Agripedia

ಹಸಿ ಮೆಣಸಿನಕಾಯಿ ಕೃಷಿ: ಅಧಿಕ ಇಳುವರಿ ಜೊತೆಗೆ ಉತ್ತಮ ಲಾಭ ಪಡೆಯುತ್ತಿರುವ ರೈತ!

30 July, 2023 2:05 PM IST By: Kalmesh T
Farmer getting high yield and profit in green chilli cultivation

Green chilli cultivation : ಶಿರಹಟ್ಟಿ ತಾಲ್ಲೂಕಿನ ಮಾಗಡಿ ಗ್ರಾಮದ ಪ್ರಗತಿಪರ ಸಣ್ಣ ಹಿಡುವಳಿದಾರ ರೈತರಾದ ಶ್ರೀ ವೀರಣ್ಣ ಬಡ್ಡಿಯವರು ತಮ್ಮ 3 ಎಕರೆ ಹೊಲದಲ್ಲಿಯೇ ಲಾಭದಾಯಕ ಹಸಿಮೆಣಸಿನಕಾಯಿ  ಬೆಳೆದು ಅಧಿಕ ಇಳುವರಿ ಮತ್ತು ಆದಾಯ ಪಡೆದುಕೊಳ್ಳುತ್ತಿದ್ದಾರೆ. ಈ ಮಣಸಿನಕಾಯಿ ಬೆಳೆ ಕ್ಷೇತ್ರಕ್ಕೆ ಭೇಟಿ ನೀಡಿದ ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರಾದ ಶ್ರೀ ಸುರೇಶ ವೀ ಕುಂಬಾರ ಅವರು ಸಲಹೆ ಮತ್ತು ಮಾರ್ಗದರ್ಶನ ನೀಡಿದರು.

Chilli Farming : ವೀರಣ್ಣ ಬಡ್ಡಿಯವರು ತಮ್ಮ ಬಳಿ ಇರುವ ಕೇವಲ 3 ಎಕರೆ ಹೊಲದಲ್ಲಿಯೇ ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ ಏರು ಮಾಡಿ, ಅದರಲ್ಲಿ ಹನಿ ನೀರಾವರಿ ಹಾಗೂ ಮಲ್ಚಿಂಗ್‌ ಹಾಳೆ ಹಾಕುವ ಮೂಲಕ ಕಲ್ಲಂಗಡಿ ಹಣ್ಣಿನ ಬೆಳೆ ಬೆಳೆದಿದ್ದರು. ಕೊಯ್ಲಿನ ನಂತರ ಮತ್ತೆ ಕಲ್ಲಂಗಡಿ ಬೆಳೆ ಹಾಕಿ ಸುಮಾರು 6 ಲಕ್ಷದವರೆಗೆ ಲಾಭ ಮತ್ತು ಉತ್ತಮ ಇಳುವರಿಯನ್ನು ಕೂಡ ಪಡೆದಿದ್ದರು.

ಅದಾದ ನಂತರ ಮೊದಲೇ ಹಾಕಲಾಗಿದ್ದ ಅದೇ ಏರು ಮಡಿ, ಮಲ್ಟಿಂಗ್ ಸೀಟ್ನ್ನು ಉಪಯೋಗಿಸಿಕೊಂಡು, ನಾಗಾವಿ ಗಿಡ್ಡ ಎನ್ನುವ ತಳಿಯ ಹಸಿ ಮೆಣಸಿನಕಾಯಿ ಬೆಳೆಯನ್ನು ಅವುಗಳ ನಡುವೆ ಬದನೆಕಾಯಿ, ಟೊಮೆಟೊ ಹಾಗೂ ಚೆಂಡು ಹೂವಿನ ಬೆಳೆಯನ್ನು ಬೆಳೆಯುವ ಮೂಲಕ ಮಿಶ್ರ ಬೇಸಾಯ ಪದ್ದತಿಯನ್ನು ಪಾಲಿಸಿಕೊಂಡು ಉತ್ತಮ ಕೃಷಿಯನ್ನು ಮಾಡುತ್ತಿದ್ದಾರೆ.

ಅಷ್ಟೇ ಅಲ್ಲದೇ ಅವರು ತಮ್ಮ ಜಮೀನಿಗೆ ಅಳವಡಿಸಿಕೊಳ್ಳಲಾಗಿರುವ ಹನಿ ನೀರಾವರಿ ಮತ್ತು ಮಲ್ಚಿಂಗ್‌ ಹಾಳೆಗಳಿಗೆ ಸರ್ಕಾರದಿಂದ ದೊರೆಯುವ ಸಬ್ಸಿಡಿ ಹಣವನ್ನು ಸ್ಥಳೀಯ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಪಡೆದು ಕೊಂಡು ಯಶಸ್ವಿ ಕೃಷಿಯನ್ನು ಮಾಡುತ್ತಿದ್ದಾರೆ.

ನಾಗಾವಿ ಗಿಡ್ಡ ತಳಿ ನಾಟಿ: ಎರಡೇ ತಿಂಗಳಲ್ಲಿ ಫಸಲು

ಕಳೆದ ಏಪ್ರಿಲ್ 8 ರಂದು ನಾಗಾವಿ ಗಿಡ್ಡ ಎನ್ನುವ ತಳಿಯ ಬೀಜಗಳಿಂದ ನಾಟಿ ಮಾಡಿದ್ದು ಕೇವಲ ಎರಡೂವರೆ ತಿಂಗಳಲ್ಲಿ ಉತ್ತಮ ಫಸಲು ಬ೦ದಿದ್ದು, ಕಳೆದ ವಾರ ಮೊದಲನೆಯ ಕಟಾವಿನಲಿ, ಸುಮಾರು 5 ಕ್ವಿಂಟಲ್ ಮೆಣಸಿನ ಕಾಯಿಯನ್ನು ಪ್ರತಿ ಕ್ವಿಂಟಲ್‌ಗೆ ₹14,000 ರೂಪಾಯಿ ದರದಂತೆ ಮಾರಾಟ ಮಾಡಿ ಸುಮಾರು ₹70,000 ಆದಾಯ ಪಡೆದಿದ್ದಾರೆ.

ಇದಷ್ಟೇ ಅಲ್ಲದೇ ಇನ್ನು ಮುಂದೆ 8-10 ಕಟಾವು ಮಾಡಿದರೆ, ಸುಮಾರು ಒಟ್ಟು 50 ಟನ್ನುಗಳಷ್ಟು ಇಳುವರಿ ಪಡೆಯಲಿದ್ದಾರೆ. ಇದರ ಜೊತೆಗೆ ಟೊಮೋಟೊ, ಬದನೆ, ಹೂವಿನಿಂದಲೂ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಕೃಷಿ ವಿಜ್ಞಾನ ಕೇಂದ್ರ ಮತ್ತವುಗಳ ಕಾರ್ಯ ವಿಧಾನದ ಕುರಿತು ಮಾಹಿತಿ

ಸಾವಯವ ಕೃಷಿಗೆ ಒತ್ತು:

ರೈತ ವೀರಣ ಬಡ್ಡಿಯವರು ತಮ್ಮ ಕ್ಷೇತ್ರದಲ್ಲಿ, ಬೆಳೆಯುವ ಬೆಳೆಗಳಿಗೆ ಪ್ರಮುಖವಾಗಿ ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಬೇವಿನ ಹಿಂಡಿ ಗೊಬ್ಬರ, ಅಣು ಜೀವಿ ಗೊಬ್ಬರ, ಗೋಮೂತ್ರ ಮುಂತಾದವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುತ್ತಿದ್ದಾರೆ.

ಕೀಟ ರೋಗಗಳ ನಿಯಂತ್ರಣಕ್ಕಾಗಿ ರಾಸಾಯನಿಕಗಳನ್ನೂ ಉಪಯೋಗಿಸುತ್ತಾರೆ. ತೋಟಗಾರಿಕೆ ಇಲಾಖೆಯ ಮಾರ್ಗದರ್ಶನದಲ್ಲಿ, ಬೆಳೆ ಪರಿವರ್ತನೆ, ಇಸ್ರೇಲ್ ತಂತ ಜ್ಞಾನ ಉಪಯೋಗಿಸಿ ಹೆಚ್ಚಿನ ಇಳುವರಿ ಅಧಿಕ ಲಾಭ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪಡೆಯುತ್ತಿದ್ದಾರೆ.

ಇವರು ಈ ಭಾಗದಲ್ಲಿ, ಪ್ರಗತಿಪರ ರೈತರಾಗಿ ಸುತ್ತ ಮುತ್ತಲಿನ ಸಾಕಷ್ಟು ರೈತರಿಗೆ ಹಾಗೂ ಯುವಕರಿಗೆ ಮಾದರಿಯಾಗಿದ್ದಾರೆ.

ಮಣ್ಣು ಪರೀಕ್ಷೆ ಎಂದರೇನು? ಇದನ್ನು ಮಾಡುವುದು ಹೇಗೆ? ಇದರಿಂದಾಗುವ ಉಪಯೋಗಗಳೇನು?