Success stories

ಬೆಳಗೆದ್ದು ಹೊಲ್ದಾಗ್ ತಿರಗ್ಯಾಡಿದ್ರೆ ಹೊಲಾ ಮಾತಾಡ್ತದ್- ಮಲ್ಲಿನಾಥ ಕೊಲ್ಲೂರ

15 June, 2020 5:01 PM IST By:

ಕೃಷಿ ಎಂದರೆ ಸಾಕು, ಕಷ್ಟ, ನಷ್ಟ, ನೋವು, ಹಾನಿ ಎಂಬ ಶಬ್ದಗಳೇ ಹೆಚ್ಚು ಬಳಕೆಯಾಗುತ್ತವೆ. ಕೃಷಿಯಿಂದ ಲಾಭವಿಲ್ಲವೆಂದು ಹೊಲಮನೆ ಬಿಟ್ಟು ಗುಳೆ ಹೋದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಇಂತಹ ಕಾಲದಲ್ಲಿ ಕಲಬುರಗಿ ತಾಲೂಕಿನ ಮೇಳಕುಂದಾ ಗ್ರಾಮದ ರೈತ ಮಲ್ಲಿನಾಥ ಕೊಲ್ಲೂರ (Mallinath Kollur)ಸಮಗ್ರ ಕೃಷಿ ಪದ್ಧತಿಯಿಂದ ಹಲವಾರು ಪ್ರಗತಿಪರ ರೈತರೇ ನಿಬ್ಬೆರಗಾಗುವಂತೆ  ಕೃಷಿ ಮಾಡಿದ್ದಾನೆ.

ಬೆಳಗೆದ್ದು ಹೊಲ್ದಾಗ್ ತಿರಗ್ಯಾಡಿದ್ರೆ ಸಾಕು ಹೊಲಾ ಮಾತಾಡ್ತದ್ ಎಂದು ಸದಾ ರೈತರಿಗೆ ಸಲಹೆ ನೀಡುತ್ತಲೇ ಇರುತ್ತಾರೆ.  ಹೊಲಮನೆ ಬಿಟ್ಟು ನಗರ ಪ್ರದೇಶಗಳಲ್ಲಿ ಇನ್ನೊಬ್ಬರ ಹಂಗಿನಲ್ಲಿ ಬದುಕುವುದರ ಬದಲು ಇದ್ದ ಭೂಮಿಯಲ್ಲಿಯೇ ಸಮಗ್ರ ಕೃಷಿ ಪದ್ಧತಿ ಅಳವಡಿಸಿ ಉತ್ತಮ ಆದಾಯ ಗಳಿಸಿ ನೆಮ್ಮದಿಯ ಜೀವನ ನಡೆಸಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

ತೋಟಗಾರಿಕೆ(Horticulture), ತರಕಾರಿ, ಎರೆಹುಳುಗೊಬ್ಬರ, ಹೈನುಗಾರಿಕೆ, ಮಿಶ್ರಬೆಳೆ, ಸಾವಯವ ಕೃಷಿ (Organic farming)ಹೀಗೆ ಒಂದಲ್ಲ ಎರಡಲ್ಲ ಹಲವಾರು ರೀತಿಯಲ್ಲಿ ಹೊಸ ಹೊಸ ಪ್ರಯೋಗ ಮಾಡಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದರಿಂದಲೇ ಕೃಷಿ ಪಂಡಿತ, ರಾಷ್ಟ್ರೀಯ ಪ್ರಶಸ್ತಿ, ಶ್ರೇಷ್ಠ ಕೃಷಿಕ  ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಈತನ ಕೃಷಿ ಪದ್ಧತಿ ಮೆಚ್ಚಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ಇವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು. 

ಮಲ್ಲಿನಾಥ ಕೊಲ್ಲೂರ ಮನೆಗೆ ಭೇಟಿ ಕೊಟ್ಟರೆ ಸಾಕು, ಮನೆಗೆ ಹತ್ತಿಕೊಂಡೇ ಹೊಲ. ಎಲ್ಲಿ ನೋಡಿದರಲ್ಲಿ ಹಚ್ಚಹಸಿರು, ಮನೆಮುಂದೆ ಹೈನುಗಾರಿಕೆ, ಮನೆಯ ಹಿಂಬದಿಯಲ್ಲಿಯೇ ಎರೆಹುಳುಗೊಬ್ಬರ ಘಟಕ, ಪಕ್ಕದಲ್ಲಿಯೇ ರೇಷ್ಮೆ ಘಟಕ, ಇನ್ನೊಂದು ಬದಿಯಲ್ಲಿ ತರಕಾರಿ. ಹೀಗೆ  ಮನೆ ಸುತ್ತಮುತ್ತ ಸಮಗ್ರ ಕೃಷಿ ಪದ್ಧತಿಯ ಜ್ಞಾನ ಭಂಡಾರ ತುಂಬಿಕೊಂಡಿದ್ದಾನೆ.

ಕೊಟ್ಟಿಗೆ, ಎರೆಹುಳ ಗೊಬ್ಬರ ಹಾಕಿದರೆ ಬಂಗಾರದ ಬೆಳೆ:

 ಭೂ ತಾಯಿಯನ್ನು ನಂಬಿದರೆ ಎಂದೂ ಹಾನಿಮಾಡಲ್ಲ, ಮನುಷ್ಯನ ಹೊಟ್ಯಾಗ್ ವಿಷ ಹಾಕಿದರೆ ಬದಕ್ತಾನ್‍ನೆನ್ರಿ,,, ಭೂ ತಾಯಿಯೂ ಹಾಗೆ. ಜಮೀನ್‍ದಾಗ ವಿಷ ಹಾಕಿ ಅದರ ಸತ್ವವನ್ನು ನಾಶ ಮಾಡುತ್ತಿz್ದÉೀವೆ. ಬೆಳೆ ಎಲ್ಲಿಂದ್ ಕೊಡ್ತದ್‍ರಿ, ಡಿಎಪಿ ಹಾಕಿ ಭೂಮಿಯನ್ ನಾವೇ ನಾಶ ಮಾಡುತ್ತಿದ್ದೇವೆ. ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ ಭೂತಾಯಿ ಮುಖ್ಯ ಆಹಾರ. ಅದನ್ ಬಿಟ್ಟು ವಿಷ ಹಾಕಿ ಬಂಗಾರದ ಬೆಳೆ ಕೊಡಂದ್ರೆ ಎಲ್ಲಿಂದ ಕೊಡ್ತ್‍ದರಿ ಎನ್ನುತ್ತಾರೆ ಮಲ್ಲಿನಾಥ ಕೊಲ್ಲೂರ.

ಸಮಗ್ರ ಕೃಷಿ ಪದ್ಧತಿ:

 ಸಮಗ್ರ ಕೃಷಿ ಪದ್ಧತಿಯಡಿ ವಿವಿಧ ತಳಿಯ ತೊಗರಿ, ಹೆಸರು, ಉದ್ದು, ಸೂರ್ಯಕಾಂತಿ, ಮುಸುಕಿನ ಜೋಳ ಬೆಳೆಗಳ ಜತೆಗೆ ಸಿರಿಧಾನ್ಯಗಳಾದ ಸಾಮೆ, ನವಣೆಗಳನ್ನೂ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಹೈನುಗಾರಿಕೆ, ಎರೆಹುಳು ಗೊಬ್ಬರ ಘಟಕ, ತರಕಾರಿ ಹೀಗೆ ಎಲ್ಲಾ ರೀತಿಯಲ್ಲೂ ಸೈ ಎನಿಸಿಕೊಂಡಿದ್ದಾರೆ.

ವಿಷಮುಕ್ತ ಕೃಷಿಯೆಡೆಗೆ ಪಯಣ:

ಮಲ್ಲಿನಾಥ ಕೊಲ್ಲೂರ ಅವರು ಘನ ಜೀವಾಮೃತ, ಜೀವಸಾರ ದ್ರವವನ್ನು ಬೆಳೆಗಳಿಗೆ ನೀಡುತ್ತಾರೆ. ಬಳ್ಳೊಳ್ಳಿ, ತಂಬಾಕು, ಮೆಣಸಿನಕಾಯಿ, ಸಿತಾಫಲ, ಬೇಸರಮಾ, ಔಢಲ, ಮದಗಣಕಿ, ಬೇವು, ಲಕ್ಕಿ, ಮೆಣಸು, ಎಕ್ಕೆ ಹಾಗೂ ಚದುರಂಗಿ ಬಳಸಿ ತಯಾರಿಸಿದ ಕಷಾಯ ಕೀಟ ನಿರ್ವಹಣೆಗೆ ಬಳಕೆ ಮಾಡುತ್ತಾರೆ. ಮುಂಬರುವ ದಿನಗಳಲ್ಲಿ ಸಂಪೂರ್ಣ ವಿಷಮುಕ್ತ ಕೃಷಿಯೆಡೆ ಹೆಜ್ಜೆ ಇಡುವ ಯೋಜನೆ ಇವರದ್ದಾಗಿದೆ.

ಕೃಷಿ ಜೊತೆಗೆ ಕೋಳಿ ಸಾಕಾಣಿಕೆ ಮಾಡಿ ಯಶಸ್ವಿ ರೈತನಾದ ಲಕ್ಷಿಕಾಂತ ಹಿಬಾರೆ

ಸಮಗ್ರ ಕೃಷಿಯಿಂದ ವರ್ಷಪೂರ್ತಿ ಹಣ:

 ಕೃಷಿಯ ಜತೆ ಹೈನುಗಾರಿಕೆ.  ದೇಸಿ ಆಕಳು (Cow) ಸಾಕುತ್ತಿದ್ದಾರೆ. 25 ಆಕಳು,  15 ಕರುಗಳಿವೆ. ಇವುಗಳಿಗೆ 15- 50 ಅಳತೆಯ ಶೆಡ್ ನಿರ್ಮಿಸಿದ್ದಾರೆ. ಗೋಮೂತ್ರ ಸಂಗ್ರಹಣೆಯಾಗಲು ತೊಟ್ಟಿ ಮಾಡಿದ್ದಾರೆ. ತೊಟ್ಟಿ ತುಂಬಿದ ನಂತರ ಅದನ್ನು ಹನಿ ನೀರಾವರಿ ಮೂಲಕ ಹೊಲಕ್ಕೆ ಬಿಡುತ್ತಾರೆ.  ಹಾಲು ಮಾರಾಟದಿಂದ ದಿನಕ್ಕೆ 2000 ದಿಂದ 2500 ರುಪಾಯಿ ಆದಾಯ ಬರುತ್ತದೆ. ಪ್ರತಿವರ್ಷ 120 ಟನ್ ಎರೆಹುಳು ಗೊಬ್ಬರ ಮಾರಾಟ ಮಾಡಿ ಸುಮಾರು 6 ಲಕ್ಷ, ಎರೆಹುಳು ಮಾರಾಟ ಮಾಡಿ 3 ಲಕ್ಷ  ಗಳಿಸುತ್ತಾರೆ.

10 ಎಕರೆ ಜಮೀನಿನಲ್ಲಿ ಒಂದು ಸಾಲು ತೊಗರಿ (Red gram) ಇನ್ನೊಂದು ಸಾಲು ನವಣಿ ಬೆಳೆಯುತ್ತಾರೆ. ತೊಗರಿಯಿಂದ 5 ಲಕ್ಷ, ನವಣಿಯಿಂದ 1 ಲಕ್ಷ ನಿವ್ವಳ ಆದಾಯ, ನಾಲ್ಕು ಎಕರೆಯಲ್ಲಿ ರೇಷ್ಮೆ ನಿವ್ವಳ ಲಾಭ 6 ಲಕ್ಷ, ಎರಡುವರೆ  ಎಕರೆಯಲ್ಲಿ ಕಲ್ಲಂಗಡಿ ಬೆಳೆದು 2 ಲಕ್ಷ ರುಪಾಯಿ ನಿವ್ವಳ ಲಾಭ ಕಂಡಿದ್ದಾರೆ..

ಹುಡುಕಿಕೊಂಡು ಬಂದ ಪ್ರಶಸ್ತಿಗಳು:

 ಕೃಷಿಯನ್ನೇ ನಂಬಿ ಹಗಲು ರಾತ್ರಿ ಮೈಮುರಿದು ದುಡಿಯುತ್ತಿದ್ದರಿಂದ ಈತನಿಗೆ 2012 ರಲ್ಲಿ ಕೃಷಿ ಪಂಡಿತ, (Krishi pandit) 2013 ರಲ್ಲಿ ರಾಷ್ಟ್ರೀಯ ಪ್ರಶಸ್ತಿ, ಉತ್ತಮ ಸಾವಯವ ಕೃಷಿ ರೈತ, ಸಮಗ್ರ ಕೃಷಿ ಪದ್ಧತಿ ರೈತ, ಶ್ರೇಷ್ಠ ಕೃಷಿಕ ಹೀಗೆ ಹಲವಾರು ಪ್ರಶಸ್ತಿಗಳು ಬಂದಿವೆ.

ಮಲ್ಲಿನಾಥ ಕೊಲ್ಲೂರ ಮೇಳಕುಂದಾ (Mallinath Kollur)

ಕಲಬುರಗಿ ತಾಲೂಕು

ಮೊ.9945208188