News

ಮತಗಟ್ಟೆಯ ಮಾಹಿತಿಗೆ ಚುನಾವಣಾ ಆಯೋಗದಿಂದ ಆ್ಯಪ್‌ : ಮನೋಜ್ ಕುಮಾರ್ ಮೀನಾ

05 May, 2023 2:38 PM IST By: Hitesh
App from Election Commission for polling booth information: Manoj Kumar Meena

ಕರ್ನಾಟಕ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗವು ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಹಲವು ಪ್ರಯೋಗಗಳನ್ನು ಮಾಡುತ್ತಿದೆ.

ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ 2023ನೇ ಮತದಾನ ಮೇ 10 ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ನಿಗದಿಯಾಗಿದ್ದು, ಚುನಾವಣಾ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. 

‘ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ’ ಎಂಬ ಚುನಾವಣಾ ಆಯೋಗದ ಧ್ಯೇಯವಾಕ್ಯದಂತೆ

ಪ್ರತಿ ನಾಗರಿಕನೂ ತನ್ನ ಅಮೂಲ್ಯ ಮತವನ್ನು ಚಲಾಯಿಸಬೇಕು ಎಂದು ಕರ್ನಾಟಕದ ಮುಖ್ಯಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ತಿಳಿಸಿದ್ದಾರೆ.  

ಕರ್ನಾಟಕ ವಿಧಾನಸಭೆ ಚುನಾವಣೆಯ ಅಂಗವಾಗಿ ಈಚೆಗೆ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ

ಮುಖ್ಯಚುನಾವಣಾಧಿಕಾರಿಗಳ ಕಚೇರಿ ಹಾಗೂ ಅಂಚೆ ಇಲಾಖೆ ಮೂಲಕ ಹೊರತರಲಾಗಿರುವ ವಿಶೇಷ ಅಂಚೆ ಲಕೋಟೆ  ಮತ್ತು

ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಸಂಗೀತ ಸಂಯೋಜಿಸಿ ಹಾಡಿರುವ ಚುನಾವಣಾ ಜಾಗೃತಿ ಗೀತೆ

ಹಾಗೂ ಮತದಾರರ ಸಹಾಯಕ್ಕಾಗಿ ಅಭಿವೃದ್ಧಿ ಪಡಿಸಿರುವ ಚುನಾವಣಾ ಆ್ಯಪ್ ನ ಬಿಡುಗಡೆ ಮಾಡಿ ಮಾತನಾಡಿದರು.

ಬದಲಾದ ಕಾಲಕ್ಕೆ ತಕ್ಕಂತೆ ಭಾರತ ಚುನಾವಣಾ ಆಯೋಗ ಸಹ ಹಲವು ವಿನೂತನ ಮತದಾರರ ಸ್ನೇಹಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದು,

ಮತದಾನದ ದಿನದಂದು ಮತದಾರರ ಅನುಕೂಲಕ್ಕಾಗಿ ಮತಗಟ್ಟೆಯ ವಿವರ, ಸರತಿ ಸಾಲಿನಲ್ಲಿರುವ ಮತದಾರರ ವಿವರ,

ವಾಹನ ನಿಲುಗಡೆ ವ್ಯವಸ್ಥೆ ಸೇರಿದಂತೆ ಹಲವು ಉಪಯುಕ್ತ ಮಾಹಿತಿಗಳುಳ್ಳ ಚುನಾವಣಾ ಆ್ಯಪ್‌ ಅಭಿವೃದ್ಧಿ ಪಡಿಸಿದ್ದು, ಈ

ಆ್ಯಪ್‌ ಅನ್ನು ಮತದಾರರು  ಹೆಚ್ಚು ಬಳಸುವ ಮೂಲಕ ಸುಲಭವಾಗಿ ಮತದಾನದಲ್ಲಿ ಭಾಗವಹಿಸಬಹುದು ಎಂದು ಹೇಳಿದರು.

ಚುನಾವಣಾ ಅಕ್ರಮಗಳನ್ನು ನಿಯಂತ್ರಿಸಿ, ನೈತಿಕ ಚುನಾವಣೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ  ಚುನಾವಣಾ ಆಯೋಗ ಹೊರತಂದಿರುವ ಸಿ-ವಿಜಿಲ್,

ಸುವಿಧಾ ಆ್ಯಪ್ ಗಳಿಗೆ ಉತ್ತಮ ಜನಸ್ಪಂದನೆ ದೊರೆತಿದೆ. ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ದಿವ್ಯಾಂಗರು ಮತ್ತು 80 ವರ್ಷ ಮೇಲ್ಪಟ್ಟವರಿಗೆ

ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿರುವ ಚುನಾವಣಾ ಆಯೋಗದ ಈ ಕ್ರಮವನ್ನು ಅನೇಕ ಹಿರಿಯರು ಶ್ಲಾಫಿಸಿದ್ದಾರೆ.

ನಗರ ಹಾಗೂ ಯುವ ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ವೋಟರ್ ಫೆಸ್ಟ್,

ಎಲೆಕ್ಥಾನ್ ಹಾಗೂ ನಮ್ಮ ನಡೆ ಮತಗಟ್ಟೆ ಕಡೆಯಂತಹ ವಿನೂತನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ.

ಮತದಾರರ ಅನುಕೂಲಕ್ಕಾಗಿ ಭಾರತ ಚುನಾವಣಾ ಆಯೋಗ ಹಲವು ಆಪ್ ಗಳನ್ನು ಹೊರ ತಂದಿದೆ

ಮತ್ತು ಸಹಾಯವಾಣಿ 1950 ಕಾರ್ಯನಿರ್ವಹಿಸುತ್ತಿದೆ.

ಮತದಾನವನ್ನು ಹೆಚ್ಚಿಸುವ ಉದ್ದೇಶವನ್ನು ಸಾಕಾರಗೊಳಿಸಲು ಮುಖ್ಯ ಚುನಾವಣಾಧಿಕಾರಿಗಳು

ವತಿಯಿಂದ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಚುನಾವಣೆಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಜನರಿಗೆ ಸುಲಭವಾಗಿ ಲಭ್ಯವಾಗಿಸುವ ಉದ್ದೇಶದಿಂದ ‘ಚುನಾವಣಾ’ಆ್ಯಪ್ ನ್ನು ಸಿದ್ಧಪಡಿಸಲಾಗಿದ್ದು,

ಮತದಾರರ ಮತಗಟ್ಟೆಯ ವಿವರ, ಅಭ್ಯರ್ಥಿಗಳ ವಿವರ, ಚುನಾವಣಾ ವೇಳಾ ಪಟ್ಟಿ, ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ವೀಲ್ ಚೇರ್ ವ್ಯವಸ್ಥೆ, ಮತದಾನದ ಪ್ರಮಾಣ,

ಮತಗಟ್ಟೆಯ ಸುತ್ತಮುತ್ತಲಿನ ಆಸ್ಪತ್ರೆ, ಪೊಲೀಸ್ ಠಾಣೆ ವಿವರ ಸೇರಿದಂತೆ ಎಲ್ಲ ಉಪಯುಕ್ತ ಮಾಹಿತಿಗಳನ್ನು ಒಂದೇ ಆ್ಯಪ್ ನಲ್ಲಿ ದೊರೆಯುತ್ತಿದ್ದು,

ಈ ಆ್ಯಪ್ ನ್ನು ಚುನಾವಣೆಯ ನಂತರವೂ ಸಹ ತಮ್ಮ ಹತ್ತಿರದ ಪೊಲೀಸ್ ಠಾಣೆ ಹಾಗೂ ಆರೋಗ್ಯ ಕೇಂದ್ರಗಳ ಮಾಹಿತಿ ಪಡೆಯಲು ಜನರು ಬಳಸಬಹುದಾಗಿದೆ ಎಂದು ತಿಳಿಸಿದರು.

ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ 2023ರ ಸ್ಮರಣಾರ್ಥ ವಿಶೇಷ ಅಂಚೆ ಲಕೋಟೆಯನ್ನು ಹೊರತರಲಾಗಿದೆ.

ಅದೇ ರೀತಿಯಲ್ಲಿ ಯುವ ಮತದಾರರನ್ನು ಪ್ರೇರೇಪಿಸಲು ಖ್ಯಾತ ಗಾಯಕರಾದ ವಿಜಯಪ್ರಕಾಶ್

ಅವರ ಗಾಯನ ಹಾಗೂ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯದಲ್ಲಿ ಮೂಡಿಬಂದಿರುವ ಚುನಾವಣಾ ಜಾಗೃತಿ ಗೀತೆ

ಸುಂದರವಾಗಿ ಮೂಡಿಬಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಮತಗಟ್ಟೆಯತ್ತ ಸೆಳೆಯಲಿದೆ ಎಂದರು.

App from Election Commission for polling booth information: Manoj Kumar Meena

ಚೀಫ್ ಪೋಸ್ಟ್ ಮಾಸ್ಟರ್ ಜನರಲ್ , ಎಸ್.ರಾಜೇಂದ್ರ ಕುಮಾರ್ ಅವರು ಮಾತನಾಡಿ,

ಯಾವುದೇ ಸಂದೇಶವನ್ನು ಪದೇ ಪದೇ ಹೇಳುವುದರಿಂದ ಅದು ಹೆಚ್ಚಿನ ಪರಿಣಾಮ ಬೀರುತ್ತದೆ.

ನಾಗರಿಕರು ತಪ್ಪದೇ ಮತದಾನವನ್ನು ಮಾಡಬೇಕೆಂದು ಸಂದೇಶ ಸಾರುವಲ್ಲಿ ಇಂದಿನ ಕಾರ್ಯಕ್ರಮ ಸಹಕಾರಿಯಾಗಿದೆ.

ಅಂಚೆ ಇಲಾಖೆಯ ಫ್ರಾಂಕಿಂಗ್ ಮಷಿನ್ ಗಳಲ್ಲಿ ಮೇ 10 ರಂದು ತಪ್ಪದೇ ಮತ ಚಲಾಯಿಸಬೇಕೆಂಬ ಸಂದೇಶವನ್ನು ಮುದ್ರಿಸಲಾಗುತ್ತಿದೆ.

ಅಂತೆಯೇ ಖಾಸಗಿ ಫ್ರಾಂಕಿಂಗ್ ಮೆಷೀನ್ ಇರುವ ಸಂಸ್ಥೆಗಳು , ಮತದಾನದ ಸಂದೇಶವನ್ನು ತಮ್ಮ ಲಕೋಟೆಗಳಲ್ಲಿ ಮುದ್ರಿಸಿ ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು.

ಚುನಾವಣಾ ಜಾಗೃತಿ ಗೀತೆಯನ್ನು ಹಾಡಿರುವ ವಿಜಯಪ್ರಕಾಶ್ ಅವರು ಆನ್‌ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,

ಸಂಗೀತದ ಮೂಲಕ ಮತದಾನಕ್ಕೆ ಪ್ರೋತ್ಸಾಹಿಸುವ ಇಂತಹ ಸಾರ್ಥಕ ಕಾರ್ಯದಲ್ಲಿ ತೊಡಗುವುದು ಕಲಾವಿದನಾಗಿ ತನ್ನ ಕರ್ತವ್ಯವೆಂದು ತಿಳಿಸಿದರು.

ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯದಲ್ಲಿ ಅರ್ಥಪೂರ್ಣವಾಗಿ ಮೂಡಿಬಂದ ಈ ಗೀತೆ ಜನರಲ್ಲಿ ಮತದಾನ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ,

ಹೆಚ್ಚಿನ ಜನ ಮತಗಟ್ಟೆಗೆ ಆಗಮಿಸಿ ಮತಚಲಾಯಿಸುವಂತಾಗಲಿ ಎಂದರು.

ಚುನಾವಣಾ ಜಾಗೃತಿ ಗೀತೆಗೆ ಸಾಹಿತ್ಯ ಬರೆದಿರುವ ಖ್ಯಾತ ಗೀತರಚನೆಕಾರ ನಾಗೇಂದ್ರ ಪ್ರಸಾದ್ ಮಾತನಾಡಿದರು.

 ಕಾರ್ಯಕ್ರಮದಲ್ಲಿ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್, ಪೋಸ್ಟ್ ಮಾಸ್ಟರ್ ಜನರಲ್ ಎಲ್.ಕೆ.ದಾಶ್ ,

ಪೋಸ್ಟ್ ಲ್ ಸರ್ವೀಶ್ ನಿರ್ದೇಶಕ ಕಿಯಾ ಅರೋರ್, ಸಿನಿಮಾ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಇದ್ದರು.