News

ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಅರ್ಜಿ ಸಲ್ಲಿಸಿ ಸಾಲ ಪಡೆಯಿರಿ

06 September, 2020 6:00 PM IST By:

ಲಾಕ್ಡೌನ್ ದಿಂದಾಗಿ ಉದ್ಯೋಗ ಕಳೆದುಕೊಂಡಿದ್ದೀರಾ ? ಯಾವುದಾದರೂ ಹೊಸ ಉದ್ಯೋಗ ಮಾಡಬೇಕೆಂದುಕೊಂಡಿದ್ದೀರಾ? ಸ್ವಾವಲಂಬಿಯಾಗಿ ಬದುಕು ಸಾಗಿಸಬೇಕೆಂದುಕೊಂಡಿದ್ದರೆ  ಸ್ವಯಂ ಉದ್ಯೋಗಕ್ಕಾಗಿ ಅರ್ಜಿಸಲ್ಲಿಸಿ ಸಾಲ ಸೌಲಭ್ಯಪಡೆಯಬಹುದು.  ಅದು ಹೇಗೆ ಅಂದುಕೊಂಡಿದ್ದೀರಾ......ಇಲ್ಲಿದೆ ಮಾಹಿತಿ.

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ 2020-21ನೇ ಸಾಲಿನ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ ಅಡಿ  ಗ್ರಾಮೀಣ ಪ್ರದೇಶದ ನಿರುದ್ಯೋಗ ಯುವಕ, ಯುವತಿಯರು ಸ್ವಯಂ ಉದ್ಯೋಗಕ್ಕೆ (self employment ಅರ್ಜಿ ಹಾಕಬಹುದು.

ಸೇವಾ ಚಟುವಟಿಕೆಗಳಿಗೆ ಗರಿಷ್ಠ 10 ಲಕ್ಷ ರೂಪಾಯಿ ಹಾಗೂ ಇತರೆ ಕೈಗಾರಿಕೆಗಳಿಗೆ 25 ಲಕ್ಷ ರೂಪಾಯಿ ರಾಷ್ಟ್ರೀಕೃತ ಅಥವಾ ಗ್ರಾಮೀಣ ಬ್ಯಾಂಕುಗಳ ಮೂಲಕ ಸಾಲ ನೀಡಲಾಗುವುದು.  ಸಾಲ ಮಂಜೂರಾದರೆ ಎರಡು ವಾರ ತರಬೇತಿಯನ್ನು ಸಹ ನೀಡಲಾಗುವುದು.

ಸಾಮಾನ್ಯ ವರ್ಗಕ್ಕೆ ಸಹಾಯಧನ ಶೇ.25 ಹಾಗೂ ವಿಶೇಷ ವರ್ಗದ ಪ.ಜಾತಿ ಹಾಗೂ ಪ.ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಾಜಿ ಸೈನಿಕರು, ಅಂಗವಿಕಲರು, ಮಹಿಳಾ ಫಲಾನುಭವಿಗಳಿಗೆ ಸಹಾಯಧನ ಶೇ.35 ರಷ್ಟು ಪಡೆಯಲು ಅವಕಾಶವಿರುತ್ತದೆ.

ಕೃಷಿ ಆಧಾರಿತ ಮತ್ತು ಆಹಾರ ಉದ್ದಿಮೆಗಳು:

ಜೇನು ಸಾಕಾಣೆ, ಹಾಲಿನ ಉತ್ಪನ್ನಗಳ ಘಟಕ, ಪಶು ಆಹಾರ,ಕೋಳಿ ಆಹಾರ ತಯಾರಿಕೆ, ಹಣ್ಣು ಮತ್ತು ತರಕಾರಿಗಳ ಪರಿಷ್ಕರಣೆ, ಗಾಣ ಎಣ್ಣೆ ತಯಾರಿಕೆ, ಮೆಂಥಾಲ್ ಎಣ್ಣೆ ತಯಾರಿಕೆ, ತೆಂಗಿನ ನಾರು ಹಾಗೂ ಇತರೆ ನಾರು ಉದ್ದಿಮೆ,  ರಾಗಿ ಮತ್ತು ಮೆಕ್ಕೆ ಜೋಳದ ಪರಿಷ್ಕರಣೆ, ಬೆಂಡಿನ ಕೆಲಸ, ಚಾಪೆ ಹಾಗೂ ಹೂವಿನ ಹಾರಗಳು ಇತ್ಯಾದಿಗಳ ತಯಾರಿಕೆ, ಗೋಡಂಬಿ ಪರಿಷ್ಕರಣೆ, ಅಡಿಕೆ ಎಲೆಯ ತಟ್ಟೆ,ದೊನ್ನೆ ತಯಾರಿಕೆಗೂ ಸಾಲ ನೀಡಲಾಗುವುದು.

ಬ್ಯಾಂಕುಗಳು ಉದ್ದಿಮೆದಾರಿಗೆ ಸಾಲ ಮಂಜೂರುಮಾಡಿ ಮೊದಲನೆ ಕಂತಿನ ಹಣ ಬಿಡುಗಡೆ ಮಾಡಿದ ನಂತರ ಬ್ಯಾಂಕಗಳು ಅಂಚುಹಣ (ಮಿಡಲ್ ಎಂಡ್ ಸಬ್ಸಿಡಿ) ಕ್ಲೈಮ್ ಮಾಡಿ ಅಂಚು ಹಣವನ್ನು ಉದ್ದಿಮೆದಾರರ ಹೆಸರಿನಲ್ಲಿ ಟಿ.ಡಿ.ಆರ್.ಖಾತೆಯಲ್ಲಿ 3 ವರ್ಷ ಠೇವಣಿ ಇಡಬೇಕಾಗಿರುತ್ತದೆ. ಘಟಕ ಕೆಲಸ ಮಾಡುವುದನ್ನು ಪರಿಶೀಲಿಸಿದ ನಂತರ ಉದ್ದಿಮೆದಾರರ ಸಾಲದ ಖಾತೆಗೆ ಜಮಾ ಮಾಡಿಕೊಳ್ಳಲು ತಿಳಿಸಲಾಗುವುದು. ಟಿ.ಡಿ.ಆರ್. ಖಾತೆಯಲ್ಲಿ ಇಟ್ಟ ಹಣಕ್ಕೆ ಬ್ಯಾಂಕಗಳು ಬಡ್ಡಿ ನೀಡಬೇಕಾಗಿಲ್ಲ ಹಾಗೂ ಉದ್ದಿಮೆದಾರರಿಗೆ ನೀಡಿದ ಅಷ್ಟೆ ಮೊತ್ತದ ಸಾಲದ ಹಣಕ್ಕೂ ಬ್ಯಾಂಕ್ ಬಡ್ಡಿ ವಿಧಿಸುವುದಿಲ್ಲ.

ಅರ್ಜಿಯ ಜೊತೆಗೆ ಸಲ್ಲಿಸಬೇಕಾದ ದಾಖಲಾತಿಗಳು:

ಆನ್‌ಲೈನ್‌ ಮೂಲಕ ಸಲ್ಲಿಸಿದ ಮುದ್ರಿತ ಅರ್ಜಿಯೊಂದಿಗೆ ಭಾವಚಿತ್ರಗಳು-2 ವಾಸಸ್ಥಳ ದೃಢೀಕರಣ ಪತ್ರ, ಯೋಜನಾ ವರದಿ, ಸ್ಥಾಪಿಸುವ ಘಟಕ ಗ್ರಾಮೀಣ ಪ್ರದೇಶವಾಗಿರುವುದಕ್ಕೆ ದಾಖಲಾತಿ, ಜಾತಿ ಪ್ರಮಾಣ ಪತ್ರ/ಮಾಜಿ ಸೈನಿಕ/ಅಂಗವಿಕಲರಾಗಿರುವುದಕ್ಕೆ ದಾಖಲಾತಿ, ವಿದ್ಯಾಭ್ಯಾಸ/ತಾಂತ್ರಿಕ ವಿದ್ಯಾರ್ಹತೆ ಪ್ರಮಾಣ ಪತ್ರದ ಪ್ರತಿ, ಯಂತ್ರೋಪಕರಣಗಳ ದರ ಪಟ್ಟಿ, ಪಂಚಾಯತ್ ಲೈಸೆನ್ಸ್, ಘಟಕದ ಕಟ್ಟಡದ ದಾಖಲಾತಿಗಳು, ಹಾಗೂ ಉದ್ಯಮಶೀಲತಾ ತರಬೇತಿ ಪಡೆದಿದ್ದರೆ ಅದರ ದಾಖಲಾತಿಗಳನ್ನು ಸಲ್ಲಿಸಬೇಕು. ವಿಶೇಷ ವರ್ಗಕ್ಕೆ ಸೇರಿದವರು ಅಗತ್ಯ ದಾಖಲಾತಿಗಳೊಂದಿಗೆ ದ್ವಿ ಪ್ರತಿಯಲ್ಲಿ ಸಲ್ಲಿಸಬೇಕು. ಆನ್‌ ಲೈನ್‌ ಮೂಲಕ ಈ ಲಿಂಕ್ ಕ್ಲಿಕ್ ಮಾಡಿ ಅರ್ಜಿ ಹಾಕಬಹುದು.  https://www.kviconline.gov.in/pmegpeportal/jsp/pmegponline.jsp 

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: http://www.karnatakakhadi.com/pmegp.html ನಲ್ಲಿ ಮಾಹಿತಿ ಪಡೆಯಬಹುದು. ಇಲ್ಲವೆ ಈ ಕೆಳಗೆ ಸೂಚಿಸಿದ ವಿಳಾಸದಲ್ಲಿ ಸಂಪರ್ಕಿಸಬಹುದು.

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ಕಛೇರಿಗಳು, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಬ್ಯಾಂಕ್ ಕಛೇರಿಗಳು, ಖಾದಿ ಗ್ರಾಮೋದ್ಯೋಗ ಆಯೋಗ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಖಾದಿ ಭವನ,ನಂ.10,ಜಸ್ಮಾಭವನ ರಸ್ತೆ, ಬೆಂಗಳೂರು-560052ಫ್ಯಾಕ್ಸ್: 080-22643446ದೂರವಾಣಿ ಸಂಖೆ:22643445/22643439 ಬೆಂಗಳೂರು (ನ), ಜಿಲ್ಲೆ -22643431ಬೆಂಗಳೂರು (ಗ್ರಾ) ಜಿಲ್ಲೆ-22643432, ಮೊ. 9480825622/9448329244ಗೆ ಸಂಪರ್ಕಿಸಬಹುದು.