News

ಇಂಧನ ಉಳಿತಾಯ ಮಾಡಿದ ಚಾಲಕರಿಗೆ ಸಾರಿಗೆ ಸಚಿವರಿಂದ 10 ಗ್ರಾಂ. ಚಿನ್ನದ ಪದಕ ಘೋಷಣೆ

19 February, 2021 3:10 PM IST By:

ಪ್ರಸ್ತುತ ವರ್ಷ ಅಂದರೆ ಏಪ್ರಿಲ್-2020 ರಿಂದ  ಮಾರ್ಚ್ -2021 ರವರೆಗೆ ರಾಜ್ಯದ 04 ಸಾರಿಗೆ ನಿಗಮಗಳಲ್ಲಿ ತಲಾ ಒಬ್ಬರಂತೆ ಅತಿ ಹೆಚ್ಚು ಇಂಧನ ಉಳಿತಾಯ (ಕೆ.ಎಂ.ಪಿ.ಎಲ್.) ಮಾಡಿದ  ಚಾಲಕರಿಗೆ ತಮ್ಮ ಸ್ವಂತ ಖರ್ಚಿನಲ್ಲಿ 10 ಗ್ರಾಂ ಚಿನ್ನದ ಪದಕ ನೀಡಲಾಗುವುದು ಎಂದು ರಾಜ್ಯದ ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಲಕ್ಷಣ ಸಂಗಪ್ಪ ಸವದಿ ಅವರು ಘೋಷಿಸಿದ್ದಾರೆ.

ಅವರು ಕಲಬುರಗಿಯಲ್ಲಿ ಕೆಎಸ್ಆರ್ಟಿಸಿ ಸಂಸ್ಥೆಯ ವತಿಯಿಂದ ತಯಾರಿಸಿದ ಸಂಚಾರಿ ಗ್ರಂಥಾಲಯ ವಾಹನವನ್ನು ವೀಕ್ಷಿಸಿ ಮಾತನಾಡಿದರು. ಚಾಲನಾ ಸಿಬ್ಬಂದಿಗಳನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಈ ಚಿನ್ನದ ಪದಕ ನೀಡುತ್ತಿದ್ದು, ಈ  ಚಿನ್ನದ ಪದಕ ವಿತರಣಾ ಕಾರ್ಯಕ್ರಮವನ್ನು ಬರುವ ಏಪ್ರಿಲ್ ತಿಂಗಳಲ್ಲಿ ನಿಗದಿಪಡಿಸಲು ಉಪಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಸಂಚಾರಿ ಗ್ರಂಥಾಲಯ ವ್ಯವಸ್ಥೆ ಮಾಡಿರುವುದು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ ಅವರು,  ಕೊರೋನಾ ಸಂಕಷ್ಟದ ನಡುವೆಯೂ ಕಳೆದ ವರ್ಷಕ್ಕಿಂತ ಪ್ರಸ್ತುತ ವರ್ಷ ಹೆಚ್ಚಿನ ಸಾರಿಗೆ ಆದಾಯ ಬರಲು ಕಾರಣರಾದ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲನಾ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ಪರಿಶ್ರಮವನ್ನು   ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಚಾಲನಾ ಸಿಬ್ಬಂದಿಗಳು ಇಂಧನ ಉಳಿತಾಯದಲ್ಲಿ ನಿಟ್ಟಿನಲ್ಲಿ ಶ್ರಮವಹಿಸಿದಲ್ಲಿ ಖರ್ಚು ಕಡಿಮೆ ಮಾಡಬಹುದಾಗಿದೆಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಮರನಾಥ ಪಾಟೀಲ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ್ ಎಂ. ಸೇರಿದಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರದ್ದರು.