News

ನವೀನ ಕೃಷಿ ತಂತ್ರಜ್ಞಾನವೇ ರೈತರ ಸಮಸ್ಯೆಗೆ ಪರಿಹಾರ- ಕೃಷಿ ಸಚಿವ ಬಿ.ಸಿ. ಪಾಟೀಲ್

22 August, 2020 10:39 AM IST By:

ಬೆಂಗಳೂರಿನಲ್ಲಿ  ಕೃಷಿ ಕ್ಷೇತ್ರದ ನೂತನ ಆವಿಷ್ಕಾರಗಳು ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದು ಕೃಷಿ ಸಚಿವ (Agriculture Minister) ಬಿ.ಸಿ.‍ಪಾಟೀಲ ಹೇಳಿದ್ದಾರೆ.

ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ‘ಕೃಷಿ ನವೋದ್ಯಮ’ ಕುರಿತ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು,ಇದೇ ಮೊದಲ ಬಾರಿಗೆ ಕೃಷಿ ಕ್ಷೇತ್ರಕ್ಕೆ ನವಚೈತನ್ಯ ಒದಗಿಸಲು ಕೃಷಿ ನವೋದ್ಯಮಗಳನ್ನು ಆರಂಭಿಸಿ ರೈತರಿಗೆ ಮತ್ತು ಗ್ರಾಹಕರಿಗೆ ಅನುಕೂಲ ಕಲ್ಪಿಸಲಾಗುವುದು. ಕೃಷಿ ತಂತ್ರಜ್ಞಾನ ಯುವ ಸಮುದಾಯಕ್ಕೆ ಅವಕಾಶಗಳನ್ನು ಸೃಷ್ಟಿಸಬಲ್ಲದು ಎಂದು ಬಿ.ಸಿ.ಪಾಟೀಲ ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿ 4 ಸಾವಿರ ಕೃಷಿಗೆ ಸಂಬಂಧಿಸಿದ ನವೋದ್ಯಮಗಳು ಆರಂಭವಾಗಲಿವೆ. ದೇಶದಲ್ಲಿ ಕೃಷಿ ನವೋದ್ಯಮಗಳಿಂದ 4.5 ಶತಕೋಟಿ ಡಾಲರ್‌ಗಳ ಮೌಲ್ಯದ ಮಾರುಕಟ್ಟೆ ಸೃಷ್ಟಿ ಆಗಲಿದೆ ಎಂದ ಅವರು ನವೀನ ಕೃಷಿ ತಂತ್ರಜ್ಞಾನ ರೈತರ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ಯುವ ಸಮುದಾಯಕ್ಕೆ ಉದ್ಯೋಗಾವಕಾಶ (Employment) ಸೃಷ್ಟಿಸುತ್ತದೆ ಎಂದರು.

ನರೇಂದ್ರಮೋದಿ ಅವರು ಪ್ರಧಾನಿ ಆದ ಬಳಿಕ 2014 ರ ನಂತರ ದೇಶದಲ್ಲಿ ಸ್ಟಾರ್ಟ್ ಅಪ್ ಗಳ (Startup) ಯುಗ ಆರಂಭವಾಯಿತು. ನರೇಂದ್ರ ಮೋದಿಯವರು ನವೋದ್ಯಮಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಪ್ರತಿದಿನ ಕೃಷಿಗೆ ಸಂಬಂಧಿಸಿದ 2ರಿಂದ 3 ನವೋದ್ಯಮಗಳು ಸ್ಥಾಪನೆ ಆಗುತ್ತಿವೆ. 2018 ರ ಹೊತ್ತಿಗೆ 50ಸಾವಿರ ನವೋದ್ಯಮಗಳು ಹಾಗೂ ಬಳಿಕ 9300 ಸ್ಟಾರ್ಟಪ್ ಪ್ರಾರಂಭವಾದವು.ಇವುಗಳ ಪೈಕಿ 474 ಕೃಷಿ ಉದ್ಯಮಗಳು ಆರಂಭವಾಗಿದೆ ಎಂದರು.

ಬಿಸಿಯೂಟದಲ್ಲಿ (Midday meal) ಸಿರಿಧಾನ್ಯಗಳ ಪರಿಚಯಿಸುವ ಚಿಂತನೆ:

ಮಧ್ಯಾಹ್ನದ ಬಿಸಿಯೂಟದಲ್ಲಿ ಸಿರಿಧಾನ್ಯಗಳನ್ನು ಪರಿಚಯಿಸುವ ಚಿಂತನೆ ಇದೆ. ಇದರಿಂದ ಕೃಷಿಕರಿಗೆ ಅನುಕೂಲವಾಗಲಿದೆ. ರಾಜ್ಯದ ಜೇವರ್ಗಿ, ಹಿರಿಯೂರು, ಮಾಲೂರು ಮತ್ತು ಬಾಗಲಕೋಟೆಯಲ್ಲಿ ಈಗಾಗಲೇ ಮೆಗಾಫುಡ್‌ ಪಾರ್ಕ್‌ಗಳಿದ್ದು, ಕೇಂದ್ರ ಸರ್ಕಾರದ ನೆರವಿನ ಅಡಿಯಲ್ಲಿ ಕೆ.ಆರ್‌.ಪೇಟೆ ಮತ್ತು ತುಮಕೂರಿನಲ್ಲಿ ಮೆಗಾಫುಡ್‌ ಪಾರ್ಕ್‌ ಆರಂಭಿಸಲಾಗಿದೆ ಎಂದೂ ಹೇಳಿದರು.

ಕೃಷಿ ನವೋದ್ಯಮದಲ್ಲಿ ಕೃಷಿ ಉತ್ಪಾದನ ಉದ್ಯಮಿಗಳು ದೇಶಾದ್ಯಂತ ಸಕ್ರಿಯವಾಗಿ ಭಾಗವಹಿಸಿರುವುದು ಖುಷಿ ತಂದಿದೆ. ಕೊರೊನಾ ವೈರಸ್‌ನಿಂದಾಗಿ ಬಿಕ್ಕಟ್ಟಿನ ಅವಧಿಯಲ್ಲಿ ರೈತರು ಬೆಳೆದ ತರಕಾರಿ ಹಣ್ಣು ಸೇರಿದಂತೆ ಕೃಷಿ ಫಸಲುಗಳು ನಾಶವಾಗದಂತೆ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕೋಲ್ಡ್ ಸ್ಟೋರೇಜ್ ಗಳನ್ನು ಆರಂಭಿಸಲಾಯಿಗಿದೆ ಎಂದರು.