Horticulture

ಹನಿ ನೀರಾವರಿ ಘಟಕ ಸ್ಥಾಪನೆಗೆ ಶೇ. 90 ರಷ್ಟು ಸಹಾಯಧನ ನೀಡಲು ರೈತರಿಂದ ಅರ್ಜಿ ಆಹ್ವಾನ

11 September, 2021 3:10 PM IST By:

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರೈತರಿಗೆ ಸಹಾಯಧನದಲ್ಲಿ ಹನಿ ಹಾಗೂ ತುಂತುರು ನೀರಾವರಿ ಘಟಕಕ್ಕೆ ಸಹಾಯಧನ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. 2021-22ನೇ ಸಾಲಿನ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ಹಾಗೂ ತುಂತುರು ನೀರಾವರಿ ಘಟಕವನ್ನು ಶೇ. 90 ರ ರಿಯಾಯ್ತಿಯಲ್ಲಿ 2 ಹೆಕ್ಟೇರ್ ವರೆಗೆ ಮತ್ತು 2 ರಿಂದ 5 ಹೆಕ್ಟೇರ್ ವರೆಗೆ ಶೇ. 45 ರಷ್ಟು ಸಹಾಯಧನದ ಸವಲತ್ತು ಪಡೆಯಲು ಅವಕಾಶವಿದ್ದು, ಎಲ್ಲಾ ವರ್ಗದ (ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ) ರೈತರಿಂದ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಸೌಲಭ್ಯವನ್ನು ಪಡೆಯಲು ಇಚ್ಚಿಸುವ ಅರ್ಹ ರೈತರು ಸಂಬಂಧಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಅರ್ಜಿಯೊಂದಿಗೆ ಪಹಣಿ, 20 ರೂಪಾಯಿ ಛಾಪಾಕಾಗದ, ಕೊಳವೆ ಬಾವಿ ದೃಢೀಕರಣ,  ನೀರಿನ ಲಭ್ಯತೆ ದೃಢೀಕರಣ, ಬೆಳೆ ದೃಢಿಕರಣ ಪತ್ರ, ಇತರ ದಾಖಲೆಗಳನ್ನು ಸಲ್ಲಿಸಲು ಕೋರಲಾಗಿದೆ. ರೈತ ಸಂಪರ್ಕ ಕೇಂದ್ರದಲ್ಲಿ ಕೆ-ಕಿಸಾನ್ ತಂತ್ರಾಂಶದಲ್ಲಿ ನಮೂದಿಸಿಕೊಳ್ಳುವುದು ಕಡ್ಡಾಯವಾಗಿದೆ.

ಜೇಷ್ಠತಾ ಪಟ್ಟಿಯ ಆಧಾರದ ಮೇಲೆ ರೈತರು ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಕೃಷಿ ಸಿಂಚಾಯಿ ಯೋಜನೆಯಡಿ ದೊರೆಯುವ ಸೌಲಭ್ಯಗಳ ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ತೋಟಗಾರಿಕೆ ಮಾಡುತ್ತಿರುವ ಸಣ್ಣ ರೈತರು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ  ಸಹಾಯಧನದಲ್ಲಿ ಕೃಷಿ ಉಪಕರಣಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಲು ಈ ಯೋಜನೆಯನ್ನು ಆರಂಭಿಸಿದೆ. ನೀರಾವರಿ ಮಾಡಲು ಆಸಕ್ತಿಯಿರುತ್ತದೆ ಆದರೆ ಆರ್ಥಿಕ ಸಮಸ್ಯೆಯಿರುವ ರೈತರಿಗೆ ಸಹಾಯ ಮಾಡಲಾಗಲು ಈ ಯೋಜನೆ ಆರಂಭಿಸಲಾಗಿದೆ.  ಹೆಚ್ಚಿನ ರೈತರು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೌಲಭ್ಯ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.

ಕೃಷಿ ಸಿಂಚಾಯಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಹೇಗೆ ನಡೆಯುತ್ತದೆ?

ಅರ್ಹ ರೈತರು ತೋಟಗಾರಿಕಾ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಸಹಾಯಧನ ಕೋರಿ ಅರ್ಜಿ ಸಲ್ಲಿಸುತ್ತಾರೆ. ಹಿರಿತನ ಆಧಾರದ ಮೇಲೆ ಅನುದಾನದ ಲಭ್ಯತೆಗೆ ಹೊಂದಿಸಿಕೊಂಡು ಕೃಷಿ ಇಲಾಖೆಯು ರೈತರಿಗೆ ಸಹಾಯಧನದಲ್ಲಿ ಕೃಷಿ ಉಪಕರಣಗಳನ್ನು ನೀಡುತ್ತದೆ.

ಸಬ್ಸಿಡಿಯಲ್ಲಿ ತಾಡಪತ್ರಿ ವಿತರಿಸಲು ರೈತರಿಂದ ಅರ್ಜಿ ಆಹ್ವಾನ

ಹಾವೇರಿ ತಾಲೂಕಿನ ಗುತ್ತಲ ರೈತ ಸಂಪರ್ಕ ಕೇಂದ್ರಗಳ ಮೂಲಕ 2021-22ನೇ ಸಾಲಿನ ಕೃಷಿ ಇಲಾಖೆಯ ರಿಯಾಯ್ತಿ ದರದಲ್ಲಿ ರೈತರಿಗೆ ತಾಡಪತ್ರಿಗಳನ್ನು ವಿತರಿಸಲ ತೀರ್ಮಾನಿಸಿದ್ದು, ಸದುಪಯೋಗ  ಪಡಿಸಿಕೊಳ್ಳುವಂತೆ ಕೃಷಿ ಅಧಿಕಾರಿ ಪುಟ್ಟರಾಜ ಹಾವನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಡಪತ್ರಿಗಳನ್ನು ಪಡೆಯಲಿಚ್ಚಿಸುವ ರೈತರು ಆಧಾರ್ ಕಾರ್ಡ್, ಜಮೀನಿನ ಉತಾರ, ಬ್ಯಾಂಕ್ ಪಾಸ್ ಬುಕ್ ನ ಝರಾಕ್ಸ್ ಪ್ರತಿಯೊಂದಿಗೆ ಅರ್ಜಿಗಳನ್ನು ಪಟ್ಟಣದ ರೈತ ಸಂಪರ್ಕ ಕೇಂದ್ರಗಳಲ್ಲಿ ಸೆಪ್ಟೆಂಬರ್ 18 ರೊಳಗೆ  ಸಲ್ಲಿಸಬೇಕು. ರೈತರು ಸದರಿ ಯೋಜನೆಯಡಿ ಸವಲತ್ತು  ಪಡೆಯಬಹುದು. ಈ ಹಿಂದೆ ತಾಡಪತ್ರಿಗಳನ್ನು ಪಡೆದ ರೈತ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ತಾಡಪತ್ರಿಗಳನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ನಡೆಸಲಾಗುವುದು. ಆಯ್ಕೆಯಾದ ರೈತ ಫಲಾನುಭವಿಗಳಿಗೆ ಸೆಪ್ಟೆಂಬರ್ 23  ರಿಂದ ಸೆಪ್ಟೆಂಬರ್ 30 ರವರೆಗೆ ಹಂಚಿಕೆ ಮಾಡಲಾಗುವುದು. ಹಂಚಿಕೆಮಾಡುವ ಕೊನೆಯ ದಿನಾಂಕದೊಳಗೆ ಫಲಾನುಭವಿಗಳು ತಮ್ಮ ತಾಡಪತ್ರಿಗಳನ್ನು ತೆಗೆದುಕೊಂಡು ಹೋಗತಕ್ಕದ್ದು, ಇಲ್ಲವಾದಲ್ಲಿ ಅವಶ್ಯಕತೆ ಇಧ್ದ ರೈತರಿಗೆ ಹಂಚಿಕೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತರ ಬೆಳೆಗಳಿಗೆ ಮಳೆ, ಗಾಳಿ ಕಾಪಾಡಲು ರೈತರಿಗೆ ತಾಡಪತ್ರಿಯ ಅವಶ್ಯಕತೆಯಿರುತ್ತದೆ. ಅಷ್ಟೇ ಅಲ್ಲ, ಬೆಳೆಗಳ ರಾಶಿ ಸಮಯದಲ್ಲಿಯೂ ಸಹ ತಾಡಪತ್ರಿ ಬಳಕೆ ಮಾಡಲಾಗುತ್ತದೆ. ಸಹಾಯಧನದಲ್ಲಿ ವಿತರಿಸಲಾಗುವ ಈ ತಾಡಪತ್ರಿಗಳನ್ನು ರೈತರು ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.