Agripedia

ಮುಸುಕಿನ ಜೋಳದಲ್ಲಿ ಸೈನಿಕ ಹುಳುವಿನ ಕಾಟ ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳು

30 July, 2021 8:37 PM IST By:

ಇತ್ತೀಚೆಗೆ ನಿರಂತರವಾಗಿ ಸುರಿದ ಜಿಟಿಜಿಟಿ ಮಳೆಯು ಮುಸುಕಿನ ಜೋಳಕ್ಕೆ ಶಾಪವಾಗಿ ಪರಿಣಮಿಸಿದೆ, ಬಾಗಲಕೋಟೆಯ ಸುದ್ದಿಮುತ್ತ ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ ಈಗ ಸೈನಿಕ ಹುಳುವಿನ ಕಾಟ ಹೆಟ್ಟಾಗಿದೆ. ಬಾಗಲಕೋಟೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ಗೋವಿನ ಜೋಳದ ಬೆಳೆಯಲ್ಲಿ ಪರಕೀಯ ಹಾಗೂ ಆಕ್ರಮಣಕಾರಿ ಕೀಟ ಸ್ಪೋಡಾಪ್ಟೀರಾ ಫ್ರೂಜಿಫೆರಡಾ ಹಾವಳಿ ಕಂಡುಬಂದಿದ್ದು ಗೋವಿನ ಜೋಳ ಬೆಳೆದ ರೈತರಲ್ಲಿ ಆತಂಕ ಶುರುವಾಗಿದೆ.

ಸೈನಿಕ ಕೀಟವು ಬೆಳೆಯ ಸುಳಿಯಲ್ಲಿ ಇದ್ದು, ಹಗಲು ರಾತ್ರಿ ಇಡೀ ಚಟುವಟಿಕೆಯಿಂದ ಇದ್ದು ಎಲೆ ತಿನ್ನುತ್ತಾ ಹಾನಿ ಮಾಡುತ್ತಿದೆ. ಈ ಕೀಟವು ಲೆಪಿಡಾಪ್ಟೀರಾ ಗುಂಪಿಗೆ ಸೇರಿದ್ದು ಅಂತರಾಷ್ಟೀಯವಾಗಿ ಕೀಟ ತಜ್ಞರು ಇದನ್ನು ಫಾಲ್ ಆರ್ಮಿವರ್ಮ ಎಂದು ಗುರುತಿಸುತ್ತಾರೆ. ಈ ಕೀಟವು ವಿಶೇಷವಾಗಿ ಆಹಾರ ಧಾನ್ಯಗಳ ಬೆಳೆಗಳಾದ ಗೋವಿನ ಜೋಳ, ಜೋಳ ಹಾಗೂ ಇತರ ಬೆಳೆಗಳನ್ನು ಬಾಧಿಸುತ್ತಿದೆ.
ಈ ಕೀಟವು ತನ್ನ ಜೀವನ ಚಕ್ರವನ್ನು 30-40 ದಿವಸಗಳಲ್ಲಿ ಪೂರ್ಣಗೊಳಿಸಬಲ್ಲದಾಗಿದ್ದು ಫ್ರೌಢ ಪತಂಗವು ಒಂದು ರಾತ್ರಿಯಲ್ಲಿ ಕನಿಷ್ಠ 100 ಕಿ.ಮೀ ದೂರವನ್ನು ಕ್ರಮಿಸಬಲ್ಲದು. ತತ್ತಿಯಿಂದ ಹೊರಬಂದ ಮರಿಹುಳುಗಳು ಸಮೂಹವಾಸಿಯಾಗಿದ್ದು ಮೊದಲು ತತ್ತಿಯ ಸಿಪ್ಪೆಯನ್ನೆ ತಿಂದು ಬದುಕುವವು. ಬಳಿಕ ಗೋವಿನ ಜೋಳದ ಸುಳಿಯಲ್ಲಿ ಉಳಿದುಕೊಂಡು ಸಸ್ಯಗಳ ಹರಿತ್ತನ್ನು ಕೆರೆದು ತಿಂದು ಬದುಕುತ್ತವೆ. ದೊಡ್ಡವಾದಾಗ ಸುಳಿ ಮತ್ತು ಎಲೆಗಳನ್ನು ತಿಂದು ಗಟ್ಟಿಯಾದ ಹಿಕ್ಕೆಗಳನ್ನು ಹಾಕುತ್ತವೆ. ಇದರ ಉಪಟಳದಿಂದಾಗಿ ರೈತ ರೋಸಿಹೋಗಿದ್ದಾನೆ. ಮೋಡ ವಾತಾವರಣ, ಹೆಚ್ಚಿನ ಮಳೆ, ಹೆಚ್ಚಿನ ತೇವಾಂಶ ಮತ್ತು ಕಡಿಮೆ ಉಷ್ಣಾಂಶಗಳಿರುವ ಭಾಗಗಳಲ್ಲಿ ಈ ಕೀಟಗಳ ಹಾವಳಿ ಹೆಚ್ಚಾಗಿದೆ. ಈ ಕೀಟಗಳು ವರ್ಷವಿಡೀ ಬೆಳಗಳಇಗೆ ಕಾಟ ನೀಡವ ವಿಲಕ್ಷಣ ಗುಣವನ್ನು ಹೊಂದಿದೆ.

ಕೀಟಗಳ ನಿಯಂತ್ರಣ

ಎಲೆ ಸುಳಿ ಸೈನಿಕ ಹುಳುವಿನ ನಿಯಂತ್ರಣಕ್ಕಾಗಿ ರೈತರು ಬಿತ್ತನೆ ಪೂರ್ವದಲ್ಲಿ ಆಳವಾದ ಉಳುಮೆ ಮಾಡುವುದರಿಂದ ಕೋಶಗಳನ್ನು ಹೊರಹಾಕಿ ಇಥರ ಪರಭಕ್ಷಕ ಕೀಟಗಳಿಂದ ಮತ್ತು ಸೂರ್ಯನ ಶಾಖದಿಂದ ನಾಶವಾಗುತ್ತವೆ. ತಜ್ಞರು ಶಿಫಾರಸ್ಸು ಮಾಡಿ ಪ್ರಮಾಣದ ಗೊಬ್ಬರ ಮತ್ತು ರಸಗೊಬ್ಬರವನ್ನು ಬಳಸಿ ಬೆಳೆಯನ್ನು ನಿರ್ವಹಣೆ ಮಾಡುವುದರಿಂದಲೂ ರೋಗಬಾಧೆ ತಡೆಯಬಹುದು ಎನ್ನುತ್ತಾರೆ ಕೃಷಿ ತಜ್ಞರು.

ಬೆಳೆಯಲ್ಲಿ ಸೈನಿಕ ಮರಿಹಳು ಕಂಡುಬಂದರೆ ಶೇ. 5 ರಷ್ಟು ಬೇವಿನ ಅಂಶಹೊಂದಿರುವ ಕೀಟನಾಶಕವನ್ನು 5 ಮಿ.ಲೀ ಔಷಧವನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. 2 ಗ್ರಾಂ ಶಿಲೀಂದ್ರವನ್ನು ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಬೆಳೆಗೆ ಸಿಂಪರಣೆ ಮಾಡಬೇಕು.

ಬೆಳೆದ ಹುಳುಗಳನನ್ನು ಹತೋಟಿಯಲ್ಲಿಡಲು ವಿಷ ಪ್ರಾಷಾಣದ ಬಳಕೆಯಾಗಿ 10 ಕೆಜಿ ಗೋಧಿ ತೌಡು ಅಥವಾ ಅಕ್ಕಿ ತೌಡು 1 ಕೆಜಿ ಬೆಲ್ಲಕ್ಕೆ ಬೇಕಾಗುವಷ್ಟು ತಕ್ಕಮಟ್ಟಿಗೆ ನೀರನ್ನು ಬೆರೆಸಿ ಮಾರನೇ ದಿನ 100 ಗ್ರಾಂ ಥೈಯೋಡೈಕಾರ್ಬಾ ಪ್ರತಿ ಕೆಜಿ ಭತ್ತ ತೌಡಿಗೆ 10 ಗ್ರಾಂನಂತೆ ಕೀಟನಾಶ ಮಿಶ್ರಣಮಾಡಿ ಬೆಳೆಯ ಸುಳಿಯಲ್ಲಿ ಉದುರಿಸಬೇಕು. ಕ್ಲೋರೋಫೈರಿಪಾಸ್ ಅಥವಾ ಕ್ವಿನಾಲ್ಯಾಸ್ 2 ಮಿ.ಲೀ  ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಬೆಳೆಯ ಸುಳಿಯಲ್ಲಿ ಸಿಂಪರಣೆ ಮಾಡಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿಯಾಗಿ ಕೀಟನಾಶಕ ಸಿಂಪರಣೆ ಮಾಡಬಹುದು.