News

ಬಣ್ಣದ ಕಾರಣಕ್ಕೆ ಟ್ರೋಲ್‌ ಆಗಿದ್ದ ಆಟ್ಲೀ ಬಾಲಿವುಡ್‌ನಲ್ಲಿ ಗೆದ್ದರು!

10 September, 2023 3:08 PM IST By: Hitesh
Atlee, who was trolled because of his color, won in Bollywood!

ಆಟ್ಲೀ ತಂದ ಸಂತಸ.....

ಭಾರತದಲ್ಲಿ ಜಾತಿ ತಾರತಮ್ಯದಂತೆಯೇ ವರ್ಣ ತಾರತಮ್ಯವೂ ಢಾಳಾಗಿದೆ. ಆದರೆ, ವರ್ಣಭೇದದ ಬಗ್ಗೆ ನಮ್ಮಲ್ಲಿ ಚರ್ಚೆ ಆಗಿದ್ದು ಕಡಿಮೆ…

ನಮ್ಮಲ್ಲಿನ ವರ್ಣ ತಾರತಮ್ಯ ಮನುಷ್ಯನನ್ನು ಒಳಗಿನಿಂದಲೇ ದುರ್ಬಲರನ್ನಾಗಿಸುತ್ತದೆ.

ಮನೋಧೈರ್ಯವನ್ನು ಕುಗ್ಗಿಸುತ್ತದೆ. ಬಣ್ಣದ ವಿಚಾರದಲ್ಲಷ್ಟೇ ಅಲ್ಲ..

ತೂಕ, ಎತ್ತರ, ವಕ್ರ ಹಲ್ಲು, ಉಬ್ಬು ಹಲ್ಲಿನ ನ್ಯೂನ್ಯತೆಗಳ ಬಗ್ಗೆ ಸಮಾಜ ನಡೆಸಿಕೊಳ್ಳುವ ರೀತಿಯಿಂದಲೇ ಸಣ್ಣದೊಂದು  ಕೀಳಿರಿಮೆ ನಮ್ಮಲ್ಲಿ ಬೆಳೆದು ಬಿಡುತ್ತದೆ.

ಲೇಖಕರಾದ ಹರೀಶ್ ಗಂಗಾಧರ್ (Harish Gangadhar) ಅವರು ಆಟ್ಲೀ ತಂದ ಸಂತಸ ಎನ್ನುವ ಶೀರ್ಷಿಕೆಯೊಂದಿಗೆ ತಮಿಳು ಚಿತ್ರರಂಗದ

ನಿರ್ದೇಶಕ ಆಟ್ಲೀ ಅವರ ಯಶಸ್ಸು ಹಾಗೂ ಅವರು ಅನುಭವಿಸಿರುವ ಅವಮಾನವನ್ನು

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಬರಹ ಇದೀಗ ಸಾಕಷ್ಟು ವೈರಲ್‌ ಸಹ ಆಗುತ್ತಿದೆ.

ಗಂಗಾಧರ್‌ ಅವರ ಬರಹ ಈ ರೀತಿ ಇದೆ.

ಭಾರತದಲ್ಲಿ ಕಪ್ಪು ಅನ್ನುವುದು ಅಪಶಕುನ, ನಕಾರಾತ್ಮಕತೆಯ ಸಂಕೇತ.

ಕಪ್ಪು ಎಂದೊಡನೆ ಕೊಳಕು, ಕಪಟಿ, ನೀಚ ಎಂಬ ಅರ್ಥಗಳು ನಮ್ಮ ಮನದಲ್ಲಿ ಹುಟ್ಟಿಕೊಳ್ಳುತ್ತವೆ.

ಬ್ಲ್ಯಾಕ್ ಫ್ರೈಡೇ, ಬ್ಲ್ಯಾಕ್ ಮ್ಯಾಜಿಕ್, ಡಾರ್ಕ್ ಫ್ಯಾಂಟಸಿ, ಕಪ್ಪು ಹಣ, ಕಾರ್ಮೋಡ, ಕರಾಳ ದಿನ, ಕಗ್ಗತ್ತಲು ನಾವು ದಿನನಿತ್ಯ ಬಳಸುವ ಪದಗಳು.

ಬೆಳಕು ಎಂಬ ಪದಕ್ಕೆ ವಿರುದ್ಧವಾಗಿಯೆ ನಾವು ಇವುಗಳನ್ನ ಬಳಸುತ್ತೇವೆ.

ಬಾಹುಬಲಿ ಚಿತ್ರದಲ್ಲಿ ಕಾಲಕೇಯ ಸೇನೆಯೊಂದು ಮಾಹಿಷ್ಮತಿ ರಾಜ್ಯದ ಮೇಲೆ ದಾಳಿ ಮಾಡುತ್ತದೆ.

ಈ ಕಾಲಕೇಯ ಸೈನಿಕರು ಕಪ್ಪುವರ್ಣದವರು, ಅನಾಗರಿಕರು, ಮೈಗೇ ರುಂಡ ಮುಂಡ ತಗಲಾಕಿಕೊಂಡ ನರಭಕ್ಷಕರು.

ಎಲ್ಲಕ್ಕಿಂತ ಮುಖ್ಯವಾಗಿ ಥಿಯೇಟರ್ ಒಳಗೆ ಕೂತ ಪ್ರೇಕ್ಷಕನಿಗೆ ಅರ್ಥವಾಗದ ಭಾಷೆ ಮಾತನಾಡುವವರು!

ಈ ಒಂದು ಉದಾಹರಣೆಯಲ್ಲೆ ಕಪ್ಪು ಅನ್ನುವ ಪದ ಅನಾಗರಿಕ, ನರಭಕ್ಷಕ, ಅನ್ಯ, ಅರ್ಥವಾಗದವ ಎಂಬ ಪದಗಳ ಜೊತೆಗೆ ತಳುಕುಹಾಕಿಕೊಂಡಿದೆ. 

ಬಾಹುಬಲಿ ಚಿತ್ರದಲ್ಲೇ ಬಿಜ್ಜಳದೇವನ ಪಾತ್ರವನ್ನೇ ತೆಗೆದುಕೊಂಡರು ಅಂಗವೈಕಲ್ಯವಿರುವವರು ಕುತಂತ್ರಿಗಳು ಎಂಬುದನ್ನ ನೋಡುಗರ

ಮನದಲ್ಲಿ ಘನಿಕರಿಸುತ್ತದೆ. ಕುಂಟುವ ಶಕುನಿ, ಗೂನು ಬೆನ್ನಿನ ಮಂಥರೆ, ಕಪ್ಪು ವರ್ಣದ ಶೂರ್ಪನಕಿ... ಎಷ್ಟೆಲ್ಲಾ ಉದಾಹರಣೆಗಳು...

ವಸಾಹತುಶಾಯಿಗಳು, ಫ್ಯಾಸಿಸ್ಟರು, ಸಂಪ್ರದಾಯವಾದಿಗಳು, ಮೂಲಭೂತವಾದಿಗಳ ಹೊರನೋಟಗಳಲ್ಲಿ, ಆಲೋಚನಾ ಕ್ರಮಗಳಲ್ಲಿ ಎಷ್ಟೆಲ್ಲಾ ಸಾಮ್ಯತೆಗಳಿವೆ!!!

ಭಾರತ ಎಷ್ಟು ಜಾತಿವಾದಿ ರಾಷ್ಟ್ರವೋ ಅಷ್ಟೇ ವರ್ಣ ಪ್ರಜ್ಞಾ ರಾಷ್ಟ್ರ ಕೂಡ.

ಅದಷ್ಟೇ ಅಲ್ಲ ದೇಹವನ್ನ ನೆಪವಾಗಿಟ್ಟುಕೊಂಡು ಹಿಯಾಳಿಸುವುದು, ಟೀಕಿಸುವುದು ಇಲ್ಲಿ ಸರ್ವೇ ಸಾಮಾನ್ಯ.

ಶಾಲಾ ದಿನಗಳಲ್ಲಿ ದಡಿಯ, ಕರಿಯ, ಕುಳ್ಳ, ಕೊಳಕ, ಕಡ್ಡಿ, ಕರಡಿ, ಕೋತಿ, ತುರೆಮಣೆ

ಅಂತ ಹೆಸರಿಟ್ಟು ಕೂಗುತ್ತಾ ಅವರ ಆತ್ಮ ಗೌರವವನ್ನೇ ನಾಶ ಮಾಡುವ ಕೆಲಸ  ಸುರದೃಪಿಗಳಿಂದ, ಶಿಕ್ಷಕರಿಂದ ಮತ್ತು ಒಟ್ಟಾರೆ ಸಮಾಜದಿಂದ ಆಗುತ್ತಲೆ ಇರುತ್ತದೆ.

ಇಷ್ಟೆಲ್ಲಾ ನೆನಪಾಗಿದ್ದು ತಮಿಳು ನಿರ್ದೇಶಕ (Atlee Kumar) ಆಟ್ಲೀ ಕುಮಾರ್‌ ಅವರನ್ನ ನೋಡಿದಾಗ.

ಆಟ್ಲೀ- ಅರುಣ್ ಕುಮಾರ್ 2014 ರಲ್ಲಿ ಕೃಷ್ಣಪ್ರಿಯರವರನ್ನ ವರಿಸಿದರು.

ಬಹುಶಃ ಅರುಣ್ ಮತ್ತು ಕೃಷ್ಣಪ್ರಿಯ ಟ್ರೊಲ್ ಆದಷ್ಟು ಭಾರತದಲ್ಲಿ ಬೇರಾವ ದಂಪತಿಗಳು ಆಗಿಲ್ಲ ಅನ್ನಿಸುತ್ತೆ.

" ದುಡ್ಡಿದ್ದರೆ ಮಂಗನನ್ನು  ಮದುವೆ ಆಗುತ್ತಾರೆ ಈ ಹೆಣ್ಣು ಮಕ್ಕಳು, ಈ ಕರಿಯನಿಗೆ ಈ ಗೊಂಬೆ ಹೇಗೆ ಬಿದ್ದಳು?

ಅದು ಇದು ಅಂತ ದಿನನಿತ್ಯ ಅರುಣ್ ಟ್ರೊಲ್ ಅಗಿದ್ದು ನೆನಪಿದೆ.

ಅರುಣ್ ಯಶಸ್ವಿ ನಿರ್ದೇಶಕನಾಗುವುದಕ್ಕೆ ಹತ್ತಾರು ವರ್ಷ ಶ್ರಮಪಟ್ಟಿದ್ದಾರೆ.

ಅವರ ಸವೆಸಿದ ಹಾದಿ ಕಲ್ಲು ಮುಳ್ಳಿನದ್ದೆ ಆಗಿದೆ.

ನೀಳ ಕಾಯದ, ಎತ್ತರದ ನಿಲುವಿನ, ಅಗಲ ಭುಜದ, ಉದ್ದನೆಯ  ಮೂಗಿನ, ಶ್ವೇತ ವರ್ಣದ ದೇವರುಗಳನ್ನ ಸ್ಮರಣೆ ಮಾಡುತ್ತಾ

ಬದುಕುವ ಜನರಿಗೆ ಕುಬ್ಜದೇಹದ, ಸ್ಥೂಲಕಾಯದ, ಕಪ್ಪು ವರ್ಣದ ಮಾನವರು ದುಷ್ಟರು, ಠಕ್ಕರು, ಸೋಮಾರಿಗಳು ಮತ್ತು ರಾಕ್ಷಸರ ಸಂಕೇತವೇನಿಸಬಹುದು.

ಶಾಲಾ ದಿನಗಳಲ್ಲಿ ಡುಮ್ಮ, ದಡಿಯ ಎಂಬ ಅಡ್ಡೆಸರುಗಳಿಗೆ ಒಗ್ಗಿಹೋಗಿದ್ದ ನನಗೆ ಕಾಲೇಜು ದಿನಗಳಲ್ಲಿ ಕೀಳರಿಮೆ ಕಾಡತೊಡಗಿತು.

ನಮ್ಮ ದೇಹದ ಜೊತೆಗೆ ಒಂದು ಸಖ್ಯ, comfortable rapport ಬೆಳೆಸಿಕೊಳ್ಳುವುದು ಎಷ್ಟು ಕಷ್ಟ.

ನನ್ನ ಮದುವೆಯಲ್ಲಿ ನನ್ನ ಮಡದಿಗೆ ಹೋಲಿಸಿ ನನ್ನ ವರ್ಣದ ಬಗ್ಗೆ ಕೆಲವರು ಹಗುರಾಗಿ ಮಾತನಾಡಿದ್ದು ಇದೆ.

ಆ ಮಾತುಗಳಿಂದ ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಇದೆ.

ಈಗಲೂ ಅಪ್ರಜ್ಞಾಪೂರ್ವಕವಾಗಿ ನನ್ನ ಇಡಿಯ ಜೀವನ ಹಗುರಾಗಿ ಮಾತನಾಡಿಕೊಂಡವರ ಅನಿಸಿಕೆ ತಪ್ಪೆಂದು ಸಾಬೀತು ಮಾಡುವುದರಲ್ಲೇ

ಕಳೆದುಬಿಡುತ್ತಿದ್ದೇನಾ ಎಂಬ ಸಂಶಯ ಸದಾ ಕಾಡುತ್ತದೆ.

ಕೀಳರಿಮೆಯ ಸುಳಿಯಿಂದ  ಹೊರಬರಲು ತುಸು ರಭಸವಾಗಿಯೇ ಕೈ ಕಾಲು ಹೊಡೆಯುತ್ತಿದ್ದೇನೆಯೆ ಎಂಬ ಪ್ರಶ್ನೆ ಮೂಡುತ್ತದೆ.

ಯಾರೋ ಹಗುರಾಗಿ ಮಾಡಿದ ಸಿಲ್ಲಿ ಕಮೆಂಟ್ಸ್ ನನ್ನ ಅಂತರ್ಮುಖೀ ವ್ಯಕ್ತಿತ್ವ ರೂಪಿಸಿಬಿಟ್ಟವೆ ಎಂದು ದಿಗಿಲಾಗುತ್ತದೆ.

ಬದುಕಿನ ಅನುಭವಗಳಿಂದ ಜೀವನ ಒಂದು ಅಂತ್ಯವಿಲ್ಲದ ಕದನ, "ನಾನು ಮತ್ತು ನಾನು" ನಡುವಿನ ನಿತ್ಯ ಸಣೆಸಾಟ ಎಂಬುದು ಮಾತ್ರ ಗೊತ್ತು.

ಆಟ್ಲೀ ನಿರ್ದೇಶನದ "ಜವಾನ್" ಸೂಪರ್ ಹಿಟ್ ಆಗಿದೆ. ಟ್ರೊಲ್ ಮಾಡಿದವರು ಅಂದು ಅರುಣ್ ಅವರ ಆಕರ್ಷಕ ಮತ್ತು ಅಪರೂಪದ ನಗು,

ಮುಖಲಕ್ಷಣಗಳನ್ನ ಗಮನಿಸಿರಲಿಲ್ಲ ಎಂಬುದರ ಬಗ್ಗೆ ಖಾತ್ರಿಯಿತ್ತು.

ಆದರೆ ವರ್ಣ, ಜಾತಿ, ವರ್ಗ ಮೀರಿ ಕ್ಷಮತೆ, ಪ್ರತಿಭೆಯನ್ನು ಗುರುತಿಸಲಾಗದ ಅಂಧರು ಕೂಡ ಈ ಟ್ರೊಲ್ ಸೇನೆಯವರೆಂದು ಇಂದು ಮನದಟ್ಟಾಯಿತು...

ಆಟ್ಲೀ ಗೆದ್ದದ್ದು ನಾನು ಗೆದ್ದಷ್ಟೆ ಖುಷಿಯಾಯ್ತು” ಎಂದಿದ್ದಾರೆ.