News

ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿಗೆ ಸಹಾಯಧನ ನೀಡಲು ರೈತರಿಂದ ಅರ್ಜಿ ಆಹ್ವಾನ

08 December, 2020 3:17 PM IST By:

ತೋಟಗಾರಿಕೆ ಇಲಾಖೆಯಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಗರಿಷ್ಠ 5 ಹೆಕ್ಟೇರ್‌ವರೆಗೆ ಸಹಾಯಧನ ನೀಡಲಾಗುತ್ತಿದ್ದು, ಬಾಗಲಕೋಟೆ ಜಿಲ್ಲೆಯ ಪರಿಶಿಷ್ಟ ಜಾತಿ ಹಾಗೂ ಪಂಗಡದ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಕಚೇರಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸುವ ರೈತರಿಗೆ ಆಯಾ ಬೆಳೆ ಮತ್ತು ಬೆಳೆಗಳ ಅಂತರಕ್ಕೆ ಅನುಗುಣವಾಗಿ ಮಾರ್ಗಸೂಚಿ ಅನ್ವಯ ಪರಿಶಿಷ್ಟ ಜಾತಿ, ಪಂಗಡ, ಸಾಮಾನ್ಯ ರೈತರಿಗೆ ಪ್ರತಿ ಫಲಾನುಭವಿ ಕುಟುಂಬಕ್ಕೆ 5 ಹೆಕ್ಟೇರ್ ಪ್ರದೇಶದವರೆಗೆ ಮಿತಿಗೊಳಿಸಲಾಗಿದೆ.

ತೋಟಗಾರಿಕೆಯಲ್ಲಿ ಕೃಷಿ ಮಾಡುತ್ತಿರುವ ಹಾಗೂ ನೀರಾವರಿ ಮೂಲ ಹೊಂದಿರುವ ರೈತರು ತಮ್ಮ ಜಮೀನಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಆಸಕ್ತರಾಗಿದ್ದಲ್ಲಿ ತಮ್ಮ ಜಮೀನು ವ್ಯಾಪ್ತಿಯ ಹೋಬಳಿ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಹನಿ ನೀರಾವರಿ ಅಳವಡಿಸಲು ನಿಗದಿತ ಅರ್ಜಿ ಪಡೆದು ಅರ್ಜಿ ಸಲ್ಲಿಸಬಹುದಾಗಿದೆ.

 ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ಬಾದಾಮಿ (08357-220422, 9986247138), ಬಾಗಲಕೋಟೆ (08354-223358, 9845896489), ಬೀಳಗಿ (08425-235653, 9902906750), ಹುನಗುಂದ (08351-260469, 7353388515), ಜಮಖಂಡಿ (08353-222097, 9900002260), ಮುಧೋಳ (08350-281421, 9902906750) ಸಂಪರ್ಕಿಸಲು ಕೋರಲಾಗಿದೆ.

ಸೋಲಾರ್ ಲೈಟ್ ಅಳವಡಿಕೆಗೆ ಧನಸಹಾಯಕ್ಕಾಗಿ ಅರ್ಜಿ ಆಹ್ವಾನ

ಗೋಕಾಕ ಜಿಲ್ಲೆ ನಗರಸಭೆಯು 2020-21ನೇ ಸಾಲಿನ ಎಸ್.ಎಫ್.ಸಿ. ಮುಕ್ತ ನಿಧಿ ಹಾಗೂ ನಗರಸಭೆ ನಿಧಿಯಲ್ಲಿ ಧನಸಹಾಯ ನೀಡಲು ಅರ್ಜಿ ಆಹ್ವಾನಿಸಿದೆ.

ಶೇ. 24.10ರ ಕಾಯ್ದಿರಿಸಿದ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು, ಶೇ. 7.25ರ ಮತ್ತು ಶೇ. 5ರ ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳಲ್ಲಿ ಸಣ್ಣ ಉದ್ದಿಮೆದಾರರು, ವೈಯಕ್ತಿಕ ಶೌಚಾಲಯ ನಿರ್ಮಾಣ, ಮೂರು ಚಕ್ರಗಳ ವಾಹನ ಹಾಗೂ ಸೋಲಾರ್‌ ಲೈಟ್ ಅಳವಡಿಕೆ ಸೇರಿದಂತೆ ವೈಯಕ್ತಿಕ ಸೌಲಭ್ಯಗಳಿಗೆ ಧನಸಹಾಯ ಕೋರಿ ಡಿ. 18ರ ಒಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ನಗರಸಭೆಯ ವಿಷಯ ನಿರ್ವಾಹಕರನ್ನು  ಸಂಪರ್ಕಿಸುವಂತೆ ಪ್ರಭಾರ ಪೌರಾಯುಕ್ತ ಶಿವಾನಂದ ಹಿರೇಮಠ ತಿಳಿಸಿದ್ದಾರೆ.