿಸಲಾಗುತ್ತದೆ. ಪಡಿತರ ಚೀಟಿದಾರರ ಪರಿಶೀಲನಾ ಪಟ್ಟಿ, ಕೈಬರಹಬಿಲ್‌ ಮೂಲಕವೂ ನೇರವಾಗಿ ಪಡಿತರ ವಿತರಿಸಲಾಗುತ್ತದೆ. ಪಡಿತರ ಪಡೆಯಲು ರಾಜ್ಯ ಹಾಗೂ ಹೊರರಾಜ್ಯದಪಡಿತರ ಚೀಟಿದಾರರಿಗೆ ಪೋರ್ಟೆಬಿಲಿಟಿ ಸೌಲಭ್ಯದಮೂಲಕ ಪಡಿತರ ವಿತರಿಸಲಾಗುತ್ತದೆ ಎಂದು ಇಲಾಖೆ ಆಯುಕ್ತ ಡಾ.ಶಮ್ಲಾ ಇಕ್ಬಾಲ್‌ ತಿಳಿಸಿದ್ದಾರೆ.

ಆಧಾರ್ ಒಟಿಪಿ, ಚೆಕ್ ಲಿಸ್ಟ್, ಕೈಬಿಲ್ಲು (ಮ್ಯಾನುವಲ್) ಮೂಲಕವೂ ಪಡಿತರವನ್ನು ಚೀಟಿದಾರರಿಗೆ ನೇರವಾಗಿ ವಿತರಣೆ ಮಾಡಬೇಕು. ಹಾಗೂ ರಾಜ್ಯಮತ್ತು ಹೊರ ರಾಜ್ಯದ ವಲಸಿಗರಿಗೆ ಪೋರ್ಟಬಿಲಿಟಿ ಮೂಲಕ ಪಡಿತರ ವಿತರಿಸಬೇಕೆಂದು ಇಲಾಖೆ ತಿಳಿಸಿದೆ.

ಕಾರ್ಡ್ ದಾರರಿಗೆ ಅನುಕೂಲವಾದಲ್ಲಿ ದೂರುಗಳನ್ನು ಬೆಂಗಳೂರಿನ ಆಯುಕ್ತಾಲಯದ ನಿಯಂತ್ರಣ ಕೊಠಡಿ ಸಂಖ್ಯೆ 1967,ಅಥವಾ 1800-425 9339 ಮತ್ತು 1445 ದಾಖಲಿಸಲು ಕೋರಿದೆ. ಗ್ರಾಮ ಪಂಚಾಯತಿ ಅಥವಾ ತಹಶೀಲ್ದಾರರಿಗೂ ದೂರು ಕೊಡಬಹುದು.