Government Schemes

ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ ಕೊರೆಯಲು 3 ಲಕ್ಷ ಸಹಾಯಧನ ನೀಡಲು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವತಿಯಿಂದ ಅರ್ಜಿ ಆಹ್ವಾನ

15 September, 2021 8:29 PM IST By:

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವಯಿತಿಂದ 2021-22ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ಬೋರ್ವೆಲ್ ಕೊರೆಯಲು ಪರಿಶಿಷ್ಚ ಜಾತಿಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರ ಜಮೀನಿನಲ್ಲಿ ಕೊಳವೆಬಾವಿ ಕೊರೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸೆಪ್ಟೆಂಬರ್ 15 ರಿಂದ  ಆನ್ಲೈನ್ ಮೂಲಕ ಸಲ್ಲಿಸಬೇಕು. ಅಕ್ಟೋಬರ್ 14 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಈ ಯೋಜನೆಯಡಿಯಲ್ಲಿ ರೈತರ ಜಮೀನಿನಲ್ಲಿ ಕೊಳವೆಬಾವಿ ಕೊರೆದು ಪಂಪ್ ಸೆಟ್ ಹಾಗೂ ಇತರ ಪೂರಕ ಸಾಮಗ್ರಿಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಘಟಕದ ವೆಚ್ಚ 3.5 ಲಕ್ಷ ರೂಪಾಯಿ ಆಗಿದ್ದು, 3 ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು. 50 ಸಾವಿರ ರೂಪಾಯಿಯವರೆಗೆ ಸಾಲಸೌಲಭ್ಯವೂ ಇರತ್ತದೆ. 3 ಲಕ್ಷ ರೂಪಾಯಿಯ ಸಹಾಯಧನದಲ್ಲಿ 50 ಸಾವಿರ ರೂಪಾಯಿ ವಿದ್ಯುದ್ದೀಕಾರಣ ಬಾಬ್ತು ಒಳಗೊಂಡಿರುತ್ತದೆ. ನಿಗಮವು ನೀಡುವ ಸಾಲಕ್ಕೆ ವಾರ್ಷಿಕ ಶೇ. 6 ರಷ್ಟು ಬಡ್ಡಿ ಇದೆ. ಇದನ್ನು 6 ವರ್ಷಗಳಲ್ಲಿ ಅರ್ಧ ವಾರ್ಷಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ.

ಅಂತರ್ಜಾಲಮಟ್ಟ ಕುಸಿದಿರುವ ಜಿಲ್ಲೆಗಳಾದ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಿಗೆ ಘಟಕ ವೆಚ್ಚವನ್ನು 4.5 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ. 50 ಸಾವಿರ ರೂಪಾಯಿ ಸಾಲ ಒಳಗೊಂಡಿರುತ್ತದೆ. ಮೇಲೆ ತಿಳಿಸಿದ ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳಿಗೆ 3.5 ಲಕ್ಷ ರೂಪಾಯಿ ಘಟಕದ ವೆಚ್ಚ ನಿಗದಿಪಡಿಸಲಾಗಿದೆ.

ರೈತರು ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಲು ಕೋರಲಾಗಿದೆ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಯಸುವ ಆಸಕ್ತ ರೈತರು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ https://kbdc.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು   ಎಲ್ಲಾ ಮಾಹಿತಿಗಳನ್ನು ಓದಿಕೊಳ್ಳಬೇಕು.  ಹೆಸರು, ತಂದೆಯ ಹೆಸರು, ಮೊಬೈಲ್ ನಂಬರ್, ವಿದ್ಯಾರ್ಹತೆ, ಪೂರ್ಣ ವಿಳಾಸ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ,  ಸೇರಿದಂತೆ ಇನ್ನಿತರ ಮಾಹಿತಿಯನ್ನು ಭರ್ತಿ ಮಾಡಬೇಕು. ಈಗಾಗಲೇ ಗಂಗಾ ಕಲ್ಯಾಣ ಯೋಜನೆಡಯಲ್ಲಿ ಸೌಲಭ್ಯ ಪಡೆದವರು ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಹೆಚ್ಚಿನ  ಮಾಹಿತಿಗಾಗಿ ನಿಮ್ಮ ಜಿಲ್ಲೆಯ ವ್ಯವಸ್ಥಾಪಕರು, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮರವರನ್ನು ಸಂಪರ್ಕಿಸಬಹುದು.

ಅರ್ಹತೆ: ಅರ್ಜಿದಾರರು ಪರಿಶಿಷ್ಟ ಜಾತಿಯಲ್ಲಿ ಬರುವ ಭೋವಿ ಅಭಿವೃದ್ಧಿ ನಿಗಮಕ್ಕೆ ಸೇರಿದವರಾಗಿರಬೇಕು.ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.ಅರ್ಜಿದಾರರು 21 ವರ್ಷ ಮೇಲ್ಪಟ್ಟ ವಯೋಮಾನದವರಾಗಿರಬೇಕು. ಅರ್ಜಿದಾರರು/ ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಈ ಹಿಂದೆ ನಿಗಮದಿಂದ ಸೌಲಭ್ಯ ಪಡೆದಿದ್ದಲ್ಲಿ, ಅಂತಹ ಫಲಾನುಭವಿಗಳು ಅರ್ಹರಿರುವುದಿಲ್ಲ.

ನಿಯಮಗಳು: ಅರ್ಜಿದಾರರು ಆಯ್ಕೆ ಸಮಿತಿಯಿಂದ ಆಯ್ಕೆಯಾಗಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದಲ್ಲಿ ರೂ. 1,50,000/- ಹಾಗೂ ನಗರ ಪ್ರದೇಶದಲ್ಲಿ ರೂ.2,00,000/- ಮಿತಿಯೊಳಗಿರಬೇಕು.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:  ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಇತ್ತೀಚಿನ ಭಾವಚಿತ್ರ ಹೊಂದಿರಬೇಕು. ಜಾತಿ ಪ್ರಮಾಣ ಪತ್ರ (ಆರ್.ಡಿ. ಸಂಖ್ಯೆ ಹೊಂದಿರಬೇಕು). ಆದಾಯ ಪ್ರಮಾಣ ಪತ್ರ (ಆರ್.ಡಿ. ಸಂಖ್ಯೆ ಹೊಂದಿರಬೇಕು). ಹೊಂದಿರಬೇಕು. ಪಹಣಿ (ಆರ್.ಟಿ.ಸಿ), ಆಧಾರ್ ಕಾರ್ಡ್ ಹೊಂದಿರಬೇಕು. ರೇಷನ್ ಕಾರ್ಡ್ ಇರಬೇಕು.ಒಂದು ಬಿಳಿ ಪೇಜ್ ಮೇಲೆ ಸಹಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.