Agripedia

ಸೋಯಾ ಅವರೆಗೆ ಎಲೆ ತಿನ್ನುವ ಹುಳು, ಹೆಸರು ಬೆಳೆಗೆ ಹೇನು, ಉದ್ದಿನಲ್ಲಿ ಬೂದಿ ರೋಗ ಬಾಧೆ

06 August, 2021 10:27 PM IST By:
ಕಾಯಿ ಕೊರೆಯುವ ಕೀಟದ ಬಾಧೆ.

ಬೀದರ ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಬೆಳೆಗಳು 40ರಿಂದ 50 ದಿನಗಳದ್ದಾಗಿದ್ದು, ಸೋಯಾ ಅವರೆ, ಹೆಸರು ಹಾಗೂ ಉದ್ದಿನ ಬೆಳೆಯು ಮಿಂಚು ಹೂವಿನ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಬೀದರಿನ ವಿಜ್ಞಾನಿಗಳ ತಂಡವು ಜಿಲ್ಲೆಯಲ್ಲಿ ಬೆಳೆ ವೀಕ್ಷಣೆ ಕೈಗೊಂಡಿದ್ದು, ಜಿಲ್ಲೆಯ ಅನೇಕ ಗ್ರಾಮಗಳ ಹೊಲಗಳಲ್ಲಿ ಸೋಯಾ ಅವರೆಗೆ ಎಲೆ ತಿನ್ನುವ ಸ್ಪೋಡೋಪ್ಟೇರಾ ಕೀಟ, ಕೊಂಡಿಲು ಹುಳು, ಹಸಿರು ಹುಳು ಹಾಗೂ ಹೇನಿನ ಬಾಧೆ ಹಾಗೂ ಹೆಸರು ಮತ್ತು ಉದ್ದು ಬೆಳೆಗಳಿಗೆ ಹೇನು ಮತ್ತು ಬೂದಿ ರೋಗ ಬಾಧೆ ಕಂಡುಬಂದಿದೆ.

ಸ್ಪೋಡೋಪ್ಟೇರಾ ಕೀಟವು ಬಹುಭಕ್ಷಕ ಕೀಟವಾಗಿದ್ದು, ಹೆಣ್ಣು ಪತಂಗವು ಚಿಗುರೆಲೆಗಳ ಮೇಲೆ 200-300 ಮೊಟ್ಟೆಗಳನ್ನು ಗುಂಪಾಗಿ ಇಟ್ಟು ಅವುಗಳನ್ನು ಕಂದು ಹಳದಿ ಕೂದಲಿನಿಂದ ಮುಚ್ಚುತ್ತದೆ.  ಮೊದಲ ಹಂತದ ಮರಿಗಳು ಎಲೆಗಳ ಮೇಲೆ ಗುಂಪಾಗಿ ಕುಳಿತು ಪತ್ರಹರಿತ್ತನ್ನು ತಿನ್ನುತ್ತವೆ. ಮರಿ ಕೀಟಗಳು ಮೊದಲು ಎಲೆಯ ಹಸಿರು ಭಾಗವನ್ನು ಕರೆದು ತಿನ್ನುತ್ತವೆ. ಕೀಡೆಗಳು ದೊಡ್ಡವಾದಂತೆ ಇಡೀ ಎಲೆಗಳನ್ನು ಕತ್ತರಿಸಿ ತಿನ್ನುತ್ತವೆ. ಬಾಧೆ ಜಾಸ್ತಿಯಾದಲ್ಲಿ ಗಿಡಗಳಲ್ಲಿ ಬರೀ ಕಡ್ಡಿಗಳನ್ನು ಮಾತ್ರ ಉಳಿಯುತ್ತವೆ.

ಕೊಂಡಿಲು ಹುಳು

ಎಲೆಯ ಕೆಳಭಾಗದಲ್ಲಿ ಕಾಣಿಸಿಕೊಳ್ಳುವ ಹಸಿರು ಕೊಂಡಿಲು ಹುಳು ಮತ್ತು ಹಸಿರು ಹುಳುವಿನ ಮರಿ ಕೀಟಗಳು ಮೊದಲು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ. ಈ ಕೀಟಗಳ ಬಾಧೆ ಹೆಚ್ಚಾದಲ್ಲಿ ಬಾಧೆಯಿಂದ ಎಲೆಗಳ ಮೇಲೆ ದೊಡ್ಡ ರಂದ್ರಗಳು ಅಥವಾ ಎಲೆಗಳು ಹರಿದಂತಹ ಲಕ್ಷಣಗಳು ಕಂಡುಬರುತ್ತಿವೆ. ಮರಿ ಕೀಟಗಳು ಎಲೆಯ ಹಸಿರು ಭಾಗವನ್ನು, ದೊಡ್ಡ ಹುಳುಗಳು ಎಲೆ, ಹೂವು ಮತ್ತು ಕಾಯಿಗಳನ್ನು ತಿನ್ನುತ್ತವೆ.

ಎಫಿಡ್ ಹೇನು

ಈ ಕೀಟವು ಸೋಯಾ ಅವರೆ, ಹೆಸರು ಹಾಗೂ ಉದ್ದಿನ ಬೆಳೆಯನ್ನು ಬಾಧಿಸಿ ಹಾನಿಯುಂಟು ಮಾಡುತ್ತದೆ. ಅಫಿಡಿಡೆ ಕುಟುಂಬದ ಈ ಕೀಟವು, ಹೊಮೊಪ್ಟೇರಾ ಗಣಕ್ಕೆ ಸೇರಿದೆ. ಪ್ರೌಢ ಕೀಟಗಳು 2 ಮಿ.ಮಿ ಉದ್ದವಿದ್ದು ರೆಕ್ಕೆ ಹೊಂದಿರುತ್ತವೆ. ಗಂಡು ಮತ್ತು ಹೆಣ್ಣಿನ ಸಂಯೋಗ ಹೊಂದದೆ ಇವುಗಳ ಸಂತಾನೊತ್ಪತ್ತಿ ನಡೆಯುತ್ತದೆ. ಪ್ರೌಢ ಕೀಟವು ತನ್ನ ಜೀವಿತ ಅವಧಿಯ 30 ದಿನಗಳಲ್ಲಿ 100ಕ್ಕೂ ಹೆಚ್ಚು ಬಾರಿ ಸಂತಾನೊತ್ಪತ್ತಿ ಮಾಡುತ್ತದೆ.

ಉದ್ದಿನಲ್ಲಿ ಬೂದಿ ರೋಗದ ಬಾಧೆ.

ಇನ್ನು ಹೇನುಗಳು ಎಳೆಯ ಕಾಂಡ, ಸುಳಿ, ಹೂವು ಮತ್ತು ಕಾಯಿಗಳ ಮೇಲೆ ಗುಂಪು ಗುಂಪಾಗಿ ನೆಲೆಸುತ್ತವೆ. ಅಧಿಕ ಬಾಧೆಗೆ ಒಳಗಾದ ಸಸ್ಯಗಳ ಎಲೆಗಳು ಮುಟುರಿಕೊಳ್ಳುತ್ತವೆ. ಈ ಕೀಟಗಳು ಗಿಡದಿಂದ ರಸಹೀರಿ ಜೇನಿನಂತಹ ದ್ರವವನ್ನು ಸುರಿಸುವುದರಿಂದ ಕೆಳ ಭಾಗದ ಎಲೆಗಳು ಮಿಂಚುವಂತೆ ಕಂಡು ಬಂದು ಅವುಗಳ ಮೇಲೆ ಕಪ್ಪು ಬೂಷ್ಟ ಬೆಳೆದು ಸಸ್ಯಗಳ ಆಹಾರ ತಯಾರಿಕೆ ಕಾರ್ಯದಲ್ಲಿ ವ್ಯತ್ಯಯ ಉಂಟಾಗುತ್ತದೆ. ಇದರಿನದ ಇಳುವರಿಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತದೆ.

ತೊಗರಿಯಲ್ಲಿ ಗೊಡ್ಡು ರೋಗದ ಬಾಧೆ

ಹುಮನಾಬಾದ ತಾಲೂಕಿನ ದುಬಲಗುಂಡಿ ಮತ್ತು ಹಳ್ಳಿಖೇಡ್ ಗ್ರಾಮಗಳ ತೊಗರಿ ಬೆಳೆಯಲ್ಲಿ ಗೊಡ್ಡು ರೋಗದ ಬಾಧೆ ಕಂಡು ಬಂದಿದೆ. ಬಾಧಿತ ಗಿಡಗಳು ಹೂ ಮತ್ತು ಕಾಯಿ ಹಿಡಿಯದೆ, ಕೇವಲ ಎಲೆಗಳೊಂದಿಗೆ ಗೊಡ್ಡಾಗಿ ಉಳಿಯುತ್ತವೆ. ಇಂತಹ ಗಿಡದ ಎಲೆಗಳು ಸಣ್ಣವಾಗಿದ್ದು, ಮೆಲ್ಭಾಗದಲ್ಲಿ ತಿಳಿ ಮತ್ತು ದಟ್ಟ ಹಳದಿ ಬಣ್ಣದ ಮಚ್ಚೆಗಳನ್ನು ಹೊಂದಿ, ಮುಟುರಿಕೊಂಡಿರುತ್ತವೆ. ಬೆಳೆಯು ಚಿಕ್ಕದಿದ್ದಾಗ ಈ ರೋಗ ಬಂದರೆ ಗಿಡ ಬೆಳೆಯದೇ, ಪೊದೆಯಂತೆ ಗೊಡ್ಡಾಗಿ ಉಳಿಯುತ್ತದೆ. ನಂಜಾಣುಗಳಿಂದ ಉಂಟಾಗುವ ಈ ರೋಗವು ಅಂತರ್ವ್ಯಾಪಿಯಾಗಿದ್ದು, ಆಸೆರಿಯಾ ಕೆಜನಿ ಎನ್ನುವ ರಸ ಹೀರುವ ಮೈಟ್ ನುಸಿಗಳಿಂದ ಪ್ರಸಾರವಾಗುವುದು. ಈ ಮೈಟ್ ನುಸಿಗಳು ಗಾಳಿಯ ದಿಕ್ಕಿನಲ್ಲಿ ಗಾಳಿಯ ಜೊತೆ ರೋಗದ ಸ್ಥಳದಿಂದ ಸುಮಾರು 2 ಕಿ.ಮೀ ವರೆಗೂ ಪ್ರಸಾರವಾಗಬಲ್ಲವು.

ಈ ರೋಗದಿಂದ ತೊಗರಿ ಬೆಳೆಯನ್ನು ಸಂರಕ್ಷಿಸಲು ರೋಗ ಹೊಂದಿರುವ ಬಹುವಾರ್ಷಿಕ ತೊಗರಿ ಮತ್ತು ಕುಳೆ ತೊಗರಿ ಗಿಡಗಳನ್ನು ಕಿತ್ತು ನಾಶ ಮಾಡಬೇಕು. ರೋಗದ ಪ್ರಾರಂಭದ ಹಂತದಲ್ಲಿ ರೋಗ ಬಂದ ಗಿಡಗಳನ್ನು ಕಿತ್ತು ನಾಶ ಮಾಡುವುದು ಸೂಕ್ತ. ಬೆಳೆಯ ಪ್ರಾರಂಭಿಕ ಹಂತದಲ್ಲಿ ನುಸಿ ನಾಶಕಗಳಾದ ಡಿಕೋಫಾಲ್ 20 ಇ.ಸಿ. 2.5  ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ, ಬೆಳೆಯ ಮೆಲೆ ಸಿಂಪಡಿಸಬೇಕು

ಉದ್ದು, ಹೆಸರಿಗೆ ಚಿಬ್ಬು, ಬೂದಿ ರೋಗ

ಅನೇಕ ಗ್ರಾಮಗಳ ರೈತರ ಹೊಲಗಳಲ್ಲಿ ಉದ್ದು ಮತ್ತು ಹೆಸರು ಬೆಳೆಯಲ್ಲಿ ಚಿಬ್ಬು ಹಾಗೂ ಬೂದಿ ರೋಗದ ಬಾಧೆ ಕಂಡುಬAದಿದೆ. ಚಿಬ್ಬು ರೋಗ ಇರುವ ಗಿಡದ ಎಲೆಯ ಕೆಳಭಾಗದಲ್ಲಿ 10-12 ಮಿ.ಮೀ ಗಾತ್ರದ ಕಡು ಕೆಂಪಾದ ಚುಕ್ಕೆಗಳು, ಎಲೆಯ ಮೇಲ್ಭಾಗದಲ್ಲಿ ಕೆಂಪು ಮಿಶ್ರಿತ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಂಡು, ಬಳಿಕ ಚುಕ್ಕೆಗಳ ಜಾಗದಲ್ಲಿ ರಂದ್ರಗಳಾಗುತ್ತವೆ. ಎಲೆಯ ಮೇಲೆ ಶಿಲಿಂದ್ರದ ಬಿಳಿ ಪುಡಿ ಬಿದ್ದಿರುವುದು ಬೂದಿ ರೋಗದ ಲಕ್ಷಣವಾಗಿದೆ. ಇದರಿಂದ ಕೆಲ ದಿನಗಳಲ್ಲಿ ಗಿಡಗಳು ಒಣಗುತ್ತವೆ.

ಸಮಗ್ರ ನಿರ್ವಹಣೆ:

  • ಮೊಟ್ಟೆಗಳು ಮತ್ತು ಮರಿಗಳ ಗುಂಪುಗಳನ್ನು ಆರಿಸಿ ನಾಶಪಡಿಸಬೇಕು (ಸ್ಪೋಡೋಪ್ಟೇರಾ ಕೀಟ).
  • ಪ್ರತಿ ಲೀಟರ್ ನೀರಿಗೆ ಹುಳುವಿನ ಬಾಧೆ ಹೆಚ್ಚಾದಲ್ಲಿ 0.2 ಗ್ರಾಂ ರಿಮಾಮೆಕ್ಟಿನ್ ಬೆಂಜೋಏಟ್ ಅಥವಾ 0.15 ಮಿ.ಲೀ ಕ್ಲೊರ‍್ಯಾಂಟ್ರನಿಲಿಪ್ರ‍್ರೇಲ್ ಇಲ್ಲವೇ 0.5 ಮಿ.ಲೀ ಫ್ಲೂಬೆಚಿಡಿಮಾಯಿಡ್ ಅಥವಾ 2 ಮಿ.ಲೀ. ಕ್ಲೊರ್‌ಪೈರಿಫಾಸ್ 20 ಇ.ಸಿ, ಅಥವಾ 0.1 ಮಿ.ಲೀ ಸ್ಪೆನೋಸ್ಯಾಡ್ 45 ಎಸ್.ಸಿ ಅಥವಾ 1 ಮಿ.ಲೀ ಮೋನೋಕ್ರೋಟೋಫಾಸ್ ಅಥವಾ 1 ಗ್ರಾಂ. ನಮೋರಿಯಾ ರಿಲೈ ಅಥವಾ 1 ಗ್ರಾಂ. ಬಿ.ಟಿ ದುಂಡಾಣುವನ್ನು ಬೆರೆಸಿ ಸಿಂಪಡಿಸಿರಿ.
  • ಬಲಿತ ಹುಳುಗಳಿಗೆ (ಸ್ಪೋಡೋಪ್ಟೇರಾ ಕೀಟ) ವಿಷ ತಿಂಡಿ ತಯಾರಿಸಿ ಸಾಯಂಕಾಲ ಸಾಲುಗಳ ಮಧ್ಯೆ ಹಾಕಬೇಕು.

ವಿಷ ತಿಂಡಿ ತಯಾರಿಕೆ: 625 ಮಿ.ಲೀ. ಮೊನೊಕ್ರೊಟೋಫಾಸ್ + 5 ಲೀ. ನೀರು + 50 ಕಿ.ಗ್ರಾಂ. ಅಕ್ಕಿ ತೌಡು / ಗೋಧಿ ತೌಡು + 5 ಕಿ.ಗ್ರಾಂ. ಬೆಲ್ಲದೊಂದಿಗೆ ಬೆರೆಸಿರಿ. 24 ಗಂಟೆಗಳ ಕಾಲ ನೆರಳಿನಲ್ಲಿ ಮುಚ್ಚಿಡಿ.

  • ರಸ ಹೀರುವ ಹೇನಿನ ನಿರ್ವಹಣೆಗಾಗಿ ಪ್ರತಿ ಲೀ. ನೀರಿಗೆ 1 ಮಿ.ಲೀ ಮೊನೋಕ್ರೋಟೊಫಾಸ್ 36 ಎನ್.ಎಂiï ಅಥವಾ 1.7 ಮಿ.ಲೀ ಡೈಮಿಥೊಯೇಟ್ 30 ಇಸಿ ಅಥವಾ 0.3 ಮಿ.ಲೀ ಇಮಿಡಾಕ್ಲೊಪ್ರಿಡ್ 17.8 ಎನ್.ಎಲ್ ಅನ್ನು ಬೆರೆಸಿ ಸಿಂಪಡಿಸಿ ಅಥವಾ ಶೇ.5ರ ಬೇವಿನ ಬೀಜದ ಕಶಾಯವನ್ನು ಸಿಂಪಡಿಸಿ.

ಚಿಬ್ಬು ರೋಗ ಹಾಗೂ ಬೂದಿ ರೋಗಗಳ ನಿರ್ವಹಣೆಗಾಗಿ 1 ಮೀ.ಲೀ ಹೆಕ್ಸಾಕೋನಾಜೋಲ್ 5ಇ.ಸಿ ಅಥವಾ 0.5 ಮಿ.ಲೀ ಪ್ರ‍್ರೇಪಿಕೊನಜೋಲ್ ಅಥವಾ ನೀರಿನಲ್ಲಿ ಕರಗುವ ಗಂಧಕ 3 ಗ್ರಾಂ. ಅಥವಾ 1 ಗ್ರಾಂ. ಕಾರ್ಬನ್‌ಡೈಜಿಮ್ 50ಡಬ್ಲೂಪಿ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಬೀದರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಎನ್.ಎಂ. ಸುನೀಲ ಕುಮಾರ, ವಿಜ್ಞಾನಿಗಳಾದ ಡಾ. ನಿಂಗದಳ್ಳಿ ಮಲ್ಲಿಕಾರ್ಜುನ, ಡಾ. ಅಕ್ಷಯಕುಮಾರ ವಿಜ್ಞಾನಿಗಳ ತಂಡದಲ್ಲಿ