Food and Others

ಊಟದ ನಂತರ ಒಂದು ಲೋಟ ಮಜ್ಜಿಗೆ ಕುಡಿದರೆ ಆರೋಗ್ಯಕ್ಕಿದೆ ಹಲವಾರು ಉಪಯೋಗಗಳು

27 August, 2021 5:14 PM IST By:
buttermilk

ಆಯುರ್ವೇದದಲ್ಲಿ ಸಾತ್ವಿಕ ಆಹಾರ ಎಂದು ಕರೆಯಲ್ಪಡುವ ಮಜ್ಜಿಗೆಗೆ ವಿಶೇಷ ಸ್ಥಾನವಿದೆ. ಇದು ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಉಪಯೋಗವಾಗುತ್ತದೆ. ಬೇಸಿಗೆಯ ದಣಿವನ್ನು ನಿವಾರಿಸಲು ಮಜ್ಜಿಗೆ ಸೇವಿಸಬೇಕೆಂದು ಹಿರಿಯಲು ಸಲಹೆ ನೀಡುತ್ತಾರೆ. ಇದನ್ನು ಜೀರ್ಣಕ್ರಿಯೆಗೆ ಮದ್ದು ಎಂದೇ ಪರಿಗಣಿಸಲಾಗುತ್ತದೆ. ಸುಲಭವಾಗಿ ತಯಾರಾಗುವ ಬಡವರ ಅಮೃತ ಎಂದೇ ಪ್ರಸಿದ್ಧಿಯಾಗಿರುವ ಮಜ್ಜಿಗೆಯಲ್ಲಿರುವ ಆರೋಗ್ಯಕರ ಗುಣಗಳು ಇಲ್ಲಿವೆ ನೋಡಿ.

ಪೈಲ್ಸ್ ಅಥವಾ ಮೂಲವ್ಯಾದಿ ಕಾಯಿಲೆ ಇರುವವರು ಪ್ರತಿದಿನ ಮಜ್ಜಿಗೆಯನ್ನು ಕುಡಿಯುವುದರಿಂದ ತುಂಬಾ ಒಳ್ಳೆಯದು, ಇದು ಹೊಟ್ಟೆಯನ್ನು ತಂಪಾಗಿ ಇಡುತ್ತದೆ, ಹಾಗೂ ಮಲಬದ್ಧತೆ ಸಮಸ್ಯೆ ಉಂಟು ಮಾಡುವುದಿಲ್ಲ.  ನಿಮಗೆ ಹೊಟ್ಟೆ ನೋವು ಕಂಡು ಬಂದರೆ, ಅಜೀರ್ಣದ ತೊಂದರೆ ಇದ್ದಾರೆ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು, ಬೆರೆಸಿ ಕುಡಿದರೆ ಕೂಡಲೇ ಕಮ್ಮಿಯಾಗುತ್ತದೆ.

 ಊಟವಾದ ಬಳಿಕ ಒಂದು ಲೋಟ ಮಜ್ಜಿಗೆ ಕುಡಿದರೆ ಆಗ ಹೊಟ್ಟೆ ಉಬ್ಬರ, ತೇಗು, ಬಾಯಿಯಲ್ಲಿ ನೀರು ಬರುವುದು ಇತ್ಯಾದಿ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ಊಟದ ಬಳಿಕ ಒಂದು ಲೋಟ ಮಜ್ಜಿಗೆ ಸೇವಿಸಿದರೆ ಆಗ ನಿಮ್ಮ ಊಟವು ಪರಿಪೂರ್ಣವಾಗುವುದು.

ನಾವು ಆಧುನೀಕರಣಕ್ಕೆ ಹೊಂದಿಕೊಂಡು ಮಜ್ಜಿಗೆಯಂತಹ ಆರೋಗ್ಯಕಾರಿ ಪಾನೀಯವನ್ನು ಕಡೆಗಣಿಸಿ, ತಂಪು ಪಾನೀಯ ಗಳನ್ನು ಊಟವಾದ ಬಳಿಕ ಕುಡಿಯುತ್ತಿದ್ದೇವೆ. ಇದು ಆರೋಗ್ಯಕ್ಕೆ ತುಂಬಾ ಮಾರಕ. ಇದರ ಬದಲು ಮಜ್ಜಿಗೆ ಕುಡಿದರೆ ಅದರಿಂದ ದೇಹವು ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ನೆರವಾಗುವುದು. ಇಷ್ಟು ಮಾತ್ರವಲ್ಲದೆ ತುಂಬಾ ಸೆಕೆ ಅಥವಾ ಉಷ್ಣತೆ ಇರುವ ಸಂದರ್ಭದಲ್ಲಿ ಇದು ದೇಹಕ್ಕೆ ಶಮನ ನೀಡುವುದು.

ಜೀರ್ಣಕ್ರಿಯೆಗೆನೆರವಾಗುವ ಜತೆಗೆ ಇದರಲ್ಲಿ ಇರುವಂತಹ ಪ್ರೊಬಯೊಟಿಕ್ ಸೂಕ್ಷ್ಮಜೀವಿಗಳು, ಹೊಟ್ಟೆಯ ಸೋಂಕಿಗೆ ಕಾರಣವಾಗುವಂತಹ ಬ್ಯಾಕ್ಟೀರಿಯಾದ ಬೆಳವಣಿಗೆ ಯನ್ನು ತಡೆಯುವುದು.

ಮಜ್ಜಿಗೆಯಲ್ಲಿ ಕೊಬ್ಬಿನಾಂಶವು ತುಂಬಾ ಕಡಿಮೆ ಇರುವ ಕಾರಣದಿಂದ ಮಜ್ಜಿಗೆಯು ತೂಕ ಇಳಿಸಿ ಕೊಳ್ಳಲು ತುಂಬಾ ಸಹಕಾರಿ. ಮಜ್ಜಿಗೆಯಲ್ಲಿ ಉನ್ನತ ಮಟ್ಟದ ವಿಟಮಿನ್ ಗಳು, ಖನಿಜಾಂಶಗಳು, ಪೋಷಕಾಂಶಗಳಾದ ಪ್ರೋಟೀನ್, ಕ್ಯಾಲ್ಸಿಯಂ, ಪೊಟಾಶೀಯಂ, ಮೆಗ್ನಿಶಿಯಂ ಮತ್ತು ಇತರ ಕಿಣ್ವಗಳು ಇವೆ. ಇದು ದೇಹದಲ್ಲಿ ಶಕ್ತಿಯ ಮಟ್ಟವನ್ನು ಕಾಪಾಡಲು ನೆರವಾಗುವುದು.
ಇದು ಹಸಿವನ್ನು ಹೆಚ್ಚಿಸಿದರೂ ನೀವು ಅನಾರೋಗ್ಯಕಾರಿ ಹಾಗೂ ಜಂಕ್ ಫುಡ್ ತಿನ್ನುವುದನ್ನು ಇದು ಕಡಿಮೆ ಮಾಡುವುದು.

ಸಮತೋಲಿತ ಆಹಾರ ಕ್ರಮಕ್ಕೆ ಬೇಕಾಗಿರುವಂತಹ ಎಲ್ಲಾ ರೀತಿಯ ಸೂಕ್ಷ್ಮಪೋಷಕಾಂಶಗಳು ಮಜ್ಜಿಗೆಯಲ್ಲಿ ಇದೆ. ಮಜ್ಜಿಗೆಯಲ್ಲಿ ಉನ್ನತ ಮಟ್ಟದ ಪ್ರೋಟೀನ್. ಕ್ಯಾಲ್ಸಿಯಂ ಮತ್ತು ಇತರ ಕೆಲವೊಂದು ಪೋಷಕಾಂಶಗಳಾಗಿರುವಂತಹ ಪೊಟಾಶಿಯಂ, ಕಬ್ಬಿಣ, ಸತು ಮತ್ತು ವಿಟಮಿನ್ ಗಳಾಗಿರುವ ಎ, ಬಿ, ಡಿ ಮತ್ತು ಇ ಇದ್ದು, ದೇಹಕ್ಕೆ ಪೋಷಣೆ ನೀಡುವಂತಹ ಎಲ್ಲಾ ಅಂಶಗಳನ್ನು
ಇದು ಹೊಂದಿದೆ. ಮಜ್ಜಿಗೆಯಲ್ಲಿ ವಿಟಮಿನ್ ಬಿ ಸಂಕೀರ್ಣ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ. ವಿಟಮಿನ್ ಕೊರತೆ ಇರುವಂತಹವರು ನಿಶ್ಯಕ್ತಿ ಮತ್ತು ರಕ್ತಹೀನತೆ ನಿವಾರಣೆ ಮಾಡಲು ಮಜ್ಜಿಗೆ ಬಳಸಿಕೊಳ್ಳಬೇಕು.

ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ಮತ್ತು ನಿಯಂತ್ರಣದಲ್ಲಿ ಇಡಲು ಮಜ್ಜಿಗೆಯು ನೆರವಾಗುವುದು. ಇದು ಕೊಲೆಸ್ಟ್ರಾಲ್ ನಿಯಂತ್ರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಈ ಅದ್ಭುತ ಪಾನೀಯವು ಹೊಟ್ಟೆಯಲ್ಲಿ ಆಮ್ಲೀಯತೆ ಮತ್ತು ಹಿಮ್ಮುಖ ಹರಿವನ್ನು ತಡೆಯುವುದು.