News

ನೆರಳು ಮನೆ ನಿರ್ಮಾಣಕ್ಕೆ ರೈತರಿಗೆ ,ಸಹಾಯಧನ ನೀಡಲು ಅರ್ಜಿ ಆಹ್ವಾನ

14 August, 2021 4:39 PM IST By:
poly house

ಮಳೆ, ಚಳಿ, ಗಾಳಿ ಮತ್ತು ಬೇಸಿಗೆ ಕಾಲ ಎನ್ನದೇ ಅಲ್ಪ ಸ್ಥಳದಲ್ಲಿ ನಿರಂತರವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಬಹುದಾದ, ಬೆಳೆಗಳಿಗೆ ತಗಲುವ ಕೀಟ ರೋಗಗಳಿಂದ ಸುರಕ್ಷಿತವಾಗಿಡುವ, ಸಸಿ ಕಸಿ ಗಿಡಗಳನ್ನು ತಯಾರಿಸಲು ಮತ್ತು ಬೆಳೆಸಲು ಈ ನೆರಳು ಪರದೆ ಅತ್ಯಂತ ಉಪಯುಕ್ತವಾಗಿದೆ. ಪಾಲಿಹೌಸ್ ನಿರ್ಮಾಣ ಮಾಡಿ ಹೆಚ್ಚು ಆದಾಯ ಗಳಿಸಿಕೊಳ್ಳಬೇಕೆಂದು ಸರ್ಕಾರ ರೈತರಿಗೆ ಸಹಾಯ ಧನ ನೀಡುತ್ತಿದೆ.

ಹೌದು, ಬಳ್ಳಾರಿ ಜಿಲ್ಲೆಯ ಪರಿಶಿಷ್ಟ ಪಂಗಡದ  ಕೃಷಿಕರಿಂದ ಕೃಷಿ ಸಂಬಂಧಿತ ಚಟುವಟಿಕೆಯಲ್ಲಿ ಹನಿ ನೀರಾವರಿ ಮತ್ತು ಪಾಲಿ/ನೆರಳು ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2018—19ನೇ ಸಾಲಿನಲ್ಲಿ ಭಾರತ ಸಂವಿಧಾನ ಅನುಚ್ಛೇದ 271(1) ರಡಿ ಪರಿಶಿಷ್ಟ ವರ್ಗದವರ ಅಭಿವೃದ್ಧಿ ಕಾರ್ಯಕ್ರಮಗಳ ಪೈಕಿ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಹನಿ ನೀರಾವರಿ ಮತ್ತು ಪಾಲಿಮನೆ/ನೆರಳು ಪರದೆ ನಿರ್ಮಾಣ ಅಳವಡಿಸುವ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸೂಚಿಸಲಾಗಿದ್ದು, ಅದರಂತೆ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ.

ಅರ್ಹ ಫಲಾನುಭವಿಗಳು ಆಗಸ್ಟ್ 31 ರೊಳಗಾಗಿ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು/ಸಹಾಯಕ ನಿರ್ದೇಶಕರು/ಸಮಾಜ ಕಲ್ಯಾಣ ಇಲಾಖೆಯ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿದಾರರು ಪರಿಶಿಷ್ಟ ಪಂಗಡಕ್ಕೆ ಸೇರಿದ ಸಣ್ಣ ಮತ್ತು ಅತೀ ಸಣ್ಣ ರೈತರಾಗಿರಬೇಕು. ನೀರಾವರಿ ಸೌಲಭ್ಯ ಹೊಂದಿರಬೇಕು. ಫಲಾನುಭವಿಯ ವಾರ್ಷಿಕ ಆದಾಯ 1.50 ಲಕ್ಷ ರೂಪಾಯಿ ಒಳಗಡೆ ಇರಬೇಕು. ವಿದ್ಯುತ್ ಮಾರ್ಗ/ಸಂಪರ್ಕ ಹೊಂದಿರುವ ಕುರಿತು ಮಾಹಿತಿ, ಫಲಾನುಭವಿಯ ಹೆಸರಿನಲ್ಲಿರುವ ಪ್ರಸಕ್ತ ಸಾಲಿನ ಪಹಣಿ ಹೊಂದಿರಬೇಕು. ಅರ್ಜಿದಾರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರು ಸರ್ಕಾರಿ ನೌಕರಿಯಲ್ಲಿರಬಾರದು. ಫಲಾನುಭವಿಯು ಜಂಟಿ ಖಾತೆ ಹೊಂದಿದ್ದಲ್ಲಿ ಕುಟುಂಬವರ ಒಪ್ಪಿಗೆ ಪತ್ರ/ ಇತರೆ ಖಾತೆದಾರರು ಎನ್ಒಸಿ ಪಡೆದಿರಬೇಕು. ಘಟಕದ ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ಪ್ರಮಾಣ ಪತ್ರ/ಮುಚ್ಚಳಿಕೆ ಪತ್ರ ನೀಡಬೇಕು. ಸದರಿ ಅರ್ಜಿದಾರರಾಗಲಿ, ಕುಟುಂಬದ ಸದಸ್ಯರಾಗಲಿ ಯಾವುದು ಇಲಾಖೆಯ/ ನಿಗಮದ ಯಾವುದೇ ಯೋಜನೆಯಡಿ ಈ ಹಿಂದೆ ಸೌಲಭ್ಯ ಪಡೆದಿರಬಾರದು ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ವಾಲ್ಮೀಕಿ ಭವನ, ನಲ್ಲಚೇರವು ಪ್ರದೇಶ ಬಳ್ಳಾರಿ ಅಥವಾ ದೂರವಾಣಿ ಸಂಖ್ಯೆ 08392-242453ಗೆ ಸಂಪರ್ಕಿಸಲು ಕೋರಲಾಗಿದೆ.

ಗೋಡಂಬಿ ಬೆಳೆಯುವ ರೈತರಿಂದ ಅರ್ಜಿ ಆಹ್ವಾನ

ಹೂವಿನಹಡಗಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ 2021-22ನೇ ಸಾಲಿಗೆ ವಿಜಯನಗರ ಜಿಲ್ಲೆಯ ವ್ಯಾಪ್ತಿಯ ಹೂವಿನಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು ತಾಲೂಕುಗಳಿಂದ ಗೋಡಂಬಿ ಬೆಳೆಯುವ ಆಸಕ್ತ ರೈತರಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.ರೈತರು ತಮ್ಮ ಜಮೀನಿನ ಮೂಲ ಪಹಣಿ ಪತ್ರ, ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ, ಪಾಸ್ಪೋರ್ಟ್ ಅಳತೆಯ ಎರಡು ಫೋಟೋ, ಬ್ಯಾಂಕ್ ಪಾಸ್ಬುಕ್ ಪುಸ್ತಕದ ಝರಾಕ್ಸ್ ಹಾಗೂ ಗ್ರಾಮ ಪಂಚಾಯತನಿಂದ ದೃಢೀಕರಿಸಲ್ಪಟ್ಟ ನಿವಾಸಿ ಪತ್ರದ ಜತೆಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಹೂವಿನಹಡಗಲಿ ಕೇಂದ್ರವನ್ನು ಸಂಪರ್ಕಿಸಿ ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸಲು ಕೋರಲಾಗಿದೆ. ಆಗಸ್ಟ 28 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಡಾ. ಮಂಜುನಾಥ ಭಾನುವಳ್ಳಿ, ಸಹಾಯಕ ಪ್ರಾಧ್ಯಾಪಕ ಮೊ. 9972199270, ಡಾ. ಹನುಮಂತಪ್ಪ ಶ್ರೀಹರಿ, ಸಹಾಯಕ ಪ್ರಾಧ್ಯಾಪಕ ಮೊ. 9986277793, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಹೂವಿನಹಡಗಲಿ ಹಾಗೂ ಡಾ. ಸಿ.ಎಂ. ಕಾಲಿಬಾವಿ, ವಿಸ್ತರಣಾ ಮುಂದಾಳು, ಕೃಷಿ ವಿಸ್ತರಣಾ ಕೇಂದ್ರ, ಹೂವಿನಹಡಗಲಿ ದೂರವಾಣಿ ಸಂಖ್ಯೆ 08399 240092, ಮೊ. 9480696336 ಗೆ ಸಂಪರ್ಕಿಸಲು ಕೋರಲಾಗಿದೆ.

ರೈತರು ವಿಳಂಬ ಮಾಡದೆ ಬೇಗನೆ ಹತ್ತಿರದ ತಾಲೂಕು ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸಬಹುದು.