Animal Husbandry

ಸೆಪ್ಟೆಂಬರ್ 6 ರಿಂದ 15ರವರೆಗೆ ರಾಷ್ಟ್ರೀಯ ಕಂದುರೋಗ ನಿಯತ್ರಣ ಕಾರ್ಯಕ್ರಮ

07 September, 2021 12:15 PM IST By:

ಪಶುಗಳಿಗೆ ತಗಲುವ ಕಂದುರೋಗ ತಡೆಯಲು ಸರ್ಕಾರವು ಇದೇ ತಿಂಗಳ ಸೆಪ್ಟೆಂಬರ್ 6 ರಿಂದ ಸೆಪ್ಟೆಂಬರ್ 15ರವರೆಗೆ ರಾಷ್ಟ್ರೀಯ ಕಂದುರೋಗ ನಿಯಂತ್ರಣ ಕಾರ್ಯಕ್ರಮ ಆಯೋಜಿಸಿದೆ. ಹೌದು, ಪಶು ಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ರಾಜ್ಯಾದ್ಯಂತ 4 ರಿಂದ 8 ತಿಂಗಳ ಆಕಳು ಮತ್ತು ಎಮ್ಮೆಗಳ ಹೆಣ್ಣುಕರುಗಳಿಗೆ ಉಚಿತವಾಗಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಲಸಿಕಾ ಕಾರ್ಯಕ್ರಮದ ಅವಧಿಯಲ್ಲಿ ಇಲಾಖಖೆಯ ಅಧಿಕಾರಿ/ಸಿಬ್ಬಂದಿಗಳು ಪ್ರತಿ ಗ್ರಾಮದಲ್ಲಿ ಲಸಿಕಾ ಕಾರ್ಯಕ್ರಮ ನೆರವೇರಸುವರು. ಕಂದುರೋಗದ ಪ್ರತಿಬಂಧಕೋಪಾಯವಾಗಿ 4-8 ತಿಂಗಳ ಪ್ರಾಯದ ಆಕಳು ಮತ್ತು ಎಮ್ಮೆ ಹೆಣ್ಣು ಕರುಗಳಿಗೆ ತಪ್ಪದೇ ಜೀವಿತಾವಧಿಲ್ಲಿ ಒಮ್ಮೆ ಮಾತ್ರ ಲಸಿಕೆ ಹಾಕಿಸಬೇಕು. ಲಸಿಕೆ ಹಾಕುವುದರಿಂದ ಮಾತ್ರ ಜಾನುವಾರುಗಳ ಹಿಂಡಿನಲ್ಲಿ ರೋಗ ಪ್ರತಿಬಂಧಕ ಶಕ್ತಿ ಹೆಚ್ಚಿಸಲು ಸಾಧ್ಯವಾಗುತ್ತದೆ. ಜಾನುವಾರುಗಳಲ್ಲಿ ಗರ್ಭಪಾತವಾದ ಭ್ರೂಣ/ಗರ್ಭಸ್ರಾವಗಳ ನೇರ ಸಂಪರ್ಕದಿಂದ, ಜಾನುವಾರುಗಳ ಹಸಿ ಹಾಲು ಸೇವನೆಯಿಂದ ಮಾನವರಿಗೂ ಈ ರೋಗ ಹರಡುವ ಸಾಧ್ಯತೆ ಇರುತ್ತದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕರುಗಳ ಕಂದು ರೋಗ ಲಸಿಕಾ ಕಾರ್ಯಕ್ರಮದಡಿ ಜಾನುವಾರುಗಳಿಗೆ ಮೊದಲನೆ ಸುತ್ತಿನ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಕಂದುರೋಗ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಲು ಲಸಿಕೆದಾರರನ್ನು ನೇಮಿಸಲಾಗಿದ್ದು, ಆಯಾ ತಾಲೂಕಿನ ಸಹಾಯಕ ನಿರ್ದೇಶಕರುಗಳ ನೇತೃತ್ವದಲ್ಲಿ ಲಸಿಕೆದಾರರ ತಂಡಗಳನ್ನು ರಚಿಸಿಕೊಳ್ಳಲಾಗಿದೆ. ಇಲಾಖೆ ಸಿಬ್ಬಂದಿಗಳು ಪ್ರತಿ ಗ್ರಾಮಗಳಿಗೆ ತೆರಳಿ ಕಂದು ರೋಗದ ವಿರುದ್ಧ ಲಸಿಕೆ ಹಾಕಲಿದ್ದಾರೆ. ರೈತಬಾಂಧವರು ಹಾಗೂ ಹೈನುಗಾರರು ಈ ಸದಾವಕಾಶವನ್ನು ಉಪಯೋಗಿಸಿಕೊಳ್ಳಲು ವಿನಂತಿಸಿಕೊಳ್ಳಲಾಗಿದೆ.

ಕಂದುರೋಗ, ಬ್ರುಸೆಲ್ಲೋಸಿಸ್ ರೋಗವು ರಾಸುಗಳಲ್ಲಿ ಗರ್ಭಪಾತ, ಅನಾರೋಗ್ಯ, ಉತ್ಪಾದನೆಯಲ್ಲಿ ಕುಸಿತ ಹಾಗೂ ಬಂಜೆತನ ಉಂಟು ಮಾಡುತ್ತದೆ. ಅಲ್ಲದೇ ಇದು ಪ್ರಾಣಿಜನ್ಯ ರೋಗವಾಗಿದ್ದು, ಬ್ರುಸೆಲ್ಲೋಸಿಸ್ ಅಬಾರ್ಟಸ್ ಎಂಬ ಬ್ಯಾಕ್ಟೀರಿಯಾ ಹಸು, ಎಮ್ಮೆ, ಆಡು, ಕುರಿ, ಹಂದಿ ಸೇರಿದಂತೆ ಇತರೆ ಹೆಣ್ಣು ಪ್ರಾಣಿಗಳ ಮೂಲಕ ಹಾಗೂ ಅವುಗಳ ಉತ್ಪನ್ನಗಳ ಮೂಲಕವೂ ಮನುಷ್ಯರಿಗೂ ಹರಡಬಹುದಾದ ಸಾಧ್ಯತೆ ಇದೆ ಎಂದು ಪಶುತಜ್ಞರು ತಿಳಿಸಿದ್ದಾರೆ.

ರೈತಬಾಂಧವರು ತಮ್ಮಲ್ಲಿರುವ ಹೆಣ್ಣು ಕರುಗಳಿಗೆ ಲಸಿಕೆ ಹಾಕಿಸುವ ಮೂಲಕ ನಷ್ಟವನ್ನು ತಡೆಯುವ ಜತೆಗೆ ಸಾರ್ವಜನಿಕರ ಆರೋಗ್ಯವನ್ನೂ ಕಾಪಾಡಲು ಮುಂದಾಗಬೇಕು, ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆ ಅಥವಾ ಪ್ರಾಣಿ ಕಲ್ಯಾಣ ಸಹಾಯವಾಣಿ ಸಂಖ್ಯೆ 8277100200 ಗೆ ಸಂಪರ್ಕಿಸಲು ಕೋರಲಾಗಿದೆ.

ಕಂದುರೋಗ ಒಂದು ಪ್ರಾಣಿಜನ್ಯ ರೋಗವಾಗಿದ್ದು, ಇದು ಹಸು, ಎಮ್ಮೆ ಮತ್ತು ಆಡುಗಳಿಂದ ಮನುಷ್ಯರಿಗೆ ಹರಡುತ್ತದೆ. ಈ ರೋಗವು ಮಾರಣಾಂತಿಕವಾಗಿದ್ದು, ಗರ್ಭಪಾತ ಗರ್ಭಕೋಶ ಸಂಬಂಧಿತ ಕಾಯಿಲೆಗಳು ಸಂತಾನಹೀನತೆ ಮತ್ತು ಪುರುಷರಲ್ಲಿ ಜನನೇಂದ್ರಿಯಕ್ಕೆ ಸಂಬಂಧಿಸಿದ ರೋಗಗಳನ್ನು ಉಂಟುಮಾಡುತ್ತದೆ. ಜಾನುವಾರುಗಳಲ್ಲಿ ಈ ರೋಗ ಗರ್ಭಪಾತ, ಕಸ ಬೀಳದಿರುವುದು, ಸಂತಾನಹೀನತೆ, ಮತ್ತು ಚಿಕಿತ್ಸೆಗೆ ಫಲಕಾರಿಯಾಗದ ಜ್ವರ ಮುಂತಾದ ಲಕ್ಷಣಗಳನ್ನು ಉಂಟುಮಾಡುತ್ತದೆ. ಇದರಿಂದಾಗಿ ಹೈನುಗಾರರ ಆದಾಯವು ದಿನದಿಂದ ದಿನಕ್ಕೆ ಕುಸಿಯುತ್ತ ಹೋಗಿ ನಷ್ಚವನ್ನು ಅನುಭವಿಸಬೇಕಾಗುತ್ತದೆ.