Agripedia

ರಾಗಿ ಬೆಳೆಯ ವೈಜ್ಞಾನಿಕ ಉತ್ಪಾದನಾ ತಾಂತ್ರಿಕತೆಗಳು

24 September, 2022 5:13 PM IST By: Kalmesh T
Scientific production techniques of millet crop

ರಾಗಿ ಬೆಳೆಯ ವೈಜ್ಞಾನಿಕ ಉತ್ಪಾದನಾ ತಾಂತ್ರಿಕತೆಗಳು ವಿಷಯದ ಕುರಿತು ನಾಗೇಶ್, ಸಿ. ಆರ್., ಮತ್ತು ಡಾ. ರೂಪಶ್ರೀ, ಡಿ. ಎಚ್.  (ಸಹಾಯಕ ಪ್ರಾಧ್ಯಾಪಕರು, ಬೇಸಾಯ ಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ, ವಿ. ಸಿ. ಫಾರಂ., ಮಂಡ್ಯ)  ಬರೆದ ಲೇಖನ ಇಲ್ಲಿದೆ…

ಇದನ್ನೂ ಓದಿರಿ: ಜಾನುವಾರುಗಳಲ್ಲಿ ಲಂಪಿ ಚರ್ಮ ರೋಗ; ಹತೋಟಿ ಕ್ರಮಗಳು

ರಾಗಿಯು ಕರ್ನಾಟಕ ರಾಜ್ಯದ ಪ್ರಮುಖವಾದ ಆಹಾರ ಬೆಳೆಯಾಗಿದೆ. ಈ ಬೆಳೆಯನ್ನು ಹೆಚ್ಚಾಗಿ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಕಡಿಮೆ ತೇವಾಂಶ ಹಾಗೂ ಅನಾವೃಷ್ಟಿಯ ಬಳಿಕ ಬೇಗನೆ ಹುಲುಸಾಗಿ ಬೆಳೆಯಬಲ್ಲ ಶಕ್ತಿ ಇದೆ.

ಕಡಿಮೆ ರೋಗರುಜಿನಗಳ ಬಾಧೆ ಮತ್ತು ಕಡಿಮೆ ಖರ್ಚಿನ ಬೇಸಾಯ, ರಾಗಿ ಬೆಳೆಯ ಪ್ರಮುಖವಾದ ಗುಣಲಕ್ಷಣಗಳು, ರಾಗಿ ಎಂತಹದೇ ಬರಕ್ಕೆ ತುತ್ತಾದರೂ ಕೊನೆಗೆ ಹುಲ್ಲನ್ನಾದರೂ ಕೊಡುವ ಬೆಳೆಯಾಗಿದ್ದು, ಇದನ್ನು ಸಾಮಾನ್ಯವಾಗಿ ಧಾನ್ಯ ಹಾಗೂ ಮೇವಿಗಾಗಿ ಬೆಳೆಯುತ್ತಾರೆ.

ಹಸಿರು ಮೇವನ್ನು ರಸಮೇವು ತಯಾರಿಕೆಯಲ್ಲಿ ಬಳಸುತ್ತಾರೆ. ಹಾಗೂ ಇದು ಮೃದುವಾಗಿರುವುದರಿಂದ ಇದನ್ನು ರಾಸುಗಳು ಬಹಳ ಇಷ್ಟಪಟ್ಟು ತಿನ್ನುತ್ತವೆ. ಈ ಬೆಳೆಯನ್ನು ಹೆಚ್ಚಾಗಿ ಕೋಲಾರ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬೆಳೆಯುತ್ತಿದ್ದಾರೆ.

ರಾಗಿಯ ಸುಧಾರಿತ ತಳಿಗಳು

  • ದೀರ್ಘಾವಧಿ ತಳಿಗಳು (120-120 ದಿನಗಳು)
  • ಮಧ್ಯಮಾವಧಿ ತಳಿಗಳು
  • (106-120 ದಿನಗಳು) ಅಲ್ಫಾವಧಿ ತಳಿಗಳು
  • (95-105 ದಿನಗಳು) ಚಳಿಗಾಲಕ್ಕೆ ಸೂಕ್ತವಾದ ತಳಿಗಳು

ಕೃಷಿಯೊಂದಿಗೆ ಮಾಡಿ ಲಾಭದಾಯಕ ಹಂದಿ ಸಾಕಾಣಿಕೆ, ಇಲ್ಲಿದೆ ಸಂಪೂರ್ಣ ಮಾಹಿತಿ

ವಲಯ – 5 & 6 ಕ್ಕೆ ಸೂಕ್ತವಾದ ತಳಿಗಳು

  • ಇಂಡಾಫ್8
  • ಎಂ.ಆರ್. 1, ಎಂ.ಆರ್. 6
  • ಎಲ್. 5 ಕೆ.ಎಂ.ಆರ್. 301,
  • ಜಿ.ಪಿ.ಯು. 28,
  • ಎಚ್.ಆರ್. 911,
  • ಜಿ.ಪಿ.ಯು. 66
  • ಎಂ.ಎಲ್. 365 ಮತ್ತು
  • ಇಂಡಾಫ್ 5
  • ಜಿ.ಪಿ.ಯು. 45,
  • ಜಿ.ಪಿ.ಯು. 48,
  • ಜಿ.ಪಿ.ಯು. 26,
  • ಇಂಡಾಫ್ 9,
  • ಕೆ.ಎಂ.ಆರ್. 204,
  • ಕೆ.ಎಂ.ಆರ್. 340,
  • ಕೆ.ಎಂ.ಆರ್. 630
  • ಇಂಡಾಫ್ 7,
  • ಇಂಡಾಫ್ 9,
  • ಕೆ.ಎಂ.ಆರ್. 301
  • ವಲಯ -8 ಕ್ಕೆ ಸೂಕ್ತವಾದ ತಳಿ
  • ಜಿ.ಪಿ.ಯು. 28, 115-120
  • ವಲಯ – 3 & 8 ಕ್ಕೆ ಸೂಕ್ತವಾದ ತಳಿಗಳು
  • ಡಿಎಚ್‍ಆರ್‍ಎಸ್ -1
  • ಡಿಎಚ್‍ಎಫ್‍ಎಂ 78-3 110-112
  • 115 -              -

ಭತ್ತದ ಕೃಷಿಯಲ್ಲಿ ಮೀನುಗಾರಿಕೆ: ಈಗ ರೈತರು ಎರಡೆರಡು ಲಾಭ ಪಡೆಯಬಹುದು!

ಮಣ್ಣು ಮತ್ತು ಹವಾಗುಣ:

ಈ ಬೆಳೆಯನ್ನು ಹಲವು ಬಗೆಯ ಮಣ್ಣುಗಳಲ್ಲಿ ಬೆಳೆಯಬಹುದಾಗಿದ್ದು, ಉತ್ತಮ ಬೆಳೆಗೆ ಕೆಂಪು ಮರಳು ಮಿಶ್ರಿತ ಗೋಡು ಮಣ್ಣು ಮತ್ತು ಜೇಡಿ ಮಣ್ಣು ಸೂಕ್ತ. ಇದು ಉಷ್ಣ ಮತ್ತು ಅರೆ ಉಷ್ಣವಲಯದ ಬೆಳೆಯಾಗಿದ್ದು, ಉತ್ತಮವಾದ ಬೆಳವಣಿಗೆ ಹೊಂದಲು 260 ರಿಂದ 320 ಸೆಲ್ಸಿಯಸ್ ಉಷ್ಣತೆ, ವಾರ್ಷಿಕ ಸರಾಸರಿ ಮಳೆಯ ಪ್ರಮಾಣವು 50 ರಿಂದ 100 ಸೆಂ. ಮೀ. ನಷ್ಟು ಇರುವಂತಹ ಪ್ರದೇಶಗಳಲ್ಲಿಯೂ ಈ ಬೆಳೆಯನ್ನು ಬೆಳೆಯಬಹುದು.

ಬೇಸಾಯ ಕ್ರಮಗಳು

ಭೂಮಿ ಸಿದ್ಧತೆ: ಮುಖ್ಯ ಭೂಮಿಯನ್ನು ಎರಡರಿಂದ ಮೂರು ಬಾರಿ ಉಳುಮೆ ಮಾಡಿ ಒಂದು ಬಾರಿ ಹಲುಬೆ ಹಾಯಿಸಿ ಸಮತಟ್ಟು ಮಾಡಿ, ಕಳೆ ಮತ್ತು ಕಸಕಡ್ಡಿಗಳನ್ನು ತೆಗೆದು ಎಂಟೆಗಳನ್ನು ಹೊಡೆದು ತಯಾರಿ ಮಾಡಿಕೊಳ್ಳಬೇಕು.

ಬೀಜ ಮತ್ತು ಬಿತ್ತನೆ

ಮಳೆಯಾಶ್ರಿತ ಪ್ರದೇಶದಲ್ಲಿ ನೇರ ಬಿತ್ತನೆ ಮಾಡುವುದಾದರೆ 13 ಗ್ರಾಂ/ಎ ಸತುವಿನ ಸಲ್ಫೇಟ್‍ನೊಂದಿಗೆ ಉಪಚಾರ ಮಾಡಿ ಸಾಲಿನಿಂದ ಸಾಲಿಗೆ 30 ಸೆಂ. ಮೀ.  ಅಂತರ ಕೊಟ್ಟು 4 ಸೆಂ. ಮೀ. ಗಿಂತ ಆಳವಿಲ್ಲದಂತೆ ಸಂಯುಕ್ತ ಕೂರಿಗೆಯಿಂದ ಬಿತ್ತನೆ ಮಾಡುವುದು   ನೀರಾವರಿಯಲ್ಲಿ ಸಸಿಮಡಿಯನ್ನು ತಯಾರಿಸಿ ಪೈರುಗಳನ್ನು ನಾಟಿ ಮಾಡಲು ಪ್ರತಿ ಎಕರೆಗೆ 2 ಕಿ. ಗ್ರಾಂ. ಬಿತ್ತನೆ ಬೀಜ ಬೇಕಾಗುತ್ತದೆ. ಮಳೆಗಾಲದಲ್ಲಿ ಜುಲೈನಿಂದ ಆಗಸ್ಟ್‍ವರೆಗೂ, ಚಳಿಗಾಲದಲ್ಲಿ ಸೆಪ್ಟೆಂಬರ್‍ನಿಂದ ಅಕ್ಟೋಬರ್‍ವರೆಗೆ, ಬೇಸಿಗೆಯಲ್ಲಿ ಜನವರಿಯಿಂದ ಫೆಬ್ರವರಿವರೆಗೂ ಬಿತ್ತನೆ ಮಾಡಬಹುದು. ನೀರಾವರಿಯಲ್ಲಿ ನಾಟಿ ಮಾಡಿ ಬೆಳೆಯುವ ರಾಗಿಯಲ್ಲಿ ಸಾಲಿನಿಂದ ಸಾಲಿಗೆ 22.5 ಸೆಂ. ಮೀ. ಹಾಗೂ ಗಿಡದಿಂದ ಗಿಡಕ್ಕೆ 10 ಸೆಂ. ಮೀ. ಅಂತರ ಕೊಟ್ಟು ನಾಟಿ ಮಾಡಬೇಕು.

ಅಬ್ಬಬ್ಬಾ! ಬರೋಬ್ಬರಿ 15 ಲಕ್ಷಕ್ಕೆ ಮಾರಾಟವಾಯ್ತು ಈ ಮೇಕೆ..ಏನಿದರ ವಿಶೇಷತೆ.?

ಬೀಜ ಹದ ಮಾಡುವುದು (ಮಳೆಯಾಶ್ರಿತ ಬೇಸಾಯದಲ್ಲಿ ಮಾತ್ರ)

ರಾಗಿಯನ್ನು ಬಿತ್ತನೆ ಮಾಡುವ ಎರಡು ದಿನಗಳ ಮುಂಚೆ 1 ಕೆ.ಜಿ. ಬಿತ್ತನೆ ಬೀಜವನ್ನು 600 ಮಿ.ಲೀ. ನೀರಿನಲ್ಲಿ 18-20 ಘಂಟೆಗಳ ಕಾಲ ನೆನೆಸಿ ನಂತರ ನೀರನ್ನು ಬಸಿದು 24 ಘಂಟೆಗಳ ಕಾಲ ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡಬೇಕು. ಹೀಗೆ ಮಾಡುವುದರಿಂದ ಮೊಳಕೆ ಪ್ರಮಾಣ ಹೆಚ್ಚುತ್ತದೆ ಹಾಗೂ ಬಿತ್ತಿದ ನಂತರ ಕೆಲ ದಿನಗಳವರೆಗೂ ಮಳೆ ಬಾರದೆ ಹೋದರೂ ಶುಷ್ಕ ವಾತಾವರಣವನ್ನು ತಡೆಯುವ ಶಕ್ತಿಯನ್ನು ಪಡೆದುಕೊಳ್ಳುತ್ತದೆ.

ನೀರಾವರಿ ರಾಗಿ ಸಸಿಮಡಿ ತಯಾರಿಕೆ ಮತ್ತು ನಾಟಿ

ನಾಟಿ ಮಾಡುವುದಾದರೆ ಒಂದು ಎಕರೆಗೆ 2 ಕೆ.ಜಿ. ಬಿತ್ತನೆ ಬೀಜವನ್ನು ಉಪಯೋಗಿಸಿ, 7.5 ಮೀ. ಉದ್ದ, 1.2 ಮೀ. ಅಗಲ ಮತ್ತು 10 ಸೆ.ಮೀ. ಎತ್ತರದ 15-16 ಸಸಿಮಡಿಗಳನ್ನು ಸಿದ್ಧಪಡಿಸಿ ಪ್ರತಿ ಮಡಿಗೆ 10 ಕೆ.ಜಿ. ಕೊಟ್ಟಿಗೆಗೊಬ್ಬರವನ್ನು ಬೆರಸಬೇಕು. ನಂತರ ಪ್ರತಿ ಮಡಿಗೆ 0.5 ಕೆ.ಜಿ. ಯಷ್ಟು ಅಮೋನಿಯಂ ಸಲ್ಫೇಟ್, 1 ಕೆ.ಜಿ. ಯಷ್ಟು ಸೂಪರ್ ಫಾಸ್ಫೇಟ್ ಮತ್ತು 0.5 ಕೆ.ಜಿ. ಯಷ್ಟು ಪೋಟ್ಯಾಷಿಯಂ ಹಾಗೂ 50 ಗ್ರಾಂ. ಸತುವಿನ ಸಲ್ಫೇಟ್ ಚೆಲ್ಲಿ ಬೀಜವನ್ನು ಬಿತ್ತುವುದಕ್ಕೆ ಮೊದಲು ಭೂಮಿಗೆ ಸೇರಿಸಬೇಕು.

ಸಸಿಮಡಿಯಲ್ಲಿ ಬೀಜವನ್ನು 7.5 ಸೆಂ.ಮೀ. ಅಂತರದ ಸಾಲುಗಳಲ್ಲಿ ಬಿತ್ತನೆ ಮಾಡಿ ತೆಳುವಾಗಿ ಮಣ್ಣು ಅಥವಾ ಕೊಟ್ಟಿಗೆ ಗೊಬ್ಬರದಿಂದ ಮುಚ್ಚಬೇಕು. ಬಿತ್ತನೆ ಮಾಡಿದ 12 ದಿನಗಳ ನಂತರ ಒಂದು ಮಡಿಗೆ 250 ಗ್ರಾಂ. ನಷ್ಟು ಯೂರಿಯಾವನ್ನು ಮೇಲುಗೊಬ್ಬರವಾಗಿ ನೀಡಬೇಕು.

ನಾಟಿ ಮಾಡುವಾಗ ದೀರ್ಘಾವದಿ ತಳಿಗಳಾದಲ್ಲಿ 20-25 ದಿವಸಗಳ ಪೈರನ್ನು, ಹಾಗೂ ಮಧ್ಯಮಾವದಿ ತಳಿಗಳಾದಲ್ಲಿ 20-22 ದಿವಸಗಳ ಪೈರನ್ನು ಹಾಗೂ ಅಲ್ಫಾವಧಿ ತಳಿಗಳಾದಲ್ಲಿ 18-20 ದಿವಸಗಳ ಪೈರನ್ನು ನಾಟಿ ಮಾಡಬೇಕು.

ಕಳೆ ನಿಯಂತ್ರಣ (ಉದಯ ಪೂರ್ವ ಕಳೆನಾಶಕ )

ಕಳೆನಾಶಕ

ಎಕರೆಗೆ ಬೇಕಾದ ಕಳೆನಾಶಕ

ಎಕರೆಗೆ ಬೇಕಾದ ಮಿಶ್ರಣ

ಸಿಂಪರಣಾ ಸಮಯ

 

ಆಕ್ಸಿಫ್ಲೋರೊಫನ್ 23.5 ಇ.ಸಿ.     

400 ಮಿ.ಲೀ.         

300 ಲೀ.   

 

ನಾಟಿ ಮಾಡಿದ 3 ದಿನಗಳೊಳಗೆ

ಬ್ಯುಟಾಕ್ಲೋರ್ (ಶೇ. 50 ಇ.ಸಿ.)    

 

600 ಮಿ.ಲೀ.

300 ಲೀ.

ನಾಟಿ ಮಾಡಿದ 3 ದಿನಗಳೊಳಗೆ

ಉದಯೋತ್ತರ ಕಳೆನಾಶಕ

2,4-ಡಿ ಸೋಡಿಯಂ ಲವಣ

600 ಮಿ.ಲೀ.         

200 ಲೀ.

ನಾಟಿ ಮಾಡಿದ 15-30 ದಿನಗಳೊಳಗೆ

ಲಘು ಪೋಷಕಾಂಶಗಳ ಬಳಕೆ:- ಪ್ರತಿ ಮೂರು ಬೆಳೆ ತೆಗೆದ ನಂತರ ಎಕರೆಗೆ 5 ಕೆ.ಜಿ ಸತು ಮತ್ತು 4 ಕೆ.ಜಿ. ಬೋರಾಕ್ಸ್‍ನ್ನು  ಮಣ್ಣಿಗೆ ಸೇರಿಸುವುದು.

ನೀರು ನಿರ್ವಹಣೆ: ಸಾಮಾನ್ಯವಾಗಿ ನಮ್ಮ ರಾಜ್ಯದಲ್ಲಿ ರಾಗಿಯನ್ನು ಮಳೆಯಾಶ್ರಯದಲ್ಲಿ ಬೆಳೆಯಲಾಗುತ್ತಿದ್ದು, ನೀರಾವರಿ ಸೌಕರ್ಯವಿದ್ದರೆ ಬೆಳೆಯ ಸಂದಿಗ್ಧ ಹಂತದಲ್ಲಿ (ತೆಂಡೆ ಹೊಡೆಯುವ ಮತ್ತು ಹೂವಾಡುವ) ನೀರನ್ನು ಕೊಟ್ಟಿದ್ದೇ ಆದರೇ ಉತ್ತಮ ಇಳುವರಿಯನ್ನು ಪಡೆಯಬಹುದು. ಈ ಬೆಳೆಗೆ 300 ರಿಂದ 350 ಮಿ.ಮೀ. ನೀರಿನ ಅವಶ್ಯಕತೆ ಇರುತ್ತದೆ.

ರಾಗಿಯಲ್ಲಿ ಬೆಳೆ ಪದ್ಧತಿಗಳು

ಮಿಶ್ರ ಬೆಳೆ ಪದ್ಧತಿಗಳು

ಕ್ರ. ಸಂ.   ಮಿಶ್ರ ಬೆಳೆ ಪದ್ಧತಿಗಳು           ಅನುಪಾತ

  1. ರಾಗಿ + ತೊಗರಿ                8+2
  2. ರಾಗಿ + ಸೋಯಾ ಅವರೆ 4+2
  3. ರಾಗಿ + ಅವರೆ                8+1

ಮಳೆಯಾಶ್ರಯದಲ್ಲಿ ವರ್ಷಕ್ಕೆ ಒಂದೇ ರಾಗಿ ಬೆಳೆ ಬೆಳೆಯುವ ಬದಲು ಅಲಸಂದೆ ನಂತರ ರಾಗಿಯನ್ನು ಬೆಳೆಯಬಹುದು. ಬೆಳೆ ಪದ್ಧತಿಯಲ್ಲಿ ದ್ವಿದಳ ಧಾನ್ಯ ಬೆಳೆಗಳನ್ನು ಅನುಸರಿಸಿಕೊಳ್ಳುವುದರಿಂದ ಮಣ್ಣಿನ ಫಲವತ್ತತೆ ಉತ್ತಮಗೊಳ್ಳುತ್ತದೆ ಹಾಗೂ ಅಧಿಕ ಆದಾಯವನ್ನು ಗಳಿಸಬಹುದು.

ಸಸ್ಯ ಸಂರಕ್ಷಣೆ

ಪ್ರಮುಖ ರೋಗಗಳು ಹಾಗೂ ನಿರ್ವಹಣೆ

ಬೆಂಕಿ ರೋಗ / ಇಲುಕು ರೋಗ

ಹಾನಿಯ ಲಕ್ಷಣಗಳು: ಈ ರೋಗವು ಬೆಳೆಯ ಎಲ್ಲಾ ಹಂತಗಳಲ್ಲಿ ಕಂಡು ಬರುವುದಾಗಿದ್ದು, ಎಲೆಗಳ ಮೇಲೆ ಕಂದು ಬಣ್ಣದ ವಜ್ರಾಕಾರದ ಚುಕ್ಕೆಗಳು ಕಾಣಿಸಿಕೊಂಡು ಅವುಗಳು ಒಂದಕೊಂದು ಸೇರಿ ಎಲೆಗಳು ಒಣಗುತ್ತವೆ. ಇಲುಕಿನ ಮೇಲೆ ಕಂದು ಚುಕ್ಕೆ ಕಾಣಿಸಿಕೊಂಡು ತೆನೆ ಇಲುಕು ಒಣಗುತ್ತದೆ.

ನಿರ್ವಹಣಾ ಕ್ರಮಗಳು:

  • ಪ್ರತಿ 1 ಕಿ. ಗ್ರಾಂ ಬಿತ್ತನೆ ಬಿಜಕ್ಕೆ 2 ಗ್ರಾಂ. ಶಿಲೀಂಧ್ರನಾಶಕದಿಂದ ಬೀಜೋಪಚಾರ ಮಾಡುವುದು.
  • 2 ಗ್ರಾಂ. ಮ್ಯಾಂಕೊಜೆಬ್ 75 ಡಬ್ಲ್ಯೂ. ಪಿ. ಅನ್ನು ಪ್ರತಿ ಲೀಟರ್ ನೀರಿನೊಂದಿಗೆ ಬೆರೆಸಿ ಸಿಂಪರಣೆ ಮಾಡುವುದು.

ಕಂದು ಚುಕ್ಕೆ ರೋಗ / ಅಂಗಮಾರಿ ರೋಗ

ಹಾನಿಯ ಲಕ್ಷಣಗಳು: ರೋಗಕ್ಕೆ ತುತ್ತಾದ ಗರಿಗಳ ಮೇಲೆ ಕಂದು ಬಣ್ಣದ ಮೊಟ್ಟೆಯಾಕಾರದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.

ನಿರ್ವಹಣಾ ಕ್ರಮಗಳು:

  • ಪ್ರತಿ 1 ಕಿ. ಗ್ರಾಂ ಬಿತ್ತನೆ ಬೀಜಕ್ಕೆ 2 ಗ್ರಾಂ. ಶಿಲೀಂಧ್ರನಾಶಕದಿಂದ ಬೀಜೋಪಚಾರ ಮಾಡುವುದು.
  • 2 ಗ್ರಾಂ. ಕಾರ್ಬೆಂಡಜಿಂ 50 ಡಬ್ಲ್ಯೂ. ಪಿ. ಮತ್ತು ಮ್ಯಾಂಕೋಜೆಬ್ 63 ಡಬ್ಲೂಪಿ ಅನ್ನು ಪ್ರತಿ ಲೀಟರ್ ನೀರಿನೊಂದಿಗೆ ಬೆರೆಸಿ ಸಿಂಪರಣೆ ಮಾಡುವುದು.

ನಂಜು ರೋಗ

ಹಾನಿಯ ಲಕ್ಷಣಗಳು: ಎಲೆಗಳು ಹಸಿರು ಮತ್ತು ಹಳದಿ ಪಟ್ಟಿಗಳಿಂದ ಕೂಡಿರುತ್ತವೆ.

ನಿರ್ವಹಣಾ ಕ್ರಮಗಳು:

ರೋಗಕ್ಕೆ ತುತ್ತಾದ ಗಿಡಗಳನ್ನು ಕಿತ್ತು ನಾಶಪಡಿಸುವುದು. 1.7 ಮಿ.ಲೀ ಡೈಮಿಥೋಯೇಟ್ 30 ಇ.ಸಿ. ಕೀಟನಾಶಕವನ್ನು ಪ್ರತಿ ಲೀಟರ್ ನೀರಿನೊಂದಿಗೆ ಸೇರಿಸಿ ಸಿಂಪರಣೆ ಮಾಡುವುದು.

ಪ್ರಮುಖ ಕೀಟಗಳು ಹಾಗೂ ನಿರ್ವಹಣೆ

ಕಾಂಡ ಕೊರೆಯುವ ಹುಳು:

ಹಾನಿಯ ಲಕ್ಷಣಗಳು: ಹಾನಿಗೊಳಗಾದ ಗಿಡಗಳ ಸುಳಿಗಳು ಒಣಗಿ, ತೆನೆಗಳು ಬಾಗುತ್ತವೆ. ಬಾಗಿದ ಸುಳಿಗಳನ್ನು ಕೈಯಿಂದ ಸುಲಭವಾಗಿ ಎಳೆಯಬಹುದು.

ನಿರ್ವಹಣಾ ಕ್ರಮಗಳು: 2 ಮಿ. ಲೀ ಕ್ಲೋರೋಪೈರಿಫಾಸ್ 20 ಇ.ಸಿ ಅನ್ನು ಪ್ರತಿ ಲೀಟರ್ ನೀರಿನೊಂದಿಗೆ ಮಿಶ್ರಣ ಮಾಡಿ ಉಪಯೋಗಿಸುವುದು.

ಸಸ್ಯ ಹೇನು

ಹಾನಿಯ ಲಕ್ಷಣಗಳು: ಕೀಟವು ಗರಿಗಳಿಂದ ರಸ ಹೀರುವುದರಿಂದ ಹಳದಿ ಬಣ್ಣಕ್ಕೆ ತಿರುಗಿ ಗರಿಗಳ ಮೇಲೆ ಕಪ್ಪು ಬೂಷ್ಟು ಬೆಳೆದು ಗಿಡಗಳ ಬೆಳೆವಣಿಗೆ ಕುಗುತ್ತದೆ.

ನಿರ್ವಹಣಾ ಕ್ರಮಗಳು: ಕೀಟಗಳ ಭಾದೆ ಕಂಡು ಬಂದಾಗ 1.7 ಮಿ.ಲೀ ಡೈಮಿಥೋಯೇಟ್ 30 ಇ.ಸಿ ಅನ್ನು ಪ್ರತಿ ಲೀಟರ್ ನೀರಿನೊಂದಿಗೆ ಬೆರೆಸಿ ಸಿಂಪರಣೆ ಮಾಡುವುದು.

ಕೊಯ್ಲು ಮತ್ತು ಇಳುವರಿ

ಈ ಬೆಳೆಯು ಬಿತ್ತನೆಯಾದ 100 ರಿಂದ 125 ದಿನಗಳಲ್ಲಿ ಕಟಾವಿಗೆ ಸಿದ್ಧವಾಗುತ್ತದೆ. ತೆನೆಯನ್ನು ಕೊಯ್ಲು ಮಾಡಿ ಬಿಸಿಲಿನಲ್ಲಿ ಒಣಗಿಸಿ, ಒಕ್ಕಣೆ ಮಾಡಿ ಧಾನ್ಯವನ್ನು ಶೇಖರಣೆ ಮಾಡುವುದು. ಈ ಮೇಲ್ಕಂಡ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದೇ ಆದರೇ ಎಕರೆಗೆ 12-18 ಕ್ವಿಂಟಾಲ್ ಧಾನ್ಯ ಮತ್ತು 2-3 ಟನ್ ಮೇವಿನ ಇಳುವರಿಯನ್ನು ನಿರೀಕ್ಷಿಸಬಹುದು.

ನಾಗೇಶ್, ಸಿ. ಆರ್., ಮತ್ತು ಡಾ. ರೂಪಶ್ರೀ, ಡಿ. ಎಚ್.  (ಸಹಾಯಕ ಪ್ರಾಧ್ಯಾಪಕರು, ಬೇಸಾಯ ಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ, ವಿ. ಸಿ. ಫಾರಂ., ಮಂಡ್ಯ)