News

ಹಲಸಿನ ಹಣ್ಣು (jackfruit)ತಿಂದು ಪಡೆಯಿರಿ ಹಲವಾರು ಉಪಯೋಗ

22 August, 2020 8:23 AM IST By:

ಹಲಸಿನ ಹಣ್ಣು ಕಂಡರೆ ಯಾರಿಗಾದರೂ ಬಾಯಲ್ಲಿ ನೀರೂರದೆ ಇರದು. ಹಲಸಿನ ಹಣ್ಣನ್ನು ಪಕ್ಕದ ಮನೆಯವರು ತಂದು ಯಾವುದಾದರೂ ಮೂಲೆಯಲ್ಲಿ ಅವಿತಿಟ್ಟರೂ ಸಹ ಅದರ ವಾಸನೆ ಬಂದೇ ಬರುತ್ತದೆ. ಹಲಸಿನ ಹಣ್ಣಿನ ತಾಕತ್ತೇ ಅಂತಹದ್ದು.

ಬೇರೆ ಹಣ್ಣುಗಳಿಗೆ ಹೋಲಿಸಿದರೆ ಹಲಸಿನ ಹಣ್ಣು ನೋಡುವುದಕ್ಕೆ ಗಜಗಾತ್ರ . ಇದು ಕೇವಲ ಮೇಲೆ ನೋಡಲು ಮಾತ್ರ ಒರಟು, ಮುಳ್ಳು ಮುಳ್ಳು. ಆದರೆ ಒಳಗಿನ ಪ್ರತಿಯೊಂದು ಭಾಗವೂ ( ಹಲಸಿನ ತೊಳೆ ಮತ್ತು ಹಲಸಿನ ಬೀಜಗಳು ) ನಮಗೆ ಉಪಯೋಗಕ್ಕೆ ಬರುತ್ತವೆ. ಒಳಗಿರುವ ಮೃದುವಾದ ಹಣ್ಣು ಸವಿಯಲು ಬಲು ರುಚಿಕರ. ಹಲಸಿನ ಹಣ್ಣಿನ ತೊಳೆಗಳನ್ನು ತಿಂದು ಸಿಹಿಯ ರುಚಿ ಅನುಭವಿಸಿದರಿಗೆ ಗೊತ್ತು ಅದರ ಸವಿ.

ಬಿಳಿ, ಹಳದಿ, ಹೆಬ್ಬು, ಚಂದ್ರ, ಅಂಬು, ಬಿಳಿ ತೊಳೆ ಹಲಸಿನ ಹಣ್ಣುಗಳಿವೆ. ಅಂಬು ಹಲಸಿನ ಹಣ್ಮು ಕೊಡಗು, ಹೆಬ್ಬು ಹಲಸು ಸಕಲೇಪುರ ವ್ಯಾಪ್ತಿಯಲ್ಲಿ ಹೆಚ್ಚು ಹೆಸರುವಾಸಿ. ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಚಂದ್ರ ತೊಳೆ ಹಲಸಿನ ಹಣ್ಣನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಹಣ್ಣಿನಲ್ಲಿ  ನೈಸರ್ಗಿಕವಾಗಿ ಅಡಗಿರುವ ಪೋಷಕಾಂಶಗಳು ಮತ್ತು ಖನಿಜಾಂಶಗಳು ಮನುಷ್ಯನ ದೇಹಕ್ಕೆ ಬಹಳ ಉಪಯೋಗ ತರುತ್ತವೆ

ತೂಕ ಇಳಿಸಿಕೊಳ್ಳುವಲ್ಲಿ (Weight loss) ಪರ್ಫೆಕ್ಟ್ ಹಣ್ಣು

ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಯಾವ ಭಯವೂ ಇಲ್ಲದೆ ಹಲಸಿನ ಸೇವನೆ ಮಾಡಬಹುದು . ಇದರಿಂದ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು.

ಹಲಸಿನ ಹಣ್ಣಿನ ತೊಳೆಗಳಲ್ಲಿ ಕೇವಲ ಪ್ರೋಟಿನ್ ಅಂಶ ಮಾತ್ರವಲ್ಲದೆ ನಾರಿನ ಅಂಶ ವಿಟಮಿನ್ ' ಎ ', ವಿಟಮಿನ್ ' ಸಿ ', ರಿಬಾಫ್ಲವಿನ್, ಮೆಗ್ನೀಷಿಯಂ, ಪೊಟ್ಯಾಶಿಯಂ, ತಾಮ್ರ ಮತ್ತು ಮ್ಯಾಂಗನೀಸ್ ಅಂಶಗಳು ಇತರ ಹಣ್ಣುಗಳಿಗೆ ಹೋಲಿಸಿದರೆ ದುಪ್ಪಟ್ಟಾಗಿವೆ. ನಮ್ಮ ದೇಹಕ್ಕೆ ಅಗತ್ಯವಿರುವ ಆರೋಗ್ಯಕರ ಮತ್ತು ಬಹಳ ಪ್ರಯೋಜನಕಾರಿಯಾದ ಆಂಟಿ - ಆಕ್ಸಿಡೆಂಟ್ ಅಂಶಗಳು ಇದರಲ್ಲಿ ಲಭ್ಯವಿವೆ.

ನಿದ್ರಾಹೀನತೆ (Insomnia) ದೂರ:

ಹಲಸಿನ ಹಣ್ಣು ತಿಂದರೆ ನಿದ್ರಾಹೀನತೆ ದೂರವಾಗುತ್ತದೆ. ಚರ್ಮಕ್ಕೆ ಹೊಳಪು ನೀಡುತ್ತದೆ. ಅಲ್ಸರ್ ಸಮಸ್ಯೆ ನಿವಾರಣೆಯಾಗುತ್ತದೆ. ಮೂಳೆಗಳನ್ನು ಬಲಪಡಿಸುವ ವಿಶೇಷ ಸಾಮರ್ಥ್ಯವೂ ಇದರಲ್ಲಿದೆ.

ಹಲಸಿನ ಹಣ್ಣು ಮಧುಮೇಹಿಗಳಿಗೆ ಸೂಕ್ತ:

ಹಲಸಿನ ಹಣ್ಣಿನಲ್ಲಿ ಹಲವಾರು ಬಗೆಯ ಒಳ್ಳೆಯ ಗುಣ ಲಕ್ಷಣಗಳು ಸೇರಿದ್ದು, ನಮ್ಮ ರಕ್ತದಲ್ಲಿನ ಸಕ್ಕರೆ ಅಂಶದ ಮಟ್ಟವನ್ನು ನಿರ್ವಹಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಧುಮೇಹ ಸಮಸ್ಯೆಯನ್ನು ಹೊಂದಿರುವವರು ಹಲಸಿನ ಹಣ್ಣಿನ ತೊಳೆಗಳನ್ನು ಯಾವುದೇ ಅನುಮಾನವಿಲ್ಲದೆ ತಿನ್ನಬಹುದು. ಏಕೆಂದರೆ ಹಲಸಿನ ಹಣ್ಣು ಸಿಹಿ ಇದ್ದರೂ ಸಹ ಇದರಲ್ಲಿ ಗ್ಲೈಸೆಮಿಕ್ ಸೂಚ್ಯಂಕ ತುಂಬಾ ಕಡಿಮೆ ಇದೆ.

ರಕ್ತದ ಒತ್ತಡವನ್ನು (BP) ಸಮತೋಲನವಾಗಿಸುತ್ತದೆ:

ಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿರುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ ಕಡಿಮೆಯಾಗಿ ದೇಹದ ತುಂಬಾ ಹಬ್ಬಿರುವ ರಕ್ತ ನಾಳಗಳ ಮೇಲೆ ಒತ್ತಡ ಕಡಿಮೆಯಾಗಿ ರಕ್ತ ಸಂಚಾರ ಸುಗಮಗೊಳ್ಳುತ್ತದೆ. ಹೃದಯ ಸಂಬಂಧಿ ರೋಗಗಳು ದೂರವಾಗುತ್ತದೆ.