Government Schemes

ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ಬೋರ್ವೆಲ್ ಕೊರೆಸುವಿಕೆಗೆ 3 ಲಕ್ಷ ಸಹಾಯಧನ

24 August, 2021 11:24 PM IST By:

ಗಂಗಾ ಕಲ್ಯಾಣ ಯೋಜನೆಯನ್ನು ಬಡ ಹಾಗೂ ಮಧ್ಯಮ ವರ್ಗದ ರೈತರ ಜಮೀನಿಗೆ ಉಚಿತವಾಗಿ ಕೊಳವೆಬಾವಿ ಕೊರೆಸಿಕೊಡುವ ಉದ್ದೇಶದಿಂದ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತರಲಾಗಿದೆ. ಗಂಗಾ ಕಲ್ಯಾಣ ಯೋಜನೆಯು 1983 ರಿಂದ ಪ್ರಾರಂಭವಾಗಿದೆ.  ಈ ಯೋಜನೆಯಡಿ 1½ ಎಕರೆಯಿಂದ 5.00 ಎಕರೆ ಜಮೀನು ಹೊಂದಿರುವ  ಸಣ್ಣ ಮತ್ತು ಅತೀ ಸಣ್ಣ ರೈತರ ಜಮೀನಿನಲ್ಲಿ ಕೊಳವೆಬಾವಿ ಕೊರೆಸಿ, ಪಂಪ್ ಸೆಟ್ ಅಳವಡಿಸಿ ವಿದ್ಯುದ್ಧೀಕರಣಗೊಳಿಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ,

ಈ ಯೋಜನೆಯಡಿಯಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವಾಪ್ತಿಗೆ ಬರುವ ಆದಿಜಾಂಬವ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಬೋವಿ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ದೇವರಾಜು ಅರಸು ಅಭಿವೃದ್ಧಿ ನಿಗಮ ಸೇರಿದಂತೆ ಒಟ್ಟು 8 ನಿಗಮಗಳಿಂದ ಪ್ರತಿ ವರ್ಷ ಅಂದಾಜು 10 ಸಾವಿರ ಕೊಳವೆ ಬಾವಿ ಕೊರೆಯಲಾಗುತ್ತದೆ.

ಅಂತರ್ಜಲದ ಮಟ್ಟ ಕುಸಿದಿರುವ ಜಿಲ್ಲೆಗಳಾದ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಿಗೆ ಘಟಕ ವೆಚ್ಚವನ್ನು ರೂ.4.00 ಲಕ್ಷಗಳಿಗೆ ನಿಗದಿಪಡಿಸಿದ್ದು, ರೂ.3.00 ಲಕ್ಷ ಸಹಾಯದನ ರೂ.50,000/- ಅವಧಿಸಾಲ ಮತ್ತು ವಿದ್ಯುಧೀಕರಣಕ್ಕೆ ರೂ.50,000/ಆಗಿರುತ್ತದೆ.  ಯೋಜನೆಯಡಿ, ನೈಸರ್ಗಿಕವಾಗಿ ನದಿ, ತೊರೆ, ನಾಲೆಗಳ ಅಕ್ಕಪಕ್ಕದಲ್ಲಿರುವ ಪರಿಶಿಷ್ಟ ಪಂಗಡದ ಕನಿಷ್ಟ 3 ಸಣ್ಣ ಮತ್ತು ಅತಿ ಸಣ್ಣ ರೈತರುಗಳ ಜಮೀನುಗಳಿಗೆ ಪಂಪ್‍ಸೆಟ್ ಮತ್ತು ಪೈಪ್‍ಲೈನ್ ಅಳವಡಿಸಿ ಉಚಿತವಾಗಿ ನೀರಾವರಿ ಸೌಲಭ್ಯವನ್ನು ಒದಗಿಸಲಾಗುವುದು. ಸಾಲಕ್ಕೆ  ವಾರ್ಷಿಕ  ಶೇ.6ರ ದರದಲ್ಲಿ  ಬಡ್ಡಿ  ವಿಧಿಸಲಾಗಿವುದು.  ಸಾಲ  ಮತ್ತು  ಬಡ್ಡಿಯನ್ನು  6 ವರ್ಷಗಳಲ್ಲಿ  ಅರ್ಧವಾರ್ಷಿಕ  ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗಿರುತ್ತದೆ.  

ಫಲಾನುಭವಿಗಳ ಆಯ್ಕೆ

ಫಲಾನುಭವಿಗಳನ್ನು ಆಯ್ಕೆ ಮಾಡಲು ಎರಡು ರೀತಿಯ ವ್ಯವಸ್ಥೆಯಿದೆ. ಒಟ್ಟು ಗುರಿಯ ಶೇ. 80 ಫಲಾನುಭವಿಗಳನ್ನು ಆಯಾ ಜಿಲ್ಲೆಗಳ ಹಾಗೂ ಮತಕ್ಷೇತ್ರಗಳ ಶಾಸಕರ ಅಧ್ಯಕ್ಷತೆಯ ಆಯ್ಕೆ ಸಮಿತಿಗಳು ಆಯ್ಕೆ ಮಾಡುತ್ತವೆ. ಉಳಿದ ಶೇ. 20 ಫಲಾನುಭವಿಗಳನ್ನು ಸಮಾಜಕಲ್ಯಾಣ ಸಚಿವರು (ಶೇ. 15) ಹಾಗೂ ನಿಗಮಗಳ ಅಧ್ಯಕ್ಷರು (ಶೇ.5) ಆಯ್ಕೆ ಮಾಡುತ್ತಾರೆ. ಇದು

ಕೊಳವೆಬಾವಿ ಕೊರೆಸಲು ಮಿತಿ?

ಬಯಲು ಸೀಮೆ ಭಾಗದ ಜಿಲ್ಲೆಗಳಿಗೆ 500 ರಿಂದ 1 ಸಾವಿರ ಅಡಿಯವರೆಗೆ, ಕರಾವಳಿ ಭಾಗದ ಜಿಲ್ಲೆಗಳಿಗೆ 300 ರಿಂದ 500 ಅಡಿಯವರೆಗೆ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಿಗೆ 100 ಅಡಿಯವರೆಗೆ ಉಚಿತವಾಗಿ ಬೋರ್ ವೆಲ್ ಕೊರೆಸಲು ಅನುಮತಿ ನೀಡಲಾಗಿದೆ.

ಫಲಾನುಭವಿಗಳಿಗೆ ಸಿಗುವ ಹಣವೆಷ್ಟು?

ಬೋರ್ ವೆಲ್ ಕೊರೆಸಲು ಪ್ರತಿ ಫಲಾನುಭವಿಗಳಿಗೆ 3 ಲಕ್ಷ ರೂಪಾಯಿಯವರೆಗೆ ಸಹಾಯಧನ ನೀಡಲಾಗುವುದು. ವಿದ್ಯುದೀಕರಣ ಬಾಬತ್ತಿಗಾಗಿ ಪ್ರತಿ ಫಲಾನುಭವಿಗಳಿಗೆ 50 ಸಾವಿರ ರೂಪಾಯಿ ಸಾಲ ನೀಡಲಾಗುವುದು.

ಅರ್ಜಿ ಸಲ್ಲಿಸುವುದು ಎಲ್ಲಿ?

ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಬಾವಿ ಕೊರೆಸಲು ಸಣ್ಣ ಮತ್ತು ಅತೀ ಸಣ್ಣ ರೈತರು ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಬಿಪಿಎಲ್ ಕಾರ್ಡ್, ಜಮೀನಿನ ಪಹಣಿ ಸೇರಿದಂತೆ ಮತ್ತಿತರ ದಾಖಲಾತಿಗಳೊಂದಿಗೆ ಅರ್ಜಿಯನ್ನು ಆಯಾ ಸಮುದಾಯದ ಜನರು ಸಮುದಾಯಕ್ಕೆ ಸಂಬಂಧಿಸಿದ ಅಭಿವೃದ್ಧಿ ನಿಗಮದ ಕಚೇರಿಗೆ ಅರ್ಜಿ ಸಲ್ಲಿಸಬೇಕು. ನಿಗಮದ ವ್ಯವಸ್ಥಾಪಕರು ಅರ್ಜಿ ಪರಿಶೀಲಿಸಿ ಬೋರವೆಲ್ ಕೊರೆಯಲು ಏಜೇನ್ಸಿಗಳಿಗೆ ಅನುಮತಿ ನೀಡುತ್ತಾರೆ.