ಕಬ್ಬು, ಭಾರತ ದೇಶದ ಪ್ರಮುಖ ವಾಣಿಜ್ಯ ಬೆಳೆ. ಇದನ್ನು ಬೆಳೆಯಲು ನೀರು ಬಸಿದು ಹೋಗುವಂತಹ ಕಪ್ಪುಮಿಶ್ರಿತ ಭೂಮಿ ಸೂಕ್ತವಾಗಿದ್ದು, ರಸಸಾರ (PH) 6.5-7.5 ವರೆಗೆ ಇರಬೇಕು. ವೈಜ್ಞಾನಿಕ ಕ್ರಮ ಅನುಸರಿಸದೆ ಕಬ್ಬನ್ನು ಮೇಲಿಂದ ಮೇಲೆ ಬೆಳೆಯುತ್ತಿರುವುದರಿಂದ ಭೂಮಿಯ ಫಲವತ್ತತೆ ಮತ್ತು ಆ ಭೂಮಿಯಿಂದ ಪಡೆಯುವ ಇಳುವರಿ ಕುಂಠಿತವಾಗುತ್ತಿದೆ. ಇದೇ ರೀತಿ ಆವೈಜ್ಞಾನಿಕ ಕ್ರಮ ಅನುಸರಿಸುತ್ತಾ ಹೋದರೆ ಮುಂದೊಂದು ದಿನ ನಮ್ಮ ರೈತರು ಕಬ್ಬನ್ನು ಲಾಭದಾಯಕ ಬೆಳೆ ಎಂಬುದನ್ನು ಮರೆಯಬೇಕಾಗಬಹುದು. ಕಬ್ಬಿನ ಬೆಳೆಯಲ್ಲಿ ಇಳುವರಿಯನ್ನು ಹೆಚ್ಚಿಸಲು ರೈತರು ಕೆಳಗೆ ಉಲ್ಲೇಖಿಸಿರುವ ಸೂತ್ರಗಳನ್ನು ಅಳವಡಿಸಿಕೊಳ್ಳಬಹುದು:
ರಸಗೊಬ್ಬರಗಳ ಸೂಕ್ತ ಬಳಕೆ.
ಕಬ್ಬಿನ ಬೆಳೆಯಲ್ಲಿ ರವದಿಯ ಸಮಗ್ರ ನಿರ್ವಹಣೆ.
ಗೊಣ್ಣೆ ಹುಳುವಿನ ಸಮಗ್ರ ನಿರ್ವಹಣೆ.
ರಸಗೊಬ್ಬರಗಳ ಸೂಕ್ತ ಬಳಕೆ
ಪ್ರತಿ ಎಕರೆಗೆ 100 ಕಿ.ಗ್ರಾಂ ಸಾರಜನಕ, 30 ಕಿ.ಗ್ರಾಂ ರಂಜಕ ಮತ್ತು 75 ಕಿ.ಗ್ರಾಂ ಪೊಟ್ಯಾಷ್ ಬೇಕಾಗುವುದು. ನಾಟಿ ಮಾಡುವಾಗ ಶೇ. 10 ರಷ್ಟು ಸಾರಜನಕ, ಪೂರ್ತಿ ಪ್ರಮಾಣದ ರಂಜಕ ಮತ್ತು ಪೊಟ್ಯಾಷ್ ಕೊಡಬೇಕು. ನಾಟಿ ಮಾಡಿದ 6, 10 ಮತ್ತು 14 ನೇ ವಾರಕ್ಕೆ ಕ್ರಮವಾಗಿ ಶೇ.20, 30 ಹಾಗೂ 40 ರಷ್ಟು ಸಾರಜನಕವನ್ನು ಮೇಲು ಗೊಬ್ಬರವಾಗಿ ಕೊಡಬೇಕು. ಕಬ್ಬಿನ ಬೆಳೆಯ ಬೇಡಿಕೆಯ ಪ್ರಮಾಣದ ಆಧಾರದ ಮೇಲೆ ಕಂತುಗಳಲ್ಲಿ ಗೊಬ್ಬರ ಕೊಡುವುದರಿಂದ ಪೋಷಕಾಂಶಗಳ ಸಮರ್ಪಕ ಬಳಕೆಯೊಂದಿಗೆ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯ. ದೀರ್ಘಾವಧಿಯವರೆಗೆ ಸಾರಜನಕ ಗೊಬ್ಬರವನ್ನು ಪೂರೈಸುವುದರಿಂದ ಕಬ್ಬಿನಲ್ಲಿ ಬೆಂಡಾಗುವುದು, ಸೂಲಂಗಿ ಒಡೆಯುವುದು, ರೋಗ ಮತ್ತು ಕೀಟಗಳ ಬಾಧೆ ತಪ್ಪಿಸಬಹುದು ಹಾಗೂ ಕಬ್ಬಿನಲ್ಲಿ ಸಕ್ಕರೆಯ ಅಂಶವನ್ನು ಹೆಚ್ಚಿಸಬಹುದು.
ಕಬ್ಬಿನ ರವದಿಯ ಸಮಗ್ರ ನಿರ್ವಹಣೆ
ಸಾಮಾನ್ಯವಾಗಿ ಒಂದು ಎಕರೆ ಹೊಲದಲ್ಲಿ 5-6 ಟನ್ ರವದಿ ದೊರೆಯುತ್ತದೆ. ಆದರೆ ರೈತರು ರವದಿಯನ್ನು ಬೆಂಕಿ ಹಾಕಿ ಸುಟ್ಟು ಹಾಕುತ್ತಾರೆ. ಇದರಿಂದಾಗುವ ದುಷ್ಪರಿಣಾಮಗಳೆಂದರೆ,
ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳು ಹಾಗೂ ಎರೆಯಳು ooಗಳು ಸತ್ತು ಹೋಗುತ್ತವೆ.ಕಬ್ಬಿನ ಕುಳೆ ಬೆಳೆಯ ಕಣ್ಣುಗಳು ಸುಟ್ಟುಹೋಗುವುದರಿಂದ ಇಳುವರಿ ಕುಂಠಿತವಾಗುತ್ತದೆ.
ವಾಯುಮಾಲಿನ್ಯದ ಜೊತೆಗೆ ಆಪಾರ ಪ್ರಮಾಣದ ಕೃಷಿ ತ್ಯಾಜ್ಯವಸ್ತು ನಷ್ಟವಾಗುತ್ತದೆ.
ಆದ್ದರಿಂದ ಸಹಜವಾಗಿ ದೊರೆಯುವ ಈ ರವದಿಯ ಸದ್ಬಳಕೆ ಮಾಡುವ ಸುಲಭ ಉಪಾಯಗಳು ಈ ಕೆಳಗಿನಂತಿವೆ.
ಆ) ಸಾಲುಗಳ ಮಧ್ಯ ರವದಿಯ ಹೊದಿಕೆ : ಕಬ್ಬನ್ನು ಅಗಲವಾದ (5 ಆಡಿ ಅಂತರ) ಇಲ್ಲವೇ ಜೋಡಿ ಸಾಲು ಪದ್ಧತಿಯಲ್ಲಿ ನಾಟಿ ಮಾಡಿದ್ದರೆ ಸಾಲು ಬಿಟ್ಟು ಸಾಲಿನ ಮಧ್ಯ ರವದಿಯನ್ನು ಹರಡಿ, ಹರಡದ ಸಾಲಿನಲ್ಲಿ ನೀರು ಹಾಯಿಸಬಹುದು.
ಬ) ಪ್ರೆಸ್ ಮಡ್ (ಮಳ್ಳಿ)ನೊಂದಿಗೆ ರವದಿಯಿಂದ ಕಾಂಪೋಸ್ಟ್ ತಯಾರಿಸುವುದು : ಕಬ್ಬಿನ ಕಟಾವು ಮುಗಿದ ನಂತರ ಉಳಿದಿರುವ ರವದಿಯನ್ನು ಒಂದೆಡೆ ಕೂಡಿಹಾಕಬೇಕು. 9 ಮೀ. ಉದ್ದ, 5 ಮೀ. ಆಗಲ, 1 ಮೀ. ಆಳ ಗಾತ್ರದ ಗುಂಡಿಯನ್ನು ತೊಡಬೇಕು. ಗಾತ್ರವನ್ನು ರವದಿಗೆ ಅನುಗುಣವಾಗಿ ಹೆಚ್ಚು/ಕಡಿಮೆ ಮಾಡಬಹುದು. ಗುಂಡಿಯ ಒಂದು ಬದಿಯಲ್ಲಿ 1 ಮೀ. ಖಾಲಿ ಬಿಟ್ಟು ಇನ್ನುಳಿದೆಲ್ಲಡೆ ಸುಮಾರು 500-600 ಕಿ.ಗ್ರಾಂ. ಯಷ್ಟು ಚೆನ್ನಾಗಿ ಕತ್ತರಿಸಿದ ರವದಿಯನ್ನು ಹಾಕಬೇಕು. ಅದರ ಮೇಲೆ 500 ಕಿ.ಗ್ರಾಂ ಮಳ್ಳಿಯನ್ನು ಸಮನಾಗಿ ಹರಡಬೇಕು. ಮಳ್ಳಿ ದೊರೆಯದಿದ್ದರೆ ಮಣ್ಣನ್ನು ಹರಡಬಹುದು. ಅದರ ಮೇಲೆ 25 ಕಿ.ಗ್ರಾಂ ರಾಸಾಯನಿಕ ಗೊಬ್ಬರಗಳ ಮಿಶ್ರಣವನ್ನು 2:2:1 ಮಿಶ್ರಣವನ್ನು 10 ಕಿ.ಗ್ರಾಂ ರಾಕ್ ಫಾಸ್ಟೇಟ್ (ರಂಜಕ) : 10 ಕಿ.ಗ್ರಾಂ ಜಿಪ್ಸಮ್ : 5 ಕಿ.ಗ್ರಾಂ ಯೂರಿಯಾ ರೂಪದಲ್ಲಿ ಹರಡಬೇಕು. ಹೀಗೆ ಹಾಕಿದ ಪದರುಗಳ ಮೇಲೆ 5 ಕಿ.ಗ್ರಾಂ ಕೊಳೆತ ತಿಪ್ಪೆ ಗೊಬ್ಬರವನ್ನು ಪ್ರತಿ 100 ಲೀ. ನೀರಿನಲ್ಲಿ ಬೆರಸಿ ತಯಾರಿಸಿದ 500 ಲೀ. ದ್ರಾವಣವನ್ನು ಸಮನಾಗಿ ಎಲ್ಲೆಡೆ ಹರಡುವ ಹಾಗೆ ಹಾಕಬೇಕು. ಹೀಗೆ 10-15 (ರವದಿ+ಮಳ್ಳಿ+ರಾಸಾಯನಿಕ ಗೊಬ್ಬರಗಳ ಮಿಶ್ರಣ+ದ್ರಾವಣ) ಪದರುಗಳನ್ನು ಹಾಕಬೇಕು. ಕೊನೆಯ ರವದಿಯ ಪದರವನ್ನು ಮಳ್ಳಿ ಅಥವಾ ಮಣ್ಣಿನಿಂದ ಹೊದಿಸಬೇಕು. ಹೀಗೆ ತಯಾರಿಸಿದ ಗುಡ್ಡೆಯನ್ನು ಮೇಲಿಂದ ನೀರು ಸಿಂಪಡಿಸಿ ತೇವಗೊಳಿಸಬೇಕು ಮತ್ತು ಪ್ರತಿ ವಾರಕ್ಕೊಮ್ಮೆ ಹಸಿಮಾಡಬೇಕು. 3 ತಿಂಗಳ ನಂತರ ಗುಡ್ಡೆಯನ್ನು ಒಂದು ಬಾರಿ ಕದಡಿ ಖಾಲಿ ಬಿಟ್ಟ ಸ್ಥಳವನ್ನು ಉಪಯೋಗಿಸಿಕೊಳ್ಳಬಹುದು. ನೀರಿನಿಂದ ತೇವಗೊಳಿಸುವುದನ್ನು ಮಾತ್ರ ಮುಂದುವರಿಸಬೇಕು. ಹೀಗೆ ಮಾಡುವುದರಿಂದ ಕೊಳೆಯದೆ ಉಳಿದಿರುವ ರವದಿಯು ಸರಿಯಾಗಿ ಮಿಶ್ರಣಗೊಂಡು ಮುಂದಿನ 3 ತಿಂಗಳಲ್ಲಿ ಸಂಪೂರ್ಣವಾಗಿ ಕೊಳೆತು ಒಳ್ಳೆಯ ಕಾಂಪೋಸ್ಟ್ ಗೊಬ್ಬರವಾಗುತ್ತದೆ. ಕಾಂಪೋಸ್ಟ್ ಉಪಯೋಗಿಸುವುದರಿಂದ ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಬಹುದು.
ಪ್ರಯೋಜನಗಳು
ಪ್ರತಿ 500 ಕಿ.ಗ್ರಾಂ ರವದಿ ಮತ್ತು 500 ಕಿ.ಗ್ರಾಂ ಪ್ರೆಸ್ಡ್ನಿಂದ ಕನಿಷ್ಟ 800 ಕಿ.ಗ್ರಾಂ ಕಾಂಪೋಸ್ಟ್ ದೊರಕುತ್ತದೆ.
ಅಧಿಕ ಪೋಷಕಾಂಶ ಹಾಗೂ ಕಡಿಮೆ ದರದ ಪ್ರೆಸ್ಡ್ ಯುಕ್ತ ಕಾಂಪೋಸ್ಟ್ ದೊರೆಯುತ್ತದೆ.
ರವದಿಯಿಂದ ಕಾಂಪೋಸ್ಟ್ ತಯಾರಿಸುವುದು : ಈ ಪದ್ಧತಿಯಲ್ಲಿ ! ಮೀ. ಆಳ. 1.5-2 ಮೀ. ಅಗಲ ಮತ್ತು ಅನುಕೂಲಕ್ಕೆ ತಕ್ಕಂತೆ ಉದ್ದವಾದ ಗುಂಡಿಯನ್ನು ತೆಗೆಯಬೇಕು. ಮೊದಲು ಗುಂಡಿಯಲ್ಲಿ 15 ಸೆಂ.ಮೀ ಆಳದವರೆಗೆ ಕತ್ತರಿಸಿದ ರವದಿಯನ್ನು ಸಮನಾಗಿ ಹರಡಿ ನೀರಿನಿಂದ ತೇವಗೊಳಿಸಬೇಕು. ನಂತರ ಸಗಣಿಯ (1 ಕಿ.ಗ್ರಾಂ ಸಗಣಿ ಪ್ರತಿ 5 ಲೀ ನೀರಿನಲ್ಲಿ) ಸ್ಥರಿಯನ್ನು (ರಾಡಿ) ಹರಡಬೇಕು. ಅದರ ಮೇಲೆ 1 ಕಿ.ಗ್ರಾಂ ಜೈವಿಕ ಕಾಂಪೋಸ್ಟ್ ಕಲ್ಟರ್ ನ್ನು ಹರಡಬೇಕು. ನಂತರ ಅದರ ಮೇಲೆ ಪ್ರತಿ | ಟನ್ ರವದಿಗೆ 8 ಕಿ.ಗ್ರಾಂ ಯೂರಿಯಾ ಮತ್ತು 10 ಕಿ.ಗ್ರಾಂ ರಂಜಕ(ಸಿಂಗಲ್ ಸೂಪರ್ ಫಾಸ್ಟೇಟ್) ಮಿಶ್ರಣವನ್ನು ಹರಡಬೇಕು. ಕೊನೆಯದಾಗಿ ಅದರ ಮೇಲೆ 2 ಸೆಂ.ಮೀ. ದಪ್ಪವಾಗಿ ಮಣ್ಣನ್ನು ಹರಡಬೇಕು.
ಗೊಣ್ಣೆಹುಳುವಿನ ಸಮಗ್ರ ನಿರ್ವಹಣೆ
ಗೊಣ್ಣೆಹುಳುಗಳು ಮಾಡುವ ಅಪಾರ ಹಾನಿಯಿಂದಾಗಿ, ಇದು ರಾಷ್ಟ್ರೀಯ ಪ್ರಾಮುಖ್ಯತೆ ಪಡೆದ ಕೀಟಗಳಲ್ಲೊಂದಾಗಿದೆ. ಗೊಣ್ಣೆಹುಳುಗಳು ಬಹು ಭಕ್ಷಕಗಳಾಗಿದ್ದು ದುಂಬಿ ಮತ್ತು ಮರಿ ಎರಡೂ ಹಂತಗಳಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ (ಅನೇಕ ವಾರ್ಷಿಕ ಬೆಳೆಗಳಾದ ಶೇಂಗಾ, ಜೋಳ, ಗೋವಿನಜೋಳ, ತೊಗರಿ, ಸೋಯಾ, ಮೆಣಸಿನಕಾಯಿ, ಉಳ್ಳಾಗಡ್ಡೆ ಮತ್ತು ದೀರ್ಘಾವಧಿ ವಾಣಿಜ್ಯ ಬೆಳೆಗಳಾದ ಕಬ್ಬು, ಆಡಿಕೆ ಮತ್ತು ತೆಂಗು) ಹೆಚ್ಚಿನ ಹಾನಿಯನ್ನುಂಟು ಮಾಡುತ್ತವೆ.
ದುಂಬಿಗಳು ಮುಖ್ಯವಾಗಿ ವಾರ್ಷಿಕ ತೋಟಗಾರಿಕೆ ಮತ್ತು ವನ್ಯಮರಗಳ ಎಲೆಗಳನ್ನು ತಿನ್ನುತ್ತವೆ . ಮರಿಹುಳುಗಳು ಮುಖ್ಯವಾಗಿ ಬೇರುಗಳನ್ನು ತಿಂದು ನಾಶಪಡಿಸುತ್ತವೆ. ಇದರಿಂದ ಪೈರು ಹಳದಿ ಬಣ್ಣಕ್ಕೆ ತಿರುಗಿ ಒಣಗಲು ಪ್ರಾರಂಭಿಸುತ್ತವೆ. ಹಾನಿಗೊಳಗಾದ ಸಸ್ಯಗಳನ್ನು ಎಳೆದಾಗ ಅವು ಸುಲಭವಾಗಿ ಮಣ್ಣಿನಿಂದ ಬೇರ್ಪಡುತ್ತವೆ.
ವಿವಿಧ ಗೊಣ್ಣೆ ಹುಳುಗಳಲ್ಲಿ ಹೊಲೋಟೊಕಿಯಾ ಸೆರೇಟಾ, ಹೊಲೊಟ್ಟೆಕಿಯಾ ಪಿಸ್ಸಾ, ಲ್ಯೂಕೋಪೊಲಿಸ್ ಲೆಪಿಡೋಫೋರಾ, ಲ್ಯೂಕೋಪೊಲಿಸ್ ಕೋನಿಯೋಪೋರಾ ಹಾಗೂ ಲ್ಯೂಕೋಪೊಲಿಸ್ ಬರ್ಮೆಸ್ಟ್ರಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿವೆ.
ಹೊಲೋಟೊಕಿಯಾ ಸೆಕ್ರೆಟಾ
ಕಬ್ಬು ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಗೊಣ್ಣೆಹುಳು (ಹೊಲೋಟ್ರೈಕಿಯಾ ಸೆರೆಟಾ) ಕಬ್ಬಿನಲ್ಲೂ ಶೇ. 40-80 ರಷ್ಟು ಹಾನಿಯನ್ನುಂಟು ಮಾಡುತ್ತವೆ. ಇದು ಕಬ್ಬನ್ನು ಹೊರತುಪಡಿಸಿ ಈ ಪ್ರದೇಶದಲ್ಲಿ ಬೆಳೆಯುವಂತಹ ಮುಂಗಾರು ಮತ್ತು ಹಿಂಗಾರು ಬೆಳೆಗಳನ್ನು ನಾಶಪಡಿಸುತ್ತದೆ.
ಉತ್ತರ ಕರ್ನಾಟಕದ ಸಕ್ಕರೆ ಕಣಜಗಳೆಂದೇ ಹೆಸರಾಗಿರುವ ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ 3000 ಹೆಕ್ಟೇರಿಗಿಂತ ಹೆಚ್ಚಿನ ಕಬ್ಬು ಬೆಳೆದ ಪ್ರದೇಶದಲ್ಲಿ ಹುಳುವಿನ ಬಾಧೆ ತೀವ್ರವಾಗಿದೆ. ಈ ಕೀಟವನ್ನು ಸಮಗ್ರ ರೀತಿಯಿಂದ ಪರಿಣಾಮಕಾರಿಯಾಗಿ ನಿಯಂತ್ರಿಸಲು ಅದರ ಬಾಧೆ ಹಾಗೂ ಜೀವನ ಚಕ್ರದ ಬಗ್ಗೆ ಸಮಂಜಸವಾಗಿ ತಿಳಿಯಬೇಕಾದದ್ದು ಅವಶ್ಯಕವಾಗಿದೆ.
ಕಬ್ಬಿನಲ್ಲಿ ಗೊಣ್ಣೆ ಹುಳುವಿನ ಬಾಧೆ ಜೂನ್-ಆಗಸ್ಟ್ ತಿಂಗಳಲ್ಲಿ ತೀವ್ರವಾಗಿರುತ್ತದೆ. ತೇವಾಂಶದ ಕೊರತೆಯಾದಲ್ಲಿ ಕಬ್ಬು ಬೆಳೆದ ಪ್ರದೇಶಗಳು ಬರ ಪೀಡಿತವಾದರೆ ಬಾಧೆಯು ವಿಪರೀತವಾಗಿ ಶೇ. 80-100 ರಷ್ಟು ಹಾನಿಯಾಗುತ್ತದೆ. ಕೀಟದ ಬಾಧೆ ತೀವ್ರವಿದ್ದ ವರ್ಷವಲ್ಲದೇ ಮರುವರ್ಷವೂ ಇದರ ಹಾವಳಿ ಹೆಚ್ಚಾಗುತ್ತದೆ. ಮುಂಗಾರಿನಲ್ಲಿ ಶೇಂಗಾ, ಸೋಯಾಅವರೆ, ಗೋವಿನ ಜೋಳ, ತರಕಾರಿ ಬೆಳೆಗಳನ್ನು ಬಾಧಿಸುವ ಈ ಕೀಟ, ಹಿಂಗಾರಿನಲ್ಲಿ ಗೋಧಿ, ಕಡಲೆ, ಜೋಳ ಮತ್ತು ತರಕಾರಿ ಬೆಳೆಗಳಿಗೆ ಮಾರಕವಾಗಿದೆ.
ಜೀವನ ಚಕ್ರ
ಗೊಣ್ಣೆ ಹುಳು, ಹೊಲೋಟ್ರೈಕಿಯಾ ಸೆರೆಟಾ . ಸಾಮಾನ್ಯವಾಗಿ ದುಂಬಿಗಳು ಮಳೆಯಾಶ್ರಿತ ಪ್ರದೇಶಗಳಲ್ಲಿ (ವರ್ಷದ ಮೊದಲು ಮಳೆಯಾದಾಗ) ಏಪ್ರಿಲ್-ಮೇ ತಿಂಗಳಲ್ಲಿ ಮತ್ತು ನೀರಾವರಿ ಪ್ರದೇಶಗಳಲ್ಲಿ ಫೆಬ್ರುವರಿ-ಮಾರ್ಚ್ ತಿಂಗಳುಗಳಲ್ಲಿ ರಾತ್ರಿ 7.30 ರಿಂದ 8.30 ರೊಳಗೆ ಭೂಮಿಯಿಂದ ಹೊರಬಂದು ಹತ್ತಿರದಲ್ಲಿ ಇರುವ ಬೇವು, ಚೊಗಚಿ, ಜಾಲಿ, ಹುಣಸೆ, ನೇರಳೆ, ದ್ರಾಕ್ಷಿ ಮತ್ತು ಸೀಬೆ ಮುಂತಾದ ಗಿಡಗಳ ಎಲೆಗಳನ್ನು ತಿನ್ನುತ್ತವೆ.
ಈ ಸಮಯದಲ್ಲಿ ಗಂಡು ಮತ್ತು ಹೆಣ್ಣು ದುಂಬಿಗಳು ಸಂಪರ್ಕ ಹೊಂದಿ ಬೆಳಗಾಗುವುದರೊಳಗೆ ಮಣ್ಣಿನ ಒಳಗೆ ಸೇರಿ ಸುಮಾರು 8-10 ಸೆಂ.ಮೀ. ಆಳದಲ್ಲಿ ಮಣ್ಣಿನ ಕುಡಿಕೆಗಳಲ್ಲಿ ಮೊಟ್ಟೆಗಳನ್ನಿಡುತ್ತವೆ. ಸುಮಾರು ಹತ್ತು ದಿನಗಳ ನಂತರ ಒಂದನೇ ಹಂತದ ಹುಳುಗಳು ಮೊಟ್ಟೆಗಳಿಂದ ಹೊರಬಂದು ಮಣ್ಣಿನಲ್ಲಿರುವ ಸಾವಯವ ಪದಾರ್ಥಗಳನ್ನು ತಿನ್ನುತ್ತಾ, ನಂತರ ಬೇರುಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಮೂರು ಸಲ ಪೊರೆಯನ್ನು ಬಿಟ್ಟು ಸುಮಾರು 170-180 ದಿವಸಗಳಲ್ಲಿ ಸಂಪೂರ್ಣವಾಗಿ ಬೆಳೆದ ಮರಿ ಹುಳುಗಳು 20-30 ಸೆಂ.ಮೀ. ಆಳಕ್ಕೆ ಚಲಿಸಿ ತಾವೇ ರಚಿಸಿಕೊಂಡ ಮಣ್ಣಿನ ಕುಡಿಕೆಗಳಲ್ಲಿ ಕೋಶಾವಸ್ಥೆಯನ್ನು ಸೇರುತ್ತವೆ. ಕೋಶಾವಸ್ಥೆಯ ಅವಧಿ 12-15 ದಿನಗಳು. ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ದುಂಬಿಗಳು ಸುಪ್ತಾವಸ್ಥೆಗೆ ಹೋಗಿ ಫೆಬ್ರುವರಿ-ಮೇ ತಿಂಗಳಲ್ಲಿ ಹೊರಬರುತ್ತವೆ. ಮೊದಲನೆಯ ಮಳೆಯಾದ ಮರುದಿನ ಹೊಲಗಳಲ್ಲಿ ಬೆರಳಿನ ಗಾತ್ರದ ರಂಧ್ರಗಳನ್ನು ಕಾಣಬಹುದು. ಇಂತಹ ಪ್ರದೇಶಗಳಲ್ಲಿ ಗೊಣ್ಣೆ ಹುಳುವಿನ ಬಾಧೆ ತೀವ್ರವಾಗಿರುತ್ತದೆ.
ಬೆಳೆಯ ಬೇರು ಒಣಗಿ ಗಿಡಗಳು ಬಾಡಿದಾಗ, ಗೊಣ್ಣೆ ಹುಳುವಿನ ಇರುವಿಕೆಯನ್ನು ನಿರೀಕ್ಷಿಸಬಹುದು. ದುಂಬಿಗಳು ದೀಪದ ಬೆಳಕಿಗೆ ಹೆಚ್ಚು ಆಕರ್ಷಿತವಾಗುವುದರಿಂದ ಇವುಗಳನ್ನು ಹೊಲದ ಸಮೀಪವಿರುವ ವಿದ್ಯುತ್ ದೀಪ ಹಾಗೂ ಬೆಳಕಿರುವ ಕಡೆಗೆ ಹೆಚ್ಚಾಗಿ ಕಾಣಬಹುದು.
ಸಮಗ್ರ ನಿರ್ವಹಣಾ ಕ್ರಮಗಳು
ಸಾಯಂಕಾಲ ಹೊರಬರುವ ದುಂಬಿಗಳನ್ನು ಆಶ್ರಿತ ಸಸ್ಯಗಳಾದ ಬೇವು, ಹುಣಸೆ ಇತ್ಯಾದಿ ಮರಗಳ ಹತ್ತಿರ ಮತ್ತು ಪೆಟ್ರೋಮ್ಯಾಕ್ಸ್ ದೀಪದ (ಲೈಟ್ ಟ್ರ್ಯಾಪ್) ಸಹಾಯದಿಂದ ಆಕರ್ಷಿಸಿ, ಹಿಡಿದು ನಾಶಪಡಿಸಬೇಕು. ಈ ಕ್ರಮವನ್ನು ಸಾಮೂಹಿಕವಾಗಿ ಕೈಗೊಂಡಲ್ಲಿ ಮಾತ್ರ ಹತೋಟಿ ಪರಿಣಾಮಕಾರಿಯಾಗುತ್ತದೆ.
ಗೊಣ್ಣೆ ಹುಳು ಬಾಧಿತ ಮಳೆಯಾಶ್ರಿತ ಪ್ರದೇಶಗಳಲ್ಲಿ ವರ್ಷದ ಮೊದಲ ಮಳೆ ಬಂದ ನಂತರ ಏಪ್ರಿಲ್-ಮೇ ತಿಂಗಳಲ್ಲಿ, ನೀರಾವರಿ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಜನವರಿಯಿಂದ ಮೇ ತಿಂಗಳಲ್ಲಿ ಭೂಮಿಯನ್ನು ಆಳವಾಗಿ ಉಳುಮೆ ಮಾಡಿ, ಎಕರೆಗೆ 10 ಕಿ.ಗ್ರಾಂ. ಕಾರ್ಬೋಫ್ಯುರಾನ್ 3 ಜಿ ಅಥವಾ ಕ್ವಿನಾಲ್ಫಾಸ್ 25 ಇ.ಸಿ. ಅನ್ನು ಭೂಮಿಗೆ ಸೇರಿಸುವುದರಿಂದ ಗೊಣ್ಣೆ ಹುಳುಗಳನ್ನು ನಿಯಂತ್ರಿಸಬಹುದು.
ಬೆಳೆದುನಿಂತ ಬೆಳೆಯಲ್ಲಿ ಗೊಣ್ಣೆ ಹುಳದ ಬಾಧೆ ಕಂಡು ಬಂದಲ್ಲಿ ಪ್ರತಿ ಲೀಟರ್ ನೀರಿಗೆ 10 ಮಿ.ಲೀ. ಕ್ಲೋರ್ಪೈರಿಫಾಸನ್ನು ಬೆರೆಸಿ, ಬೆಳೆಯ ಬುಡದಲ್ಲಿ ಭೂಮಿ ನೆನೆಯುವಂತೆ ಹಾಕುವುದರಿಂದ ಹಾನಿಯನ್ನು ಕಡಿಮೆಗೊಳಿಸಬಹುದು.
ನೀರಿನ ಸೌಕರ್ಯವಿರುವ ಕಡೆ ಭೂಮಿಯಲ್ಲಿ (ಆಳವಾದ ಕಪ್ಪು ಮಣ್ಣಿನಲ್ಲಿ) ನೀರು ನಿಲ್ಲಿಸುವುದರಿಂದ ಈ ಕೀಟವನ್ನು ಹತೋಟಿ ಮಾಡಬಹುದು.
ಆಕರ್ಷಕ ಬೆಳೆಗಳಾದ (ಟ್ರ್ಯಾಪ್ ಕ್ರಾಪ್) ಈರುಳ್ಳಿ ಹಾಗೂ ಕೊತ್ತಂಬರಿಯನ್ನು ಜನವರಿ-ಮಾರ್ಚ್ ತಿಂಗಳ ಅವಧಿಯಲ್ಲಿ ಕಬ್ಬಿನ ಮಧ್ಯದಲ್ಲಿ ಬೆಳೆಯುವುದರಿಂದ ಕಬ್ಬಿಗಾಗುವ ಬಾಧೆಯನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಬಹುದು.
ಜನವರಿ-ಫೆಬ್ರುವರಿ ತಿಂಗಳಲ್ಲಿ ಪ್ರತಿ ಎಕರೆಗೆ 5-10 ಕಿ.ಗ್ರಾಂ ಮೆಟಾರೈಝಿಯಂ ಶಿಲೀಂಧ್ರವನ್ನು 100 ಕೆಜಿ ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಮಣ್ಣಿಗೆ ಸೇರಿಸಿ ನೀರು ಹಾಯಿಸುವುದರಿಂದ ಈ ಪೀಡೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.