Agripedia

ಮಣ್ಣಿನ ಸಂರಕ್ಷಣೆ ಮತ್ತು ಕೃಷಿಯಲ್ಲಿ ಮಣ್ಣಿನ ನಿರ್ವಹಣೆ

31 March, 2023 3:11 PM IST By: Kalmesh T
Soil conservation and soil management in agriculture

ಕೃಷಿಯಲ್ಲಿ ಉತ್ಪಾದಕತೆ ಹೆಚ್ಚಿಸಲು ಮಣ್ಣು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಮಣ್ಣಿನ ಗುಣಮಟ್ಟವು ದೀರ್ಘಕಾಲದವರೆಗೆ ಉಳಿಯುವುದು ಬಹಳ ಮುಖ್ಯವಾಗುತ್ತದೆ. ಇದಕ್ಕಾಗಿ ಮಣ್ಣಿನ ನಿರ್ವಹಣೆ ರೈತರಿಗೆ ಅತ್ಯಗತ್ಯ.

ತೋಟಗಾರಿಕೆ ಬೆಳೆಗಳಲ್ಲಿ ಕೊಯ್ಲೋತ್ತರ ನಿರ್ವಹಣೆ ಮತ್ತು ಮೌಲ್ಯವರ್ಧನಾ ಕ್ರಮಗಳು

ಮಣ್ಣಿನ  ಮತ್ತು ಸುತ್ತಮುತ್ತಲಿನ ಪರಿಸರದ ಬಗ್ಗೆ ಉತ್ತಮ ಕಾಳಜಿ ವಹಿಸಬೇಕು. ಹಾಗಾಗಿ ಮಣ್ಣಿನ ನಿರ್ವಹಣೆಗೆ ಈ ಕೆಳಕಂಡ ಕ್ರಮಗಳನ್ನು ಅನುಸರಿಸುವುದು ಅತೀ ಮುಖ್ಯ.

  1. ಮಣ್ಣಿನ ಆರೋಗ್ಯವನ್ನು ಪುನಃಸ್ಥಾಪಿಸಲು ದೀರ್ಘಾವಧಿಯ ಸುಸ್ಥಿರ ಮಣ್ಣು ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅತಿ ಮುಖ್ಯ. ಬೆಳೆ ಇಳುವರಿಗಿಂತ ಗುಣಮಟ್ಟದ ಆಹಾರಕ್ಕೆ ಮತ್ತು ಆಹಾರದ ಸುರಕ್ಷತೆಗೆ ಆದ್ಯತೆ ನೀಡಬೇಕು.
  2. ಕೃಷಿ ರಾಸಾಯನಿಕಗಳ ಜವಾಬ್ದಾರಿಯುತ ಬಳಕೆಯನ್ನು ಉತ್ತೇಜಿಸುವುದು: ರಸಗೊಬ್ಬರ ಸಂಹಿತೆಯು ರಸಗೊಬ್ಬರಗಳ ಕಡಿಮೆ ಬಳಕೆ, ದುರುಪಯೋಗ ಮತ್ತು ಅತಿಯಾದ ಬಳಕೆಯನ್ನು ತಪ್ಪಿಸಲು ಮಾರ್ಗದರ್ಶಿ ಸಿದ್ದಪಡಿಸಬೇಕು. ರಸಗೊಬ್ಬರದ ಗುಣಮಟ್ಟದ ಮಾಹಿತಿ ಸಾರ್ವಜನಿಕರಿಗೂ ಲಭ್ಯವಿರಬೇಕು ಮತ್ತು ಉಲ್ಲೇಖಿತ ಪ್ರಯೋಗಾಲಯಗಳಿಂದ ಪರೀಕ್ಷೆಗೆ ಒಳಪಡಿಸಿ ಮೇಲ್ವಿಚಾರಣೆ ಮಾಡಬೇಕು.
  3. ಕೊರತೆಗಳನ್ನು ತಪ್ಪಿಸಲು, ಮಣ್ಣಿನ ಪೊಷಕಾಂಶಗಳಲ್ಲಿ ಸೂಕ್ಷ್ಮ ಪೋಷಕಾಂಶಗಳನ್ನು ಸೇರಿಸುವುದು ಅತ್ಯಗತ್ಯ. ಬೇಳೆಕಾಳುಗಳ ಬಳಕೆ, ಬೆಳೆ ವೈವಿಧ್ಯತೆ, ಅಂತರ ಬೆಳೆ ಮತ್ತು ಬೆಳೆ ಪರಿವರ್ತನೆಯನ್ನು ಉತ್ತೇಜಿಸಬೇಕು. ಸಮಗ್ರ ಪದ್ದತಿಯನ್ನು ಅಳವಡಿಸಿ ಕೃಷಿ ಜೀವವೈವಿಧ್ಯಗಳನ್ನು ಹೆಚ್ಚಿಸುವುದು.
  4. ರಸಗೊಬ್ಬರವನ್ನು ಜೈವಿಕ ಗೊಬ್ಬರದೊಂದಿಗೆ ಬಳಕೆ, ಕೃಷಿ ತ್ಯಾಜ್ಯದಿಂದ ಕಾಂಪೋಸ್ಟ್ ತಯಾರಿಕೆ, ಪೋಷಕಾಂಶಗಳ ಮರುಬಳಕೆ, ಕೊಟ್ಟಿಗೆ ಗೊಬ್ಬರಗಳನ್ನು ಪೋಷಕಾಂಶಗಳಿಂದ ಸಮೃದ್ಧಿಗೊಳಿಸುವಿಕೆ ಮತ್ತು ಜೈವಿಕ ಉತ್ತೇಜಕಗಳೊಂದಿಗೆ ಸಮಗ್ರವಾಗಿ ಪೋಷಕಾಂಶಗಳ ನಿರ್ವಹಣೆ ಅಗತ್ಯ. ಮಣ್ಣಿಗೆ ಜೀವವನ್ನು ಮರಳಿ ತರುವಲ್ಲಿ ನಾವು ರೈತರನ್ನು ಬೆಂಬಲಿಸಿದಾಗ ನಾವು ನಮ್ಮ ಆಹಾರ ಮತ್ತು ಭೂಮಿಯನ್ನು ಸಂರಕ್ಷಿಸಬಹುದು.
  5. ಮಣ್ಣಿನ ಜೀವವೈವಿಧ್ಯಗಳ ಮೌಲ್ಯಮಾಪನ ನಕ್ಷೆ ಮತ್ತು ಮೇಲ್ವಿಚಾರಣೆ .
  6. ಅರಣ್ಯನಾಶವನ್ನು ತಡೆಗಟ್ಟುವುದು.

ಕ್ಷೀಣಿಸುತ್ತಿರುವ ಮಣ್ಣನ್ನು ಮರುಸ್ಥಾಪಿಸಲು ಕೈಗೊಳ್ಳಬೇಕಾದ ಕ್ರಮಗಳು;

* ಮಣ್ಣಿನಲ್ಲಿ ಪೋಷಕಾಂಶದ ಮಟ್ಟವನ್ನು ತಿಳಿದು, ಪೋಷಕಾಂಶಗಳ ಸಮಗ್ರ ನಿರ್ವಹಣೆ ಮತ್ತು ನಿಖರ ಕೃಷಿ ವಿಧಾನಗಳನ್ನು ಅನುಸರಿಸುವುದು

* ವ್ಯವಸ್ಥಿತ ನೀರಾವರಿ (ಹನಿ ನೀರಾವರಿ, ಸಿಂಚನ ನೀರಾವರಿ) ಅಳವಡಿಕೆ. ನೀರು ಇಂಗುವಂತೆ ಕಾಲುವೆಗಳ ಬದಿಗಳಲ್ಲಿ ಹುಲ್ಲು, ಪೊದರು ಬೆಳೆಯುವುದು

* ಇಳಿಜಾರಿಗೆ ಅಡ್ಡವಾಗಿ ಉಳುಮೆ, ಸಮಪಾತಳಿಯಲ್ಲಿ ಬದು ನಿರ್ಮಾಣ, ಬದುಗಳಿಗೆ ಸಮಾಂತರವಾಗಿ ಸಾಗುವಳಿ

* ಮಣ್ಣಿನ ಸವಕಳಿ ತಡೆಗಟ್ಟಲು ಮಣ್ಣಿನ ಮೇಲ್ಮೈ, ಹುಲ್ಲು, ಬೆಳೆಗಳಿಂದ ಹೊದಿಕೆ, ಹವಾಮಾನ ಬದಲಾವಣೆಗೆ ಅನುಗುಣವಾಗಿ ಬೆಳೆಗಳ ಆಯ್ಕೆ

* ಜಮೀನಿನ ಕೊರಕಲು , ಕಮರಿಗಳಿಗೆ ಅಡ್ಡವಾಗಿ ಕಲ್ಲಿನ ತಡೆ

* ಗಾಳಿಯಿಂದುಂಟಾಗುವ ಮಣ್ಣಿನ ಸವಕಳಿ ತಡೆಯಲು ಗಾಳಿ ಬೀಸುವ ದಿಕ್ಕಿಗೆ ಅಡ್ಡವಾಗಿ ಗಿಡಗಳನ್ನು ಬೆಳೆಯುವುದು

* ಮಣ್ಣು ತುಂಬಾ ತೇವವಾಗಿದ್ದಾಗ ಹೊಲಗಳಲ್ಲಿ ಭಾರವಾದ ಯಂತ್ರೋಪಕರಣಗಳನ್ನು ಬಳಕೆ ಮಾಡದಿರುವುದು

ಇತ್ತೀಚಿಗೆ ಮಣ್ಣಿಗೆ ಕೊಡಬೇಕಾದ ಪ್ರಾಧಾನ್ಯತೆ ಕಡಿಮೆಯಾಗುತ್ತಿದೆ ಮತ್ತು ಮಣ್ಣಿನಲ್ಲಿರುವ ಜೀವಸತ್ವ ನಾಶವಾಗುತ್ತಿದೆ. ಅದನ್ನು ಮರುಸ್ಥಾಪಿಸಲು ವರ್ಷಗಟ್ಟಲೆ ಬೇಕಾಗಬಹುದು. ಇಲ್ಲವೇ ಮರುಸ್ಥಾಪಿಸಲು ಸಾಧ್ಯವಾಗದೆ ಹೋಗಬಹುದು. ಮನುಷ್ಯನ ದುರಾಸೆಗೆ ಮಣ್ಣು ಹಾಳಾಗುತ್ತಿದೆ.

ಆದ್ದರಿಂದ ಮಣ್ಣು ಕೇವಲ ವ್ಯಾಪಾರ ಮತ್ತು ಹಣವನ್ನು ದ್ವಿಗುಣಗೊಳಿಸುವ ವಸ್ತುವಾಗಬಾರದು. ಪ್ರಕೃತಿಗೆ ಪೂರಕವಾದ ಸಾವಯವ ಗೊಬ್ಬರ ಮಣ್ಣಿಗೆ ಒಳ್ಳೆಯದು. ಅತಿಯಾದ ರಾಸಾಯನಿಕ ಗೊಬ್ಬರ ಮಣ್ಣಿನ ಫಲವತ್ತತೆಯನ್ನು ನಾಶಮಾಡಿ ಮಣ್ಣನ್ನು ಬರಡಾಗಿಸುತ್ತದೆ, ಅತಿಯಾದ ಅಮೃತವು ವಿಷವಾಗುವುದು.

ತಿಳಿದವರು ಹೇಳಿದಂತೆ, “ಬರಡು ಮಣ್ಣು- ಬರಡಾಗುವ ಗಿಡ- ಬಡಕಲು ಆಹಾರ-ಬಳಲುವ ಮಾನವ” ಎಲ್ಲವೂ ಒಂದಕ್ಕೊಂದು ಪೂರಕ. ಮಣ್ಣು ಬರಡಾದರೆ ಮನುಷ್ಯ ಬರಡಾದಂತೆ.