Agripedia

ಸಗಣಿಯನ್ನು ಜೈವಿಕ ಇಂಧನ ಯಂತ್ರದಲ್ಲಿ ಬಳಸಿ, ಇಂಧನ ಹಾಗೂ ಗೊಬ್ಬರ ಉತ್ಪಾದಿಸಿ

19 May, 2021 4:46 PM IST By:
Bio-gas

ಜೈವಿಕ ಅನಿಲ ಘಟಕ ಎಂದಾಕ್ಷಣ, ಸೌದೆಯ  ಕೊರತೆ ಮತ್ತು ಗೊಬ್ಬರ ಸಮಸ್ಯೆಗೆ ಉಪಾಯ ಸಿಕ್ಕಂತಾಗುತ್ತದೆ.ಈ ಎರಡೂ ಸಮಸ್ಯೆಗಳನ್ನೂ ಜೈವಿಕ ಅನಿಲ ಘಟಕದಿಂದ ನಿವಾರಣೆ ಮಾಡಬಹುದು. ಸಾಮಾನ್ಯವಾಗಿ ನಾವು ಸಗಣಿಯನ್ನು ಕಟ್ಟಿಗೆ ರೀತಿ ಸುಡುತ್ತೇವೆ. ಇದರ ಬದಲಾಗಿ ಸಗಣಿಯನ್ನು ಜೈವಿಕ ಇಂಧನ ಯಂತ್ರದಲ್ಲಿ ಬಳಸಿ, ಇಂಧನ ಹಾಗೂ ಗೊಬ್ಬರವನ್ನು ಉತ್ಪಾದಿಸಬಹುದು.

ಜೈವಿಕ ಅನಿಲವನ್ನು ಅಡುಗೆ ಮಾಡಲು, ದೀಪ ಬೆಳಗಿಸಲು ಹಾಗೂ ನೀರು ಎತ್ತಲು, ಇಂಜಿನ್ ಗಳನ್ನು ಓಡಿಸಲು ಬಳಸಬಹುದು. ಸಗಣಿಯಲ್ಲಿ ಹಲವಾರು ಉಪಯುಕ್ತ ಸೂಕ್ಷ್ಮ ಜೀವಿಗಳಿರುತ್ತವೆ. ಜೈವಿಕ ಅನಿಲ ಉತ್ಪಾದನೆಯಲ್ಲಿ ಒಟ್ಟು ಮೂರು ಹಂತಗಳಿವೆ. ಸಗಣಿಯಲ್ಲಿರುವ ಕಠಿಣಕರ ಪೋಷಕಾಂಶಗಳನ್ನು ಪರಿವರ್ತನೆಗೊಳಿಸಿ ಕೊನೆಯ ಹಂತದಲ್ಲಿ ಸೂಕ್ಷ್ಮಜೀವಿಗಳು "ಮಿಥೇನ್ "ಎಂಬ ಅನಿಲವನ್ನು ಉತ್ಪಾದನೆ ಮಾಡುತ್ತವೆ. ಇಂತಹ ಏಕಾಣು ಜೀವಿಗಳು ಆಮ್ಲಜನಕ ರಹಿತ  ವಾತಾವರಣದಲ್ಲಿ  ಮಾತ್ರ ಕೆಲಸ ಮಾಡುತ್ತವೆ.

ಈ ಅನಿಲ ಘಟಕಗಲ್ಲಿ ದೀನಬಂಧು ಮಾದರಿಯ ಘಟಕ ಅತೀ ಹೆಚ್ಚು ಪ್ರಾಮುಖ್ಯತೆಯಲ್ಲಿದೆ .ಈ ಮಾದರಿಯ ಉತ್ಪಾದನಾ ಘಟಕಗಳನ್ನು ನೆಲದೊಳಗೆ ನಿರ್ಮಿಸಲಾಗುತ್ತದೆ. ಹಳ್ಳಿಯ ಮನೆಗಳಲ್ಲಿ ದನಕರುಗಳ  ಸಂಖ್ಯೆಯ ಅನುಗುಣವಾಗಿ ಅನಿಲ ಘಟಕದ ಗಾತ್ರವನ್ನು ನಿರ್ಧಾರ ಮಾಡಲಾಗುವುತ್ತದೆ. 2 -3 ದನಗಳು ಇದ್ದೂ 3-4 ಜನರಿಗೆ ಅಡಿಗೆ ಮಾಡಲು ಒಂದು ಘನ ಮೀಟರ್ ಗಾತ್ರದ ಘಟಕವಿದ್ದರೆ ಸಾಕಾಗುತ್ತದೆ.ಸಾಮಾನ್ಯವಾಗಿ ಹಳಿಗಳಲ್ಲಿ ಹೆಚ್ಚಾಗಿ 2 ಅಥವಾ 3ಘನ ಮೀ.ಗಾತ್ರದವರೆಗೆ ಅನಿಲ ಘಟಕಗಳನ್ನು ಕಾಣಬಹುದು.ಈ ಘಟಕಗಳನ್ನು ನಿರ್ಮಿಸಲು ತರಬೇತಿ ಹೊಂದಿದ ಪ್ರಮಾಣ ಪತ್ರವಿರುವಗೌಂಡಿಗಳ ಮೂಲಕ ನಿರ್ಮಿಸಬೇಕು.

ಘಟಕ ನಿರ್ಮಾಣವಾದ ನಂತರ ಅದನ್ನುತುಂಬಿಸಲು ಸಾಕಾಗುವಷ್ಟು  ಸಗಣಿಯನ್ನು  ಹಾಕಿ ಸ್ಥಾವರವನ್ನು ಅಥವಾ ಗುಂಡಿಯನ್ನು ತುಂಬಿಸಬೇಕು ಸರಿಸುಮಾರು 35-40 ದಿನಗಳ ಬಳಿಕ ದಿನಾಲೂ 25 ಕಿ.ಗ್ರಾ ಪ್ರತಿ 1 ಘ.ಮೀ.ನಂತೆ ಸಗಣಿಯನ್ನು ಅದರ ಪ್ರಮಾಣದ ನೀರಿನ ಜೊತೆಯಲ್ಲಿ ಕಲಸಿ ಹಾಕಬೇಕು. ಈ ರೀತಿಯ ಘಟಕವನ್ನು ಬೇಸಿಗೆ  ಕಾಲದಲ್ಲಿ ಶುರು ಮಾಡಿದರೆ ಬಹಳ ಉತ್ತಮ.ಸಗಣಿ ಮತ್ತು ನೀರು 1:1 ಪ್ರಾಮಾಣದಲ್ಲಿ ಸರಿಯಾಗಿ ಕಲಿಸಿ ಅಂತರ್ಗಮನ ಕೊಳವೆಯಲ್ಲಿ ಹಾಕಬೇಕು.

ಸುಮಾರು 8-9 ದಿನಗಳ ಬಳಿಕ ಅನಿಲ ಉತ್ಪಾದನೆ  ಪ್ರಾರಂಭವಾಗುತ್ತದೆ. ಅನಿಲ ಉತ್ಪಾದನೆಯಾದ ನಂತರ ಸ್ಥಾವರದ ಹೊರ ಹೊಂಡದಲ್ಲಿ ಸಗಣಿಯ ಮಟ್ಟ ಹೆಚ್ಚುತ್ತಾ ಹೋಗುತ್ತದೆ. ಹೀಗಿದ್ದರೆ ಸ್ಥಾವರ  ಚೆನ್ನಾಗಿ  ಕಾರ್ಯ ನಿರ್ವಹಿಸುತ್ತಿದ್ದೆ ಎಂದರ್ಥ.ಒಂದು ವೇಳೆ ಅನಿಲ ಉತ್ಪಾದನೆ ಆಗದಿದ್ದರೆ,  ಅನಿಲದ ಆಮ್ಲೀಯತೆಯನ್ನು  ಪರೀಕ್ಷೆ ಮಾಡಿಸುವುದು ಅವಶ್ಯಕ.

ಜೈವಿಕ ಅನಿಲ ಉತ್ಪಾದನೆಯ  ನಂತರ  ಯಂತ್ರದಿಂದ ಹೊರಬರುವ ಸಗಣಿಯ ರಾಡಿಯು ಒಂದು ಸಂಪದ್ಭರಿತ  ಗೊಬ್ಬರವಾಗಿರುತ್ತದೆ.ಇದರಲ್ಲಿ ಸಾರಜನಕ, ರಂಜಕ ಹಾಗೂ ಪೋಟ್ಯಾಷ್ ಅಂಶಗಳನ್ನು ಕೊಟ್ಟಿಗೆ ಗೊಬ್ಬರಕ್ಕೆ ಹೋಲಿಸಿದರೆ ಹೆಚ್ಚಿರುತ್ತದೆ. ಈ ಗೊಬ್ಬರದಲ್ಲಿ ಕ್ರೀಯಾಶೀಲವಿರುವ ಹಲವಾರು ಉಪಯುಕ್ತ ಸೂಕ್ಷ್ಮಾಣುಜೀವಿಗಳಿರುತ್ತವೆ. ಈ ಗೊಬ್ಬರದಲ್ಲಿರುವ ಸತ್ವಗಳು ಬೇಗನೆ ಸಸ್ಯಗಳಿಗೆ ಲಭ್ಯವಾಗುತ್ತವೆ. ಬೆಳೆಗಳ ಬೆಳವಣಿಗೆಗೆ ಅವಶ್ಯವಿರುವ ಶೇ25-50ರಷ್ಟು ಸಾರಜನಕವನ್ನು ಈ ಗೊಬ್ಬರ ಒದಗಿಸುತ್ತದೆ.