Success stories

150 ಅಪರೂಪದ ಸಿರಿಧಾನ್ಯಗಳ Seed Bank ನಿರ್ಮಿಸಿದ ಬುಡಕಟ್ಟು ಮಹಿಳೆ ಲಹರಿಬಾಯಿ

18 February, 2023 4:45 PM IST By: Kalmesh T

ಸಿರಿಧಾನ್ಯಗಳ ಕುರಿತು ಸದ್ಯ ದೇಶದೆಲ್ಲೆಡೆ ತುಂಬಾ ಸುದ್ದಿಯಾಗುತ್ತಿರುವ ಈ ಹೊತ್ತಿನಲ್ಲಿ ನಾವು ಕೃಷಿಯಲ್ಲಿ ಬೀಜ ಸಂರಕ್ಷಣೆ ಮಾಡುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ, ಗುರುತಿಸಿಕೊಂಡ ಬುಡಕಟ್ಟು ಕೃಷಿ ಮಹಿಳೆಯೊಬ್ಬರ ಕುರಿತು ಈ ಲೇಖನದಲ್ಲಿ ಪರಿಚಯ ಮಾಡಿಕೊಡಲಿದ್ದೇವೆ.

ಅದ್ಭುತ ಕಸೂತಿ ಕಲೆಯಿಂದ ಆಕರ್ಷಕ ಆಭರಣ ತಯಾರಿಸುವ ಸಮುದಾಯದ ತಲ್ಲಣ

ಹೌದು, ಬರೋಬ್ಬರಿ 150 ವಿಧದ ಅಪರೂಪದ ಸಿರಿಧಾನ್ಯಗಳ ಬೀಜ ಬ್ಯಾಂಕ್(Seeds Bank) ನಿರ್ಮಿಸಿದ ಬುಡಕಟ್ಟು ಮಹಿಳೆ ಲಹರಿಬಾಯಿ. ರಾಷ್ಟ್ರಮಟ್ಟದಲ್ಲಿ ಪ್ರಧಾನಿ ಮೋದಿಯವರಿಂದಲೂ ಮೆಚ್ಚುಗೆ ಪಡೆದುಕೊಂಡ ಮಹಿಳೆ. ಇವರು ಅಪರೂಪದ ಸಿರಿಧಾನ್ಯ ತಳಿಗಳನ್ನು ಸಂರಕ್ಷಿಸುವ ಕೆಲಸವನ್ನು ತುಂಬಾ ಅಚಚ್ಚುಕಟ್ಟಾಗಿ ಮಾಡುತ್ತಿದ್ದಾರೆ.

ಸಿರಿಧಾನ್ಯಗಳಿಂದಾಗುವ ಆರೋಗ್ಯ ಪ್ರಯೋಜನಗಳ  ಬಗ್ಗೆ ತಮ್ಮ ಅಜ್ಜಿಯಿಂದ ತಿಳಿದುಕೊಂಡಿದ್ದ ಇವರು ಕಣ್ಮರೆಯಾಗುತ್ತಿರುವ ಸಿರಿಧಾನ್ಯಗಳ ಅಪರೂಪದ ತಳಿಗಳ ಬೀಜಗಳನ್ನು ಸಂಗ್ರಹಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಈ ಮೂಲಕ ಅಪರೂಪದ 150ಕ್ಕೂ ಹೆಚ್ಚು ಸಿರಿಧಾನ್ಯ ಬೀಜಗಳನ್ನು ಸಂಗ್ರಹಿಸಿ “ಬೀಜ ಬ್ಯಾಂಕ್‌” ಆಗಿ ಪರಿವರ್ತನೆ ಮಾಡಿದ್ದಾರೆ.

ಸಾಫ್ಟವೇರ್ ಕೆಲಸ ಬಿಟ್ಟು ಕೃಷಿಗೆ ನಿಂತ ಯುವಕ.. ಬಂಜರು ಭೂಮಿಯಲ್ಲಿ ವ್ಯವಸಾಯ ಮಾಡಿ ಗೆದ್ದ!

ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಸಿಲ್ಪಾಡಿ ಎಂಬ ದೂರದ ಹಳ್ಳಿಯ ಬೈಗಾ ಬುಡಕಟ್ಟು ಸಮುದಾಯಕ್ಕೆ ಸೇರಿದ ಲಹರಿಬಾಯಿಯವರು ತಮ್ಮ ಪರಿಸರ ಮತ್ತು ಅದರ ಜೀವವೈವಿಧ್ಯತೆಯ ಬಗ್ಗೆ ಆಳವಾದ ಜ್ಞಾನವನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ತಾವು ತಿಳಿದುಕೊಂಡಿರುವುದನ್ನು ಮುಂದಿನ ಪೀಳಿಗೆಗೂ ರವಾನಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆ : ಸಿರಿಧಾನ್ಯ ಬೀಜಗಳ ಸಂಗ್ರಹಣೆ

ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಸಿಲ್ಪಾಡಿ ಎಂಬ ದೂರದ ಹಳ್ಳಿಯಲ್ಲಿರುವ ಲಹರಿ ಬಾಯಿ ತಮ್ಮ ಅಜ್ಜಿಯ ಮಾತುಗಳಿಂದ ಪ್ರೇರಿತರಾಗಿ ತಮ್ಮ 18 ನೇ ವಯಸ್ಸಿನಲ್ಲಿಯೇ ಸಿರಿಧಾನ್ಯ ಬೀಜಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು.

ಈಗಲೂ ಅವರು ತಮ್ಮ ಊರಿನ ಹತ್ತಿರದ ಹಳ್ಳಿಗಳನ್ನು ಅಲೆದಾಡಿ, ಕಾಡು ಮೇಡುಗಳನ್ನು ಸುತ್ತುತ್ತಾರೆ. ಅಷ್ಟೇ ಅಲ್ಲದೇ ಅಕ್ಕಪಕ್ಕದ ಜಮೀನುಗಳಿಂದಲೂ ಕೂಡ ಸಿರಿಧಾನ್ಯಗಳ ಬೀಜಗಳನ್ನು ಸಂಗ್ರಹಿಸುತ್ತಾರೆ.

Success Story : ಮನೆಯಲ್ಲಿ ಸಾವಯವ ಕೃಷಿ ಮಾಡಿ 7 ಲಕ್ಷ ಗಳಿಸುತ್ತಿದ್ದಾರೆ ಈ ವ್ಯಕ್ತಿ!

ಲಹರಿ ಬಾಯಿಯವರನ್ನು ಅಪಹಾಸ್ಯ ಮಾಡುತ್ತಿದ್ದ ಜನ

ಲಹರಿ ಬಾಯಿಯವರು ಹೀಗೆ ಕಾಡು ಮೇಡು ಸುತ್ತಿ ಬೀಜಗಳ ಸಂಗ್ರಹ ಮಾಡುವಾಗ ಆರಂಭದಲ್ಲಿ ಜನರು ಅಪಹಾಸ್ಯ ಮಾಡುತ್ತಿದ್ದರಂತೆ. ಹಾಗಾಗಿ, ಕೆಲವೊಮ್ಮೆ ಯಾರೂ ಇಲ್ಲದಿದ್ದಾಗ ಅವರು ಬೀಜಗಳನ್ನು ಹುಡುಕಲು ಹೋಗುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

ಅಲ್ಲದೇ ತಮ್ಮ ಸಮುದಾಯದ ಹಿರಿಯ ಜನರು ಸ್ಥಳೀಯ ಬೀಜಗಳನ್ನು ಗುರುತಿಸಲು ಅವರಿಗೆ ಸಹಾಯ ಮಾಡಿದ್ದನ್ನು ಅವರು ಸ್ಮರಿಸಿಕೊಳ್ಳುತ್ತಾರೆ.

27 ವರ್ಷ ವಯಸ್ಸಿನ ಲಹರಿಬಾಯಿಯವರು ಕಳೆದ ಒಂದು ದಶಕದಿಂದ ಸಿರಿಧಾನ್ಯ ಬೀಜಗಳ ಸಂರಕ್ಷಣೆ ಕೆಲಸವನ್ನು  ಮಾಡುತ್ತ, ಇದುವರೆಗೆ 150 ಕ್ಕೂ ಹೆಚ್ಚು ಅಪರೂಪದ ಸಿರಿಧಾನ್ಯ ಬೀಜಗಳನ್ನು ಸಂಗ್ರಹಿಸಿದ್ದಾರೆ.

ತಿಂಗಳಲ್ಲಿ 36 ಲಕ್ಷ ಆದಾಯ ಗಳಿಸಿದ ಎಂಬಿಎ ಪದವೀಧರ; ಈ ಯಶೋಗಾಥೆ ನಿಮಗೂ ಪ್ರೇರಣೆ!

ಅವರು ಸಂಗ್ರಹಿಸುವ ಈ ಸಿರಿಧಾನ್ಯ ಬೀಜಗಳನ್ನು ರೈತರಿಗೆ ವಿತರಿಸಲಾಗುತ್ತದೆ. ಪ್ರತಿಯಾಗಿ ರೈತರು ಬೆಳೆ ಕೊಯ್ಲು ಮಾಡಿದ ನಂತರ ಉತ್ಪನ್ನದ ಸ್ವಲ್ಪ ಭಾಗವನ್ನು ಲಹರಿಬಾಯಿವರಿಗೆ ಉಡುಗೊರೆಯಾಗಿ ನೀಡುತ್ತಾರೆ.

ಅಂದರೆ ಲಹರಿ ಬಾಯಿ ನೀಡುವ ಒಂದು ಕೆ.ಜಿ ಬೀಜಗಳಿಗೆ ಪ್ರತಿಯಾಗಿ ರೈತರು ಅದೇ ತಳಿಯ 1.5 ಕೆಜಿ ಬೀಜಗಳನ್ನು ಅವರಿಗೆ ಹಿಂದಿರುಗಿಸುತ್ತಾರೆ.

ಸಿರಿಧಾನ್ಯಗಳ ರಾಯಭಾರಿ ಈ ಬುಡಕಟ್ಟು ಮಹಿಳೆ

ಈ ವರ್ಷ ಭಾರತ ಸರ್ಕಾರವು ಭಾರತವನ್ನು ಸಿರಿಧಾನ್ಯಗಳ ಕೃಷಿ ಮತ್ತು ಸಂಶೋಧನೆಯ ಜಾಗತಿಕ ಕೇಂದ್ರವನ್ನಾಗಿ ಮಾಡಲು ಶ್ರಮಿಸುತ್ತಿದೆ. ಕೇಂದ್ರ ಸರ್ಕಾರದ ಬಜೆಟ್ ಭಾಷಣದ ಸಮಯದಲ್ಲಿ, ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಿರಿಧಾನ್ಯಗಳನ್ನು ಎಲ್ಲ ಧಾನ್ಯಗಳ ತಾಯಿ ಎಂದು ಉಲ್ಲೇಖಿಸಿದ್ದಾರೆ ಕೂಡ.

ಜಿಲ್ಲಾಧಿಕಾರಿ ವಿಕಾಸ್ ಮಿಶ್ರಾ ಅವರು ಲಹರಿಯವರನ್ನು ಮಿಲ್ಲೆಟ್‌ ಬ್ರಾಂಡ್‌ ಅಂಬಾಸಿಡರ್‌ ಆಗಿ ಆಯ್ಕೆ ಮಾಡಲು ನಿರ್ಧರಿಸಿರುವುದಾಗಿ ಕೂಡ ಹೇಳಿದ್ದಾರೆ.

ಲಹರಿ ಬಾಯಿಯವರ ಸಾಧನೆಯನ್ನು ಹೊಗಳಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಟ್ವೀಟ್‌

ಲಹರಿ ಬಾಯಿಯವರ ಬಳಿ ಕೇವಲ ಎರಡು ಜೊತೆ ಬಟ್ಟೆಗಳಿವೆಯಂತೆ. ಅವರು ಸಂದರ್ಶನಕ್ಕೆ ಹೋದಾಗಲೆಲ್ಲಾ ಅದನ್ನೇ ಧರಿಸುತ್ತಾರೆ. ಇವರು ಯಾವುದೇ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿಲ್ಲವಾದರೂ ಅದಕ್ಕೂ ಮಿಗಿಲಾದ ಇಂಥದ್ದೊಂದು ಜ್ಞಾನ ಹೊಂದಿದ್ದಾರೆ.

ಅಲ್ಲದೇ ಬೀಜ ಬ್ಯಾಂಕ್‌ನಂತಹ ಶ್ಲಾಘನೀಯ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಮುಂದಿನ ಪೀಳಿಗೆಗೂ ಅಪರೂಪದ ಸಿರಿಧಾನ್ಯಗಳನ್ನು ತಲುಪಿಸುವ ಉದ್ದೇಶ ಹೊಂದಿದ್ದಾರೆ. ಇನ್ನು ಅವರು ಸಿರಿಧಾನ್ಯಗಳ ಬ್ರಾಂಡ್‌ ಅಂಬಾಸಿಡರ್‌ ಆಗಿ ಆಯ್ಕೆಯಾಗಿರುವುದು ಈ ಕಾರ್ಯಕ್ಕೆ ಸಿಕ್ಕ ಪ್ರತಿಫಲ ಎಂದೇ ಹೇಳಬಹುದು.