News

30 ಲಕ್ಷ ರೈತರಿಗೆ 20 ಸಾವಿರ ಕೋಟಿ ರೂಪಾಯಿ ಬೆಳೆ ಸಾಲ- ಸಹಕಾರ ಸಚಿವ ಸೋಮಶೇಖರ್

09 April, 2021 1:48 PM IST By:
farmer

ಕೊರೋನಾ ಸಂಕಷ್ಟದಲ್ಲಿಯೂ ಪ್ರಸಕ್ತ ವರ್ಷ ರಾಜ್ಯದ ರೈತರಿಗೆ 30 ಲಕ್ಷ  ರೈತರಿಗೆ 20 ಸಾವಿರ ಕೋಟಿ ರೂಪಾಯಿ ಬೆಳೆ ಸಾಲ ಕೊಡಲು ಸರ್ಕಾರ ಸಜ್ಜಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿಯವರೆಗೆ ರಾಜ್ಯದ 25.67 ಲಕ್ಷ ರೈತರಿಗೆ 17,260 .48 ಕೋಟಿ ಬೆಳೆ ಸಾಲ ವಿತರಿಸಲಾಗಿದ್ದು, ಒಟ್ಟು 24.36 ಲಕ್ಷ ರೈತರಿಗೆ ಅಲ್ಪಾವಧಿ, ದೀರ್ಘಾವಧಿ ಬೆಳೆ ಸಾಲವಾಗಿ 15,300 ಕೋಟಿ ಸಾಲ ವಿತರಿಸುವ ಗುರಿ ಹಾಕಿಕೊಳ್ಳಲಾಗಿದೆ. ಸರ್ಕಾರದ ಇಚ್ಚಾಶಕ್ತಿಯ ಪರಿಣಾಮ 1.31 ಲಕ್ಷಕ್ಕೂ ಹೆಚ್ಚು ರೈತರಿಗೆ ಸಾಲದ ಪ್ರಯೋಜನ ಸಿಕ್ಕಿದೆ. ಇದರಿಂದಾಗಿ 1960.48ಕೋಟಿ ಸಾಲವನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಇದೊಂದು ಅಭೂತಪೂರ್ವ ಸಾಧನೆಯಾಗಿದೆ ಎಂದರು.

ಕೊರೋನಾ ಸಂಕಷ್ಟದಲ್ಲಿಯೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರೈತರಿಗೆ ಯಾವುದೇ ತೊಂದರೆ ಆಗದಂತೆ ಕಟ್ಟುನಿಟ್ಟಿನ ಕ್ರಮದಿಂದಾಗಿ ಎಲ್ಲಾ ರೈತರಿಗೂ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಬೆಳೆ ಸಾಲ ಸೌಲಭ್ಯವನ್ನು ಹೆಚ್ಚಿನ ರೀತಿಯಲ್ಲಿ ನೀಡಲಾಗಿದೆ.ಈ ಅಭೂತಪೂರ್ವ ಯಶಸ್ಸಿಗೆ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗಳು ಕಾರಣಕರ್ತರಾಗಿದ್ದಾರೆ ಎಂದರು.

ಮೂರು ವರ್ಷಗಳಲ್ಲಿ ಬೆಳೆ ಸಾಲ ವಿತರಣೆ

2017-18ನೇ ಸಾಲಿನಲ್ಲಿ 21,04, 456 ರೈತಿರಗೆ 11618.89 ಕೋಟಿ ರುಪಾಯಿ, 2018-19ನೇ ಸಾಲಿನಲ್ಲಿ 20,14,951 ರೈತರಿಗೆ 11350 .52 ಕೋಟಿ ರೂಪಾಯಿ ಸಾಲ ನೀಡಲಾಗಿದೆ. 2019-20ನೇ ಸಾಲಿನಲ್ಲಿ 22, 60525 ರೈತರಿಗೆ 13734.47 ಕೋಟಿ ರುಪಾಯಿ ಸಾಲ ನೀಡಲಾಗಿದೆ. 2020-21ನೇ ಸಾಲಿನಲ್ಲಿ 25,67413 ರೈತರಿಗೆ 17,260 ಕೋಟಿ ರೂಪಾಯಿ ಸಾಲ ನೀಡಲಾಗಿದೆ.

ಸಹಕಾರಿ ನಡಿಗೆ ಡಿಸಿಸಿ ಬ್ಯಾಂಕ್ ಕಡೆಗೆ: ಎಲ್ಲ ರೈತ ಫಲಾನುಭವಿಗಳಿಗೂ ಸಾಲ ಸಿಗಬೇಕೆಂಬ ಸದುದ್ದೇಶದಿಂದ ನಾನು ಪ್ರತಿ ಜಿಲ್ಲೆಗಳಿಗೆ ಭೇಟಿ ನೀಡಿ ಡಿಸಿಸಿ ಬ್ಯಾಂಕ್ ಶಾಖೆಗಳಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದೇನೆ. ಸಹಕಾರಿ ನಡಿಗೆ ಡಿಸಿಸಿ ಬ್ಯಾಂಕ್ ಕಡೆಗೆ ಎಂಬ ಕಾರ್ಯಕ್ರಮ ಹಮ್ಮಿಕೊಂಡು ನಾನೇ ಸ್ವತಃ ಸಭೆ ನಡೆಸಿ ರೈತರಿಗೆ ನೀಡಲಾದ ಸಾಲದ ವಿವರಗಳನ್ನು ಪಡೆದುಕೊಂಡಿದ್ದೆ. ಎಲ್ಲಿ ಗುರಿ ಸಾಧಿಸಲಾಗಿಲ್ಲವೋ ಅಲ್ಲೆಲ್ಲ ಸಲಹೆ-ಸೂಚನೆಗಳನ್ನು ನೀಡಿ ಬಂದಿದ್ದೆ ಎಂದು ಸಚಿವರು ಇದೇ ವೇಳೆ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರದ ಆತ್ಮ ನಿರ್ಭರ ಯೋಜನೆಯ ಅನುಷ್ಠಾನದಲ್ಲಿ ಕರ್ನಾಟಕ ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಈ ಸಾಧನೆಗೆ ಕೇಂದ್ರ ಹಾಗೂ ನಬಾರ್ಡ್ ಮೆಚ್ಚುಗೆ ವ್ಯಕ್ತಪಡಿಸಿದೆ.ಈ ಯೋಜನೆಯಡಿ ಒಂದು ಸಾವಿರ ಕೃಷಿ ಪತ್ತಿನ ಸಂಘಗಳಿಗೆ ಪ್ರತಿ ಸಂಘಕ್ಕೆ 2 ಕೋಟಿ ರುಪಾಯಿಯಂತೆ ಸಾಲ ನೀಡಿಕೆಗೆ ಅವಕಾಶವಿದೆ ಎಂದರು.

ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ರೂಪಾಯಿ 3 ಲಕ್ಷಗಳ ಬೆಳೆ ಸಾಲ ಮತ್ತು ಶೇ.3 ರ ಬಡ್ಡಿ ದರದಲ್ಲಿ ರೂ.10 ಲಕ್ಷಗಳ ವರೆಗಿನ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ ವಿತರಿಸಲಾಗುತ್ತಿದೆ.

2020-21ನೇ ಸಾಲಿನಲ್ಲಿ 24.50 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ರೂ.14500 ಕೋಟಿ ಅಲ್ಪಾವಧಿ ಬೆಳೆ ಸಾಲ ವಿತರಣೆ ಮತ್ತು 0.70 ಲಕ್ಷ ರೈತರಿಗೆ ಶೇ.3 ರ ಬಡ್ಡಿ ದರದಲ್ಲಿ 1200 ಕೋಟಿ ಮಧ್ಯಮಾವಧಿ/ ದೀರ್ಘಾವಧಿ ಸಾಲ ವಿತರಣೆ ಗುರಿ ಹೊಂದಿದ್ದು, ಇಲ್ಲಿಯವರೆಗೆ ವರೆಗೆ ಒಟ್ಟು 25.24 ಲಕ್ಷ ರೈತರಿಗೆ ರೂ.16191.35 ಕೋಟಿಗಳ ಅಲ್ಲಾವಧಿ ಕೃಷಿ ಸಾಲ ಮತ್ತು 0.43 ಲಕ್ಷ ರೈತರಿಗೆ 1069.13 ಕೋಟಿಗಳ ಮಧ್ಯಮಾವಧಿ/ದೀರ್ಘಾವಧಿ ಸಾಲ ವಿತರಣೆ ಮಾಡಿದ್ದು, ಶೇ.100 ಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸ ಲಾಗಿದೆ.