News

ಸಬ್ಸಿಡಿ ದರದಲ್ಲಿ ಕೃಷಿ ಯಂತ್ರಗಳ ಖರೀದಿಗೆ ರೈತರಿಂದ ಅರ್ಜಿ ಆಹ್ವಾನ

03 November, 2020 2:17 PM IST By:

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಕೆಲಸಕ್ಕೆ ಯಂತ್ರಗಳ ಖರೀದಿಗೆ ಗದಗ ಜಿಲ್ಲೆಯ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲ್ಲೂಕುಗಳ ರೈತರಿಗೆ ತೋಟಗಾರಿಕೆ ಇಲಾಖೆ ವತಿಯಿಂದ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಸಾಮಾನ್ಯ ರೈತರಿಗೆ ಶೇ 40 ಮತ್ತು ಪರಿಶಿಷ್ಟ ಜಾತಿ, ಪಂಗಡಗಳ ರೈತರಿಗೆ ಶೇ 50ರಷ್ಟು ಸಹಾಯಧನ ನೀಡಲಾಗುವುದು. ನಿಗದಿತ ಅರ್ಜಿಯೊಂದಿಗೆ ಎರಡು ಫೊಟೊ, ಉತಾರ, ಜಾತಿ ಪ್ರಮಾಣ ಪತ್ರ, ಬೆಳೆ ದೃಢೀಕರಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ ಕಾರ್ಡ್, 20 ರೂಪಾಯಿ ಬಾಂಡ್‍ನೊಂದಿಗೆ ನವೆಂಬರ್ 15ರ ಒಳಗೆ ಅರ್ಜಿ ಸಲ್ಲಿಸಬೇಕು ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2020-21ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಬರುವ ಈರುಳ್ಳಿ ಶೇಖರಣಾ ಘಟಕ, ತೋಟಗಾರಿಕೆಯಲ್ಲಿ ಯಾಂತ್ರೀಕರಣ ಕಾರ್ಯಕ್ರಮದಡಿ ಅನುಮೋದಿತ ಕಂಪನಿಗಳಿಂದ ಖರೀದಿಸಲಾದ ವಿವಿಧ ಯಂತ್ರೋಪಕರಣಗಳಾದ ಔಷಧಿ ಸಿಂಪರಣಾ ಯಂತ್ರ, ಕಲ್ಟಿವೇಟರ್, ಪವರ್ ಟಿಲ್ಲರ್, ಕಳೆ ತೆಗೆಯುವ ಯಂತ್ರ, ರೋಟೋವೆಟರ್, ಪವರ್ ವೀಡರ್ ಹಾಗೂ ರೈತರಿಗೆ ತಮ್ಮ ತೋಟಗಳಲ್ಲಿ ಅನುಕೂಲವಾಗುವ ಯಂತ್ರಗಳಿಗೆ ಸಹಾಯಧನ ನೀಡಲಾಗುವುದು.

ಲಭ್ಯತೆ ಆಧಾರದ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಸಣ್ಣ, ಅತಿ ಸಣ್ಣ ಹಾಗೂ ಮಹಿಳಾ ರೈತರಿಗೆ ಶೇ 50 ಮತ್ತು ಇತರೆ ವರ್ಗದವರಿಗೆ ಶೇ 40ರಷ್ಟು ಸಹಾಯಧನದ ಸೌಲಭ್ಯವಿರುತ್ತದೆ.

ತೋಟಗಾರಿಕೆ ಇಲಾಖೆಯಯಡಿ ರೈತ ಸಂಪರ್ಕ ಕೇಂದ್ರಕ್ಕೆ ಇಂತಿಷ್ಟು ರೈತರಿಗೆ ಸಹಾಯಧನ ನೀಡಬೇಕೆಂದು ಭೌತಿಕ ಗುರಿ ನೀಡಲಾಗಿರುತ್ತದೆ. ರೈತರು ಇದರ ಕುರಿತು ಮಾಹಿತಿ ಪಡೆದು ತಮಗೆ ಬೇಕಾದ ಯಂತ್ರೋಪಕರಣ ಪಡೆದು  ತೋಟಗಾರಿಕೆ ಇಲಾಖೆಯ ವತಿಯಿಂದ ಸಹಾಯಧನ ಪಡೆಯಬಹುದು.